ADVERTISEMENT

ತೋಟಗಾರಿಕೆ ಮೂಲ ಸೌಕರ್ಯಕ್ಕೆ 2 ಕೋಟಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 9:50 IST
Last Updated 25 ಫೆಬ್ರುವರಿ 2011, 9:50 IST

ಗದಗ: ಜಿಲ್ಲೆಯಲ್ಲಿ ತೋಟಗಾರಿಕೆ ಮೂಲಭೂತ ಸೌಕರ್ಯ ಕಲ್ಪಿಸಲು 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಾಷ್ಟ್ರೀಯ ಕಿಸಾನ ವಿಕಾಸ ಯೋಜನೆಯ ಕ್ರಿಯಾಯೋಜನೆ ರೂಪಿಸಿ, ಕಾಮಗಾರಿ ಪ್ರಾರಂಭಿಸ ಲಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿ,ಕೆ. ಮೇದಪ್ಪ ಹೇಳಿದರು. ಸ್ಥಳೀಯ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ತೋಟಗಾರಿಕೆ ವ್ಯವಸಾಯ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಕಿಸಾನ ವಿಕಾಸ ಯೋಜನೆಯಂತೆ ತೋಟಗಾರಿಕಾ ಫಾರ್ಮ್‌ನಲ್ಲಿ ರೈತರಿಗೆ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಲು ಉಪನ್ಯಾಸ ಭವನ, ತರಬೇತಿ ಕೇಂದ್ರ ಪ್ರಾರಂಭಿಸಲಾಗುವುದು. ಈ ಯೋಜನೆಯಡಿ ರೈತರು ಬೆಳೆದ ಹುಟ್ಟುವಳಿಗಳ ಮಾರಾಟ ಮಾಡಲು ಅನುಕೂಲವಾಗುವಂತೆ ಸೇವಾ ಕೇಂದ್ರ, ಮಾರಾಟ ವ್ಯವಸ್ಥೆ ರೂಪಿಸಲಾಗು ವುದು. ಈ ಮಾಹಿತಿ ಕೇಂದ್ರದಲ್ಲಿ ರೈತರು ಎಲ್ಲ ಬೆಳೆಗಳ ಬಗ್ಗೆ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ ಅಧ್ಯಕ್ಷತೆ ವಹಿಸಿ, ರಾಜ್ಯ ಸರ್ಕಾರ ಸಾವಯವ ಕೃಷಿಗೆ ಪ್ರಾಮುಖ್ಯತೆ ನೀಡುತ್ತಿದೆ. ಈ ಕೃಷಿಗೆ ವಿದೇಶದಲ್ಲಿ ಅಪಾರ ಬೇಡಿಕೆ ಇದೆ ಎಂದು ಹೇಳಿದರು. ಸಹಕಾರಿ ಸಂಘ ಕೃಷಿಕರು ಹಾಗೂ ಸರ್ಕಾರದ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಎಂ.ಡಿ. ಮಠಪತಿ ತಿಳಿಸಿದರು.

ಶಿರಹಟ್ಟಿಯ ಫಕೀರಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ತೋಟಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಮೇಲಗಿರಿ, ಸದಾನಂದ ಪಿಳ್ಳಿ, ಇಲಾಖೆ ಜಂಟಿ ನಿರ್ದೇಶಕ ಎನ್.ವಿ. ಚಂದ್ರಶೇಖರ, ಸಹಾಯಕ ನಿಬಂಧಕ ಮಹೇಂದ್ರಕರ, ಬಸವರಾಜ ಕೊರ್ಲಹಳ್ಳಿ, ಅಂಬಾಸಾ ರಾಯಭಾಗಿ, ನಿರೂಪಾದಯ್ಯ ಕಾರಡಗಿಮಠ, ರಾಜಗೋಪಾಲ ಕಡ್ಲಿಕೊಪ್ಪ, ರಾಜಪುರೋಹಿತ, ಮಹೇಶ ಮಾನ್ವಿ, ಸುಜಾತಾ ಕಿತ್ತೂರ ಮತ್ತಿತರರು ಹಾಜರಿದ್ದರು. ಸಹನಾ ಪಿಳ್ಳಿ ಪ್ರಾರ್ಥಿಸಿದರು. ವೀರನಗೌಡ ಮುಲ್ಕಿಪಾಟೀಲ ಸ್ವಾಗತಿಸಿದರು. ಈಶ್ವರಪ್ಪ ಹಂಚಿನಾಳ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಹುಬ್ಬಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.