ADVERTISEMENT

ಪಡಿತರ ಚೀಟಿಗಾಗಿ ನಾಗರಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 6:36 IST
Last Updated 17 ಜುಲೈ 2013, 6:36 IST

ನರಗುಂದ: `ವರ್ಷಕ್ಕೊಂದು ಹೊಸ ಕಾಯ್ದೆ ಬಂದ, ಇದ್ದ ಕಾರ್ಡ್ ರದ್ದ ಮಾಡಿ ಅದಕ್ಕ ಹೊಸ ಕಾರ್ಡ್ ತಗೋರಿ ಅಂತಾರ, ಈಗ ಅದಕ್ಕಾಗಿ ರಾತ್ರಿ ಎರಡ ಗಂಟೇಕ ಬಂದ ಪಾಳೆ ಹಚ್ಚೇವಿ,  ಬೆಳಿಗ್ಗೆ ಹತ್ತು  ಗಂಟೆ ಆದ್ರು ಯಾರು ಬರಾಕ ತಯಾರಿಲ್ಲ'ಎಂದು ನಿಂಗಪ್ಪ ಕಳಸಾಪುರ ಅವರ ಮಾತು ಕೇಳಿದರೆ  ಪಟ್ಟಣದಲ್ಲಿ ಹೊಸ ಪಡಿತರ  ಚೀಟಿ ಪಡೆದುಕೊಳ್ಳಲು ತೀವ್ರ ಪರದಾಡಬೇಕಾದ  ಸ್ಥಿತಿ ಎದುರಾಗಿದೆ.

2009ರಲ್ಲಿಯೇ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸಹಸ್ರಾರು ಜನರಿಗೆ  ಭಾವಚಿತ್ರ ಹೊಂದಿದ ಶಾಶ್ವತ ಕಾರ್ಡುಗಳನ್ನು ವಿತರಿಸಲಾಗಿತ್ತು. ಆದರೆ ಅವು ನಿಯಮ ಬದ್ಧ ಇಲ್ಲ ಎಂದು  ಆ ಕಾರ್ಡ್‌ಗಳಲ್ಲಿ ಕೆಲವನ್ನು ರದ್ದು ಮಾಡಿದರೆ, ಕೆಲವು ಕಾರ್ಡುಗಳಿಗೆ ಮೊಬೈಲ್  ಮೂಲಕ ಎಸ್‌ಎಂಎಸ್  ಕಳುಹಿಸಿ  ಕೋಡ್ ಪಡೆದು ಮತ್ತೆ ಕುಟುಂಬದ ಸದಸ್ಯರು ಬೆರಳಚ್ಚು ನೀಡುವ ಕಾನೂನನ್ನು ಜಾರಿಗೆ ತರಲಾಗಿದೆ. ಆದರೆ  ಈ ಕಾರ್ಡುದಾರರು  ಜುಲೈ ತಿಂಗಳಿನ ರೇಷನ್‌ನಿಂದ ವಂಚಿತರಾಗಬೇಕಿದೆ.  ಇದರಿಂದ 2009ರಿಂದ  ಹಿಂದೆ ಪಡೆದ ಶಾಶ್ವತ  ಕಾರ್ಡುದಾರರು  ಹೊಸ ಪಡಿತರ ಚೀಟಿ ಪಡೆಯಲು ಪರದಾಡಬೇಕಾಗಿದೆ.

ಈಗಾಲೇ ರಾಜ್ಯ ಸರ್ಕಾರ 30 ಕೆಜಿ ಅಕ್ಕಿ ವಿತರಿಸುವ  ಯೋಜನೆ  ಜಾರಿಗೆ ತಂದಿದೆ. ಇದರಿಂದ ಮತ್ತಷ್ಟು  ಈ ಸಲ ಬೇಗನೇ ಕಾರ್ಡು ಪಡೆದುಕೊಳ್ಳಲು ಹಾತೊರೆಯುತ್ತಿದ್ದಾರೆ. ಇದರಿಂದ ಹಳೆ ತಹಶೀಲ್ದಾರ ಕಚೇರಿ ಜನಜಂಗುಳಿಯಿಂದ  ಕೂಡಿಕೊಂಡರೆ ಇಲ್ಲಿ ಹಗಲು ಯಾವುದು, ರಾತ್ರಿ ಯಾವುದು  ಎಂಬುದು ತಿಳಿಯುತ್ತಿಲ್ಲ.  ಇದರಿಂದ ಕುಟುಂಬದ ಸದಸ್ಯರು ಎಲ್ಲ ಕೆಲಸ ಬಿಟ್ಟು ಇಲ್ಲಿಗೆ ಬಂದು ಠಿಕಾಣಿ ಹೂಡುವುದು ನಡೆದಿದೆ.

`ಕೇವಲ ದಿನಕ್ಕೆ 50 ಕಾರ್ಡುಗಳ ಬೆರಳಚ್ಚು ಪಡೆಯುತ್ತಿದ್ದು,  ಇತ್ತ ರೇಶನ್ ಸಹಿತ ಜು.20ನೇ ತಾರೀಕಿಗೆ   ಬಂದ್ ಮಾಡ್ತಾರ.  ನಮಗ ರೇಶನ್  ಸಿಗೂದು ಯಾವಾಗ, ಕಾರ್ಡು ಪಡೆಯುವುದು ಯಾವಾಗ ? ಆದ್ದರಿಂದ ಹೆಚ್ಚಿನ ಕಂಪ್ಯೂಟರ್ ಇಟ್ಟು ಬೇಗನೇ ನಮಗೆ ಕಾರ್ಡು ಸಿಗುವಂತೆ ಮಾಡಬೇಕೆಂದು ರಿಯಾಜ್ ಅಹ್ಮದ್ ತಮ್ಮ ಅಳನ್ನು ತೋಡಿಕೊಂಡಿದ್ದು ಕಂಡು ಬಂತು.

   ಜೊತೆಗೆ ರಾತ್ರಿ  ಸರತಿ ಹಚ್ಚಿದ್ದರಿಂದ ಸರತಿ ಸಾಲಿನಲ್ಲಿಯೇ ಮಹಿಳೆಯರು ಚಹಾ ಉಪಹಾರ ಸೇವಿಸಿದ್ದು ಕಂಡು ಬಂತು.  ಪಡಿತರ ಚೀಟಿ ತೊಂದರೆ ಹಾಗೂ ಕಚೇರಿ ಸಮಯ ಕೇಳಿದರೆ ನಮ್ಮ ಸಮಯ ಬೆಳ್ಗಿಗೆ 10.30 ಇದೆ. ಈಗ  ಕಚೇರಿ ಬಾಗಿಲು ತೆರೆಯಲಾಗುವುದೆಂದರು. ಇದರಿಂದ ನಾಗರಿಕರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

2009ರ ಹಿಂದಿನ  ಕಾರ್ಡುಗಳ  ಬದಲಾಗಿ ನೀಡುತ್ತಿರುವ ಹೊಸ ಕಾರ್ಡುಗಳ ಬೇಗನೆ ದೊರೆಯುವಂತೆ ಮಾಡಲು ಹೆಚ್ಚಿನ  ಸಿಬ್ಬಂದಿಯನ್ನು ಒದಗಿಸಿ ತ್ವರಿತವಾಗಿ ಈ ಕಾರ್ಡುಗಳನ್ನು ಸಕ್ರಮಗೊಳಿಸಬೇಕಾಗಿದೆ. ಇಲ್ಲದಿದ್ದಲ್ಲಿ  ನಾಗರಿಕರು ಇದಕ್ಕಾಗಿ ಮತ್ತೇ ರೊಚ್ಚಿಗೇಳುವ ಕಾಲ  ಸನ್ನಿಹಿತವಾಗಿದೆ.  ಇದರ ಬಗ್ಗೆ  ತಾಲ್ಲೂಕಾಡಳಿತ ಗಮನಹರಿಸಬೇಕಾಗಿದೆ.
-ಬಸವರಾಜ ಹಲಕುರ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT