ADVERTISEMENT

ಬರ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 8:15 IST
Last Updated 5 ಮಾರ್ಚ್ 2012, 8:15 IST

ಗದಗ: ಜಿಲ್ಲೆಯ ರೈತರಿಗೆ ಬರ ಪರಿಹಾರದ ಸಮರ್ಪಕ ವಿತರಣೆ, ಗದಗ-ಬೆಟಗೇರಿ ಅವಳಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಪೂರೈಕೆಗೆ ಒತ್ತಾಯಿಸಿ ಜೆಡಿಎಸ್ ವಿದ್ಯಾರ್ಥಿ ಘಟಕದ ಸದಸ್ಯರು ನಗರದಲ್ಲಿ ಬೈಕ್ ರಾಲಿ ನಡೆಸಿ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮಾಧ್ಯಮದವರ ಮೇಲೆ ವಕೀಲರು ನಡೆಸಿದ ಹಲ್ಲೆ ಖಡಿಸಿದ ಪ್ರತಿಭಟನಾಕಾರರು ಬೈಕ್ ರ‌್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯಿಲ್ಲದೆ ಹಾಗೂ ಬೆಳೆ ಇಲ್ಲದೇ ರೈತರು ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳಿಗೆ ಮೇವು ಇಲ್ಲ. ಕುಡಿಯಲು ನೀರು ಇಲ್ಲ. ಅವಳಿ ನಗರದ ಜನತೆಗೆ ಸೇರಿದಂತೆ ಜಿಲ್ಲೆಯ ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಇಂತಹ ಹಲವಾರು ಸಮಸ್ಯೆಗಳು ಜಿಲ್ಲಾದ್ಯಂತ ತಾಂಡವಾಡುತ್ತಿವೆ. ಈ ಕುರಿತು ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಬರಪರಿಹಾರ ಯೋಜನೆ ಪ್ರಾರಂಭಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗದಗ-ಬೆಟಗೇರಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ವ್ಯವಸ್ಥಿತವಾಗಿ ನೀರಿನ ಪೂರೈಕೆಯಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ. ಕೂಡಲೇ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಪತ್ರಕರ್ತರು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ವಕೀಲರನ್ನು ಬಂಧಿಸಿ ಕಠಿಣ ಕ್ರಮ ತೆಗೆದು ಕೊಳ್ಳಬೇಕು. ಪ್ರಜಾ ಪ್ರಭುತ್ವದ ಕಗ್ಗೂಲೆ ಮಾಡಲು ಯತ್ನಿಸಿದ ವಕೀಲರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಮನವಿ ಮೂಲಕ ಈ ಸಂದರ್ಭದಲ್ಲಿ ಆಗ್ರಹಿಸಿದರು.

ಜೆಡಿಎಸ್‌ನ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಮಂಜುನಾಥ ವಿಶ್ವಬ್ರಾಹ್ಮಣ, ವಿದ್ಯಾರ್ಥಿ ಜಿಲ್ಲಾ ಘಟಕ ಅಧ್ಯಕ್ಷ ಮಂಜುನಾಥ ಪರ್ವತ ಗೌಡರ, ಎಂ.ಎಸ್. ಪರ್ವತಗೌಡರ, ಅಮರೇಶ ಬೂದಿಹಾಳ, ಅಂದಾನಪ್ಪ ಅಕ್ಕಿ, ನಾರಾಯಣಪ್ಪ ವಡ್ಡಟ್ಟಿ, ನಾಗ ಭೂಷಣ ಕೊಟಗಿ, ಮಂಜುನಾಥ ರಾಠೋಡ, ಸುಲೇಮಾನ ಭಾಗವಾನ್, ಮಲ್ಲಿಕಾರ್ಜುನ ಅಕ್ಕಿ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.