ADVERTISEMENT

ತುಂಡು ಗುತ್ತಿಗೆ ನೀಡದಿರಲು ಆಗ್ರಹ

ಲಕ್ಷ್ಮೇಶ್ವರ ಪುರಸಭೆ ಸಾಮಾನ್ಯ ಸಭೆ; ನೀರು, ಶೌಚಾಲಯಕ್ಕೆ ಪಟ್ಟು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 10:51 IST
Last Updated 24 ಮಾರ್ಚ್ 2018, 10:51 IST

ಲಕ್ಷ್ಮೇಶ್ವರ: ‘ನಗರೋತ್ಥಾನ ಯೋಜನೆಯಡಿ ₹ 5.45 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಈಚೆಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ, ಈ ಕಾಮಗಾರಿಗಳನ್ನು ತುಂಡು ಗುತ್ತಿಗೆ ಕೊಡಬಾರದು. ತುಂಡು ಗುತ್ತಿಗೆಯಿಂದ ಕಳಪೆ ಕಾಮಗಾರಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ’ ಎಂದುಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಹೇಳಿದರು.

ಇಲ್ಲಿನ ಪುರಸಭೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಹೊಗೆಸೊಪ್ಪಿನ ಅವರ ಅಭಿಪ್ರಾಯಕ್ಕೆ ಬಹುತೇಕ ಸದಸ್ಯರು ಬೆಂಬಲ ಸೂಚಿಸಿ ತುಂಡು ಗುತ್ತಿಗೆ ನೀಡಬಾರದು ಎಂದು ಒತ್ತಾಯಿಸಿದರು.

‘ಸೋಮೇಶ್ವರ ರೈತರ ಸಹಕಾರ ಮಿಲ್ಲಿನ ವತಿಯಿಂದ ಪುರಸಭೆಗೆ ಬರಬೇಕಾದ ತೆರಿಗೆ ಬಾಕಿಯನ್ನು ಮನ್ನಾ ಮಾಡದೆ ಸಂಪೂರ್ಣ ವಸೂಲಿ ಮಾಡ
ಬೇಕು’ ಎಂದು ಸದಸ್ಯ ದಾದಾಪೀರ್ ಮುಚ್ಛಾಲೆ ಆಗ್ರಹಿಸಿದರು. ಇದಕ್ಕೆ ಉಳಿದ ಸದಸ್ಯರು ಧ್ವನಿಗೂಡಿಸಿದರು. ‘ಎಲ್ಲ ಸದಸ್ಯರ ಅಭಿಪ್ರಾಯದಂತೆ ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಅಧ್ಯಕ್ಷ ಎಂ.ಆರ್‌.ಪಾಟೀಲ ಭರವಸೆ ನೀಡಿದರು.

ADVERTISEMENT

‘ಪಟ್ಟಣದಲ್ಲಿ ಜಾಹೀರಾತು ದರ ನಿಗದಿಪಡಿಸುವ ವಿಷಯ ಕುರಿತು ನಡೆದ ಚರ್ಚೆಯಲ್ಲಿ ಸದಸ್ಯ ಗಣೇಶ ಬೇವಿನಮರದ ಮಾತನಾಡಿ, ‘ಕೇವಲ ಠರಾವು ಮಾಡಿದರೆ ಸಾಲದು. ಠರಾವಿನ ಪ್ರಕಾರ ಜಾಹೀರಾತುದಾರರಿಂದ ಸೂಕ್ತ ಠೇವಣಿ ಪಡೆಯುವುದನ್ನು ಕಡ್ಡಾಯ ಮಾಡಬೇಕು’ ಎಂದರು.

ಸಭೆ ನಡೆಯುತ್ತಿದ್ದ ವೇಳೆ ಪುರಸಭೆಗೆ ಬಂದ 20ನೇ ವಾರ್ಡ್‌ನ ಮಹಿಳೆಯರು ‘ನಮ್ಮ ವಾರ್ಡ್‌ನಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ನೀರು ಬಿಡುವ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು. 2ನೇ ವಾರ್ಡ್‌ನ ಮಹಿಳೆಯರೂ ಸಹ ಸಭಾಂಗಣಕ್ಕೆ ಬಂದು ಸಾರ್ವಜನಿಕ ಶೌಚಾಲಯ ಕಟ್ಟಿಸಬೇಕು’ ಎಂದು ಪಟ್ಟು ಹಿಡಿದರು.

ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ಅವರು ಮಹಿಳೆಯರನ್ನು ಸಮಾಧಾನ ಪಡಿಸಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಉಪಾಧ್ಯಕ್ಷ ಬಸವ
ರಾಜ ಓದುನವರ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಣ್ಣ ಸುತಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.