ADVERTISEMENT

ಪುಟ್ಟರಾಜರ ಆಶ್ರಯ ಸ್ವಾವಲಂಬನೆಗೆ ಪ್ರೇರಣೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಸಿರುಗುಪ್ಪ: ಪಂಡಿತ್ ಪಂಚಾಕ್ಷರ ಗವಾಯಿಯವರು ಗದುಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿಸದಿದ್ದರೆ, ಪಂಡಿತ್ ಪುಟ್ಟರಾಜ ಗವಾಯಿಯವರ ಆಶ್ರಯ ದೊರೆಯದೇ ಹೋಗಿದ್ದರೆ ಅಂಧರು, ಅನಾಥರಲ್ಲಿ ಹುದುಗಿರುವ ಪ್ರತಿಭೆ ಬೆಳಕಿಗೆ ಬರುತ್ತಿರಲಿಲ್ಲ ಎಂದು ಎಮ್ಮಿಗನೂರಿನ ಅಂಧ ಕಲಾವಿದ ಕೆ.ಎಂ. ಯರ‌್ರಿಸ್ವಾಮಿ ಗವಾಯಿ ಅವರು ಅಭಿಪ್ರಾಯಪಟ್ಟರು.

ಪಂಡಿತ್ ಪುಟ್ಟರಾಜ ಗವಾಯಿಯವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ತಾಲ್ಲೂಕಿನ ಕುಡದರಹಾಳು ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಧ, ಅನಾಥ, ಅಂಗವಿಕಲರು ಜೀವನದಲ್ಲಿ ಸ್ವಾವಲಂಬಿ ಆಗಬೇಕೆಂಬ ಉತ್ತಮ ಉದ್ದೇಶದಿಂದ ಪುಣ್ಯಾಶ್ರಮ ಆರಂಭಿಸಿ, ಪುರಾಣ, ಪ್ರವಚನ ಮತ್ತು  ಸಂಗೀತ ತರಬೇತಿ ನೀಡಿರುವ ಪಂಡಿತ್ ಪಂಚಾಕ್ಷರ ಗವಾಯಿ ಹಾಗೂ ಪುಟ್ಟರಾಜ ಕವಿ ಗವಾಯಿಯವರ ಸೇವೆ ಅವಿಸ್ಮರಣೀಯ ಎಂದರು.

`ಪುಟ್ಟರಾಜ ಕವಿ ಗವಾಯಿಯವರ ಗರಡಿಯಲ್ಲಿ ಸಂಗೀತ ಅಭ್ಯಾಸ ಮಾಡಿ, ನೂರಾರು ವೇದಿಕೆಗಳ ಮೇಲೆ ಸಂಗೀತ ಪ್ರದರ್ಶನ ನೀಡುತ್ತ, ಸಂಗೀತ ಸರಸ್ವತಿಯ ಸೇವೆ ಸಲ್ಲಿಸುತ್ತಿರುವ ಅನೇಕರು ಆ ಮೂಲಕ ದೊರೆಯುವ ಗೌರವಧನದ ಆಧಾರದಲ್ಲೇ ಜೀವನ ನಡೆಸುತ್ತಿದ್ದಾರೆ. ಅದಕ್ಕೆ ನಾನೇ ಉತ್ತಮ ಉದಾಹರಣೆ~ ಎಂದು  ಹೇಳಿದರು.
ಪಂಡಿತ್ ಪುಟ್ಟರಾಜ ಗವಾಯಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಕಲಾವಿದರನ್ನು ಸನ್ಮಾನಿಸಿದ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾತನಾಡಿದರು.

ಇಂತಹ ಪ್ರತಿಭಾವಂತರನ್ನು ಗುರುತಿಸಿ, ಪ್ರೋತ್ಸಾಹಿಸಿ ಸಂಗೀತ ತರಬೇತಿ ನೀಡಿರುವ ಪುಟ್ಟರಾಜರ ಜೀವನ ಆದರ್ಶಮಯ ಎಂದರು.

ಬಾಗೋಡಿ ದತ್ತಪ್ಪ ಸ್ವಾಮಿ, ವಲ್ಲೂರು ಮಹಾಂತಯ್ಯ ಸ್ವಾಮಿ, ಹುಬ್ಬಳ್ಳಿಯ ಅನ್ನಪೂರ್ಣಮ್ಮಾ   ಇದೇ ಸಂದರ್ಭದಲ್ಲಿ  ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಆದೋನಿಯ ವೈ.ಲಕ್ಷ್ಮಣ ತಬಲಾ ಸಾಥ್ ನೀಡಿದರು.  ಶಿವಕುಮಾರ ತಾತಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT