ADVERTISEMENT

ಪೂರ್ವಾಚಾರಿಯ ಜಲಸಾಹಸ

ಮಂಜುನಾಥ ಆರಪಲ್ಲಿ
Published 19 ಜೂನ್ 2011, 9:15 IST
Last Updated 19 ಜೂನ್ 2011, 9:15 IST

ಶಿರಹಟ್ಟಿ: ದಾಖಲೆಗಾಗಿ ಅಥವಾ ಜೀವನ ಭದ್ರತೆಗೆ ಹಲವಾರು ಕ್ರೀಡಾಪಟುಗಳು ಒಂದಿಲ್ಲೊಂದು ಸಾಹಸಗಳನ್ನು ಮಾಡುವುದನ್ನು ಕೇಳಿದ್ದೇವೆ. ನೋಡಿದ್ದೇವೆ. ಇದಕ್ಕೆ ಅಪವಾದ ಎಂಬಂತೆ ತಾಲ್ಲೂಕಿನ ಸೂರಣಗಿ ಗ್ರಾಮದ ಯುವಕ ವಿಶ್ವಕಲ್ಯಾಣ ಅಥವಾ ವಿಶ್ವಶಾಂತಿಗಾಗಿ ನಿತ್ಯ ಜಲಸಾಹಸ ಮಾಡಿ  ಅಚ್ಚರಿ ಮೂಡಿಸುತ್ತಿದ್ದಾರೆ.

ಪೂರ್ವಾಚಾರಿ ರುದ್ರಪ್ಪ ಬಡಿಗೇರ ಅವರ ಜಲಸಾಹಸಗಾಥೆ ಇದು. ಗ್ರಾಮದ ಪಕ್ಕದಲ್ಲಿರುವ ದೊಡ್ಡಬಾವಿಯಲ್ಲಿ ಪ್ರತಿದಿನ ಎರಡು ಮೂರು ಗಂಟೆಗಳ ಕಾಲ ನೀರಿನಲ್ಲಿ ವಿವಿಧ ಯೋಗಾಸನಗಳನ್ನು ಮಾಡುತ್ತಾರೆ. ಪದ್ಮಾಸನ, ಶವಾಸನ, ಧನಸ್ಸಾಸನ, ಸಾವಧಾನ ಸ್ಥಿತಿ ಮತ್ತು ಗಂಟೆಗಟ್ಟಲೇ ನೀರಿನಲ್ಲಿ ನಿದ್ರೆ ಮಾಡುವುದರ ಮೂಲಕ ನೋಡುಗರನ್ನು ಚಕಿತಗೊಳಿಸುತ್ತಾರೆ.

ಚಿಕ್ಕನಿರುವಾಗಲೇ ಈಜುವುದನ್ನು ಕರಗತ ಮಾಡಿಕೊಂಡು ನೀರಿನಲ್ಲಿ ತೇಲುವ ಪ್ರಯತ್ನ ಮಾಡಿದೆ. ನಂತರ ನಿರಂತರ ಕಲಿಕೆ ಮೂಲಕ ಸಾಧನೆ ಮಾಡಲು ಸಾಧ್ಯವಾಯಿತು. ಈ ಸಾಧನೆಗೆ ಯಾವುದೇ ಗುರುವಿನ ನೆರವು ಪಡೆದಿಲ್ಲ.  ಗುರು ಇದ್ದಿದ್ದರೆ ಇನ್ನಷ್ಟು  ಸಾಹಸಗಳನ್ನು ಮಾಡಬಹುದಿತ್ತು ಎನ್ನುತ್ತಾರೆ  ಪೂರ್ವಾಚಾರಿ.

ನೀರಿನ ಮೇಲೆ ಎರಡು ಮೂರು ಗಂಟೆಗಳ ಕಾಲ ನಿದ್ರಾಸನ ಮಾಡುವುದು ಅಷ್ಟು  ಸುಲಭವಲ್ಲ. ಉಸಿರಾಟ ಮತ್ತು ದೇಹದ ಸಂಪರ್ಣ ಸಮತೋಲನ ಕಾಯ್ದುಕೊಂಡ ಮೇಲೆಯೇ  ಅದು ಸಾಧ್ಯವಾಗುತ್ತದೆ ಎನ್ನುತ್ತಾರೆ.
ನನ್ನಂತ ಗ್ರಾಮೀಣ ವ್ಯಕ್ತಿ ಏನಾದರೂಂದು ಸಾಧನೆ ಮಾಡಿ ಮಾದರಿಯಾಗಬೇಕು ಎನ್ನುವುದು ಆಸೆ. ಹೀಗಾಗಿ ಜಲಸಾಹಸ ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ.

ಕಡುಬಡನತನಲ್ಲಿ ಜನಿಸಿ ಕೃಷಿಯನ್ನು ಅವಲಂಬಿಸಿ ಬದುಕುತ್ತಿರುವ ಪೂರ್ವಾಚಾರಿಗೆ ಸೂಕ್ತ ಆಶ್ರಯ ಇಲ್ಲವಾಗಿದೆ. ಆರ್ಥಿಕ ತೊಂದರೆಯೂ ಇದೆ. ಸರ್ಕಾರ ಯುವಕನ ಸಾಧನೆಯನ್ನು ಗುರುತಿಸಿ ಅವರ ಜೀವನಕ್ಕೆ ಆಧಾರವಾಗುವ ರೀತಿಯಲ್ಲಿ ಸರ್ಕಾರ ನೆರವಾದರೆ ಒಳ್ಳೆಯದು ಎನ್ನುತ್ತಾರೆ ಊರವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.