ADVERTISEMENT

ತುಂಗಭದ್ರೆ ಖಾಲಿ: ಆತಂಕದಲ್ಲಿ ಜನತೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 9:45 IST
Last Updated 29 ಮಾರ್ಚ್ 2011, 9:45 IST
ತುಂಗಭದ್ರೆ ಖಾಲಿ: ಆತಂಕದಲ್ಲಿ ಜನತೆ
ತುಂಗಭದ್ರೆ ಖಾಲಿ: ಆತಂಕದಲ್ಲಿ ಜನತೆ   

ಮುಂಡರಗಿ: ಗದಗ-ಬೆಟಗೇರಿ ನಗರ ಒಳಗೊಂಡಂತೆ ಜಿಲ್ಲೆಯ ವಿವಿಧ ನಗರ ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ತುಂಗಭದ್ರಾ ನದಿಯು ಸಂಪೂರ್ಣ ವಾಗಿ ಬತ್ತುವ ಹಂತದಲ್ಲಿದ್ದು, ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ಲಕ್ಷಾಂತರ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿಯ ತುಂಗಭದ್ರಾ ನದಿದಂಡೆಯ ಮೇಲಿರುವ ಬೃಹತ್ ಪ್ರಮಾಣದ ನೀರೆತ್ತುವ ಘಟಕದ ಮೂಲಕ ಈವರೆಗೂ ಜಿಲ್ಲೆಯ ವಿವಿಧ ಭಾಗಗಳಿಗೆ ಕುಡಿಯುವ ನೀರು ಪೂರೈಸಲಾ ಗುತ್ತಿತ್ತು.

ಈಗ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಗಣನೀಯ ವಾಗಿ ಕಡಿಮೆಯಾಗಿದ್ದು, ನದಿ ಪಾತ್ರದಲ್ಲಿ ಅಲ್ಲಲ್ಲಿ ಉಂಟಾಗಿರುವ ತಗ್ಗು ಪ್ರದೇಶಗಳಲ್ಲಿ ಮಾತ್ರ ಅಲ್ಪಸ್ವಲ್ಪ ನೀರು ನಿಂತಿದೆ. ಇದರಿಂದಾಗಿ ಬರಲಿರುವ ಮಳೆಗಾಲದವರೆಗೆ ಸಾರ್ವಜನಿಕರಿಗೆ ನೀರು ಪೂರೈಸುವುದು ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಸುಮಾರು ಒಂದು ಟಿ.ಎಂ.ಸಿ ನೀರು ಬಿಡುವುದಕ್ಕೆ ಈಗಾಗಲೇ ಮನವಿ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಭದ್ರಾ ಜಲಾಶಯ ದಿಂದ ಈಗಾಗಲೇ ಒಂದು ಟಿ.ಎಂ.ಸಿ ನೀರನ್ನು ಬಿಡುಗಡೆ ಮಾಡಿದ್ದು, ನೀರು ಇನ್ನು ಎರಡು-ಮೂರು ದಿನಗಳಲ್ಲಿ ಕೊರ್ಲಹಳ್ಳಿ ಗ್ರಾಮವನ್ನು ತಲುಪಬ ಹುದೆಂದು ಅಂದಾಜಿಸಲಾಗಿದೆ.ಭದ್ರಾ ಜಲಾಶಯದಿಂದ ಬಿಟ್ಟಿರುವ ಒಂದು ಟಿ.ಎಂ.ಸಿ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಅಡ್ಡಲಾಗಿ ಉಸುಕಿ(ಮರಳಿ)ನ ತಾತ್ಕಾಲಿಕ ಬೃಹತ್ ತಡೆಗೋಡೆ ನಿರ್ಮಾಣವನ್ನು ಭರದಿಂದ ಪ್ರಾರಂಭಿಸಿದೆ.

ವಾಡಿಕೆಯಂತೆ ಎಪ್ರಿಲ್ ಕೊನೆಯ ವಾರ ಅಥವಾ ಮೇ ತಿಂಗಳಲ್ಲಿ ಉತ್ತಮ ಮಳೆ ಬೀಳದಿದ್ದಲ್ಲಿ ಜಿಲ್ಲೆಯಾದ್ಯಂತ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ತೀವ್ರ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಮುಂಡರಗಿ ಪಟ್ಟಣವನ್ನು ಒಳಗೊಂಡಂತೆ ತುಂಗಭದ್ರಾ ನೀರು ಪೂರೈಕೆಯಾಗುತ್ತಿರುವ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಈಗ ಮೂರ್ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಜನರು ಕುಡಿಯುವ ನೀರಿಗಾಗಿ ಸರದಿಯಲ್ಲಿ ನಿಲ್ಲಬೇಕಾಗಿದೆ.

ಹೆಚ್ಚುತ್ತಿರುವ ಕುಡಿಯುವ ನೀರಿನ ಬೇಡಿಕೆಯನ್ನು ಈಡೇರಿಸಲು ಸ್ಥಳೀಯ ಪುರಸಭೆಯು ಪಟ್ಟಣದ ವಿವಿಧ ಭಾಗಗಳಿಲ್ಲ ಸುಮಾರು ಏಳು ನೂತನ ಕೊಳವೆ ಬಾವಿಗಳನ್ನು ಕೊರೆಯಿಸಿದ್ದು, ಬೇಸಿಗೆಯಲ್ಲಿ ನೀರಿನ ತೊಂದರೆಯಾಗದಂತೆ ಈಗಾಗಲೇ ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ತುಂಗಭದ್ರಾ ನದಿಯು ತುಂಬುವವರೆಗೆ ನದಿ ನೀರು ಪೂರೈಕೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಪುರಸಭೆ ಅಧ್ಯಕ್ಷೆ ರಿಹಾನಾಬೇಗಂ ಕೆಲೂರ, ಉಪಾಧ್ಯಕ್ಷ ಶಿವನಗೌಡ್ರ ಗೌಡ್ರ ಹಾಗೂ ಪುರಸಭೆ ಕಾರ್ಯನಿರ್ವಾಹಕ ಅಧಿಕಾರಿ ಜೆ.ಸಿ. ವಿಣೇಕರ ಸಾರ್ವಜನಿಕರಲ್ಲಿ ಮನವಿ ಮಾಡಿ ಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.