ಲಕ್ಷ್ಮೇಶ್ವರ: ಮಕರ ಸಂಕ್ರಮಣದ ನಿಮಿತ್ಯ ಇಲ್ಲಿನ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಪ್ರಸಿದ್ಧ ಅಗಸ್ತ್ಯತೀರ್ಥದ ಬಾವಿಗಳಲ್ಲಿ ಜನತೆ ಪುಣ್ಯಸ್ನಾನ ಮಾಡಿ ಪುನೀತರಾದರು. ಬೆಳಿಗ್ಗೆಯಿಂದಲೇ ನೂರಾರು ಭಕ್ತರು ತೀರ್ಥಕ್ಕೆ ಆಗಮಿಸಿ ಸ್ನಾನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಯುವಕರು ಮೇಲಿನಿಂದ ಬಾವಿಯಲ್ಲಿ ಜಿಗಿದು ಖುಷಿ ಪಟ್ಟು ಈಜಾಡಿದರು. ಈ ಬಾರಿ ಬರಗಾಲ ಇದ್ದುದರಿಂದ ಇಲ್ಲಿನ ಎರಡು ಬಾವಿ ಪೈಕಿ ಒಂದರಲ್ಲಿ ನೀರು ಇರಲಿಲ್ಲ. ಪುರಸಭೆಯವರು ಅಲ್ಲಿಯೇ ಇದ್ದ ಬೋರ್ವೆಲ್ ಮೂಲಕ ಬಾವಿಗೆ ನೀರು ಬಿಟ್ಟಿದ್ದರು.
ರೈತರು ಕುಟುಂಬ ಸಹಿತ ಚಕ್ಕಡಿಯಲ್ಲಿ ಬಂದು ಪುಣ್ಯಸ್ನಾನ ಮಾಡಿ ಮನೆಯಿಂದ ತಯಾರಿಸಿ ತಂದಿದ್ದ ಹಬ್ಬದೂಟವನ್ನು ಸಂತೋಷದಿಂದ ಹಂಚಿಕೊಂಡು ಸವಿದರು. ಇಡೀ ದಿನ ಇಲ್ಲಿಯೇ ಇದ್ದು ಸಂಜೆ ಜರುಗಿದ ಜಾತ್ರೆ ಮುಗಿಸಿಕೊಂಡು ಮನೆಗೆ ತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.