ADVERTISEMENT

ಪಿಯು ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 7:15 IST
Last Updated 14 ಜೂನ್ 2013, 7:15 IST

ಗದಗ: ಕಳೆದ 15-20 ವರ್ಷಗಳಿಂದ ಇತ್ಯರ್ಥವಾಗದೆ ಇರುವ ಪದವಿ ಪೂರ್ವ ಕಾಲೇಜು ಸಿಬ್ಬಂದಿ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ನಿಯೋಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಮನವಿ ಸಲ್ಲಿಸಿತು.

ಬೆಂಗಳೂರಿನ ಸಚಿವರ ಗೃಹ ಕಚೇರಿ ಯಲ್ಲಿ ಸಂಘದ ಗೌರವಾಧ್ಯಕ್ಷ ಪ್ರಾಚಾ ರ್ಯ ಎಸ್.ವಿ.ಸಂಕನೂರ ನೇತೃತ್ವದ ನಿಯೋಗ ಸಚಿವರನ್ನು ಭೇಟಿಯಾಗಿ ಪದವಿ ಪೂರ್ವ ಉಪನ್ಯಾಸಕ, ಪ್ರಾಂಶು ಪಾಲರ ವೇತನ ಶ್ರೇಣಿ ಪರಿಷ್ಕರಣೆ, ಕಾಲ್ಪನಿಕ ವೇತನ, ಗುತ್ತಿಗೆ ಶಿಕ್ಷಕರ ಸಮಸ್ಯೆಗೆ ಪರಿಹಾರ, ನಿಧನ ಮತ್ತು ನಿವೃತ್ತಿಯಿಂದ ಇಲ್ಲಿಯ ವರೆಗೆ ಖಾಲಿ ಯಾಗಿರುವ ಎಲ್ಲ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿತು.

ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಪ್ರತಿ ತಿಂಗಳು ಒಂದನೇ ತಾರೀಖಿಗೆ ಸಂಬಳ ನೀಡುವುದು, ವೈದ್ಯಕೀಯ ಭತ್ಯೆ ಸೌಲಭ್ಯ, ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಸಂಭಾವಣೆಗಳ ಪರಿಷ್ಕರಣೆ, ಐದು ವರ್ಷಗಳ ವರೆಗೆ ಯೋಜನೆಯ ಅಡಿಯಲ್ಲಿ ವೇತನ ಪಡೆದ ಸಿಬ್ಬಂದಿಯನ್ನು ಯೋಜನೇತರ ಅಡಿಗೆ ಒಳಪಡಿಸುವುದು ಹಾಗೂ ಇತರೆ ಬೇಡಿಕೆ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ತುರ್ತಾಗಿ ಸಂಘದ ಪದಾಧಿಕಾರಿಗಳ ಸಭೆ  ಕರೆಯುವಂತೆ ಪದಾಧಿಕಾರಿಗಳು ಆಗ್ರಹಿಸಿದರು.

ನಿಯೋಗದಲ್ಲಿ ಅಧ್ಯಕ್ಷ ಎ. ಎಸ್. ಪಾಟೀಲ, ಕಾರ್ಯಾಧ್ಯಕ್ಷ  ಪ್ರಾಚಾರ್ಯ ಲಿಂಗಯ್ಯ ಹಿರೇಮಠ, ಬಿಜಾಪೂರ ಜಿಲ್ಲಾ ಅಧ್ಯಕ್ಷ ಆರ್. ಬಿ. ಸಂಕದಾಳ, ಜಿಲ್ಲಾ ಕಾರ್ಯಾಧ್ಯಕ್ಷ ಪ್ರಾಚಾರ್ಯ ಎಂ.ಸಿ.ಕಟ್ಟಿಮನಿ, ಖಜಾಂಚಿ ಬಿ.ಆರ್. ರಾಠೋಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ಜಿ. ಎಂ. ಹಕಾರಿ, ಪ್ರಾಚಾರ್ಯ ಎಂ. ಪಿ. ಕರಬಸಪ್ಪ, ಬೆಳಗಾವಿಯ ಜಿಲ್ಲೆಯ ಪದಾಧಿಕಾರಿ ಜಿ. ಬಿ. ನಾಯ್ಕರ, ಪ್ರಾಚಾರ್ಯ ಕೆ. ಎಚ್. ಮರಿಗೌಡರ, ಎಚ್. ಡಿ. ಗಂಟೇರ, ಪದವಿ ಪೂರ್ವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀರಾಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.