ADVERTISEMENT

ಮಹಾತ್ಮಾ ಗಾಂಧೀಜಿ ಪುತ್ಥಳಿ ಭಗ್ನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 8:17 IST
Last Updated 4 ಆಗಸ್ಟ್ 2013, 8:17 IST

ಗದಗ: ತಾಲ್ಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ  ಮಹಾತ್ಮಾ ಗಾಂಧೀಜಿ ಪುತ್ಥಳಿಯನ್ನು  ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಗ್ರಾಮದ ಮಾರುತಿ ದೇವಸ್ಥಾನದ ಎದುರಿನ ಗಾಂಧೀಜಿ ಪುತ್ಥಳಿಗೆ ಕಲ್ಲಿನಿಂದ ಒಡೆದು ಹಾನಿ ಮಾಡಲಾಗಿದೆ. ಪುತ್ಥಳಿ ಭಗ್ನಗೊಂಡಿರುವ ವಿಷಯ ಶನಿವಾರ ಬೆಳಿಗ್ಗೆ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಯಿತು.

ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಕೆಲಕಾಲ ರಸ್ತೆತಡೆ ನಡೆಸಿದ ಗ್ರಾಮಸ್ಥರು, ಆ. 15 ರೊಳಗೆ ಪುತ್ಥಳಿ ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. `ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗುವುದು.

ಗಾಂಧೀಜಿ ಪುತ್ಥಳಿ ಮರು ಸ್ಥಾಪಿಸಲಾಗುವುದು' ಎಂದು ಡಿವೈಎಸ್‌ಪಿ ಕುಂಬಾರ ಭರವಸೆ ಮೇರೆಗೆ ಪ್ರತಿಭಟನೆ ಹಿಂತೆಗೆದುಕೊಂಡು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಭಗ್ನಗೊಂಡಿರುವ ಪುತ್ಥಳಿಯನ್ನು ಬಿಳಿ ಹೊದಿಕೆಯಿಂದ ಮುಚ್ಚಲಾಗಿದೆ.

ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ, ತಹಶೀಲ್ದಾರ್ ಜಯಶ್ರೀ ಸಿಂತ್ರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಎಂ. ಪಿಡಶೆಟ್ಟಿ, ಕಂದಾಯ ನಿರೀಕ್ಷಕ ಬಿ. ಎಸ್. ಖನ್ನೂರ, ಸಿಪಿಐ ಎನ್. ಎ. ಅಂಬಲಿ, ಪಿಎಸ್‌ಐ ಎಲ್. ಕೆ. ಜೂಲಕಟ್ಟಿ, ಎಎಸ್‌ಐ ಐ.ಡಿ. ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ ಹಿತರಕ್ಷಣಾ ಸಮಿತಿ ರಾಜ್ಯ ಉಪಾಧ್ಯಕ್ಷ ಅರುಣ ಅಣ್ಣಿಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಲಮಾಣಿ, ಸದಸ್ಯರಾದ ಫಕ್ಕೀರಪ್ಪ ಜಡಿ, ಮಲ್ಲಪ್ಪ ಹೊಸಳ್ಳಿ, ಗಣೇಶ ಜಡಿ, ಅರವಿಂದ್ರಪ್ಪ ಚಿಕ್ರಣ್ಣವರ, ಕರಿಯಪ್ಪ ಜಡಿ, ಸುರೇಶ ಉಮ್ಮಣ್ಣವರ ಹಾಲಯ್ಯ ಹಿರೇಮಠ, ಹನಮಂತಪ್ಪ ಹೊಸಳ್ಳಿ, ಮೈಲಾರಪ್ಪ ದೊಡಮನಿ, ಮಲ್ಲಪ್ಪ ಹೊಂಬಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ವರು ಆರೋಪಿಗಳ ಬಂಧನ, ಮತ್ತೊಬ್ಬ ನಾಪತ್ತೆ
ಗದಗ: ಅಡವಿಸೋಮಾಪುರದಲ್ಲಿ ಗಾಂಧೀಜಿ ಪುತ್ಥಳಿ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಗ್ರಾಮದ ಯುವಕರಾದ ರಮೇಶ, ಸಂತೋಷ, ಶ್ರವಣ ಕುಮಾರ ಮತ್ತು ಮಂಜುನಾಥ ಬಂಧಿತ ಆರೋಪಿಗಳು. ಕೃತ್ಯವೆಸಗಲು ಪ್ರಚೋದನೆ ನೀಡಿದ ಮತ್ತೊಬ್ಬ ಆರೋಪಿ ಈರಪ್ಪ ದರೋಜಿ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಶೋಧ ಮುಂದುವರಿದಿದೆ. ಘಟನೆ ನಡೆದು ಹನ್ನೆರಡು ಗಂಟೆಯಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಎಲ್.ಕೆ.ಜೂಲ್‌ಕಟ್ಟಿ ನೇತೃತ್ವದ ತಂಡ ಆರೋಪಿಗಳನ್ನು ಡೋಣಿ ಗ್ರಾಮದ ಕ್ರಾಸ್‌ನಲ್ಲಿ ಬಂಧಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್. ಡಿ.ಶರಣಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಮದ ಹಿರಿಯ ಈರಪ್ಪ ದರೋಜಿ ಅವರು, `ಗ್ರಾಮದಲ್ಲಿ ಕರ್ಫ್ಯೂ ಜಾರಿಯಾಗುವಂತೆ ಮಾಡುವ ಗಂಡಸರು ಯರು ಇಲ್ಲವೇ' ಎಂಬ ಪ್ರಚೋದನೆ ಹೇಳಿಕೆ ನೀಡಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿದ ಯುವಕರು ರಾತ್ರಿ ಪುತ್ಥಳಿಯನ್ನು ಕಲ್ಲಿನಿಂದ ಜಜ್ಜಿ ಭಗ್ನಗೊಳಿಸಿದ್ದಾರೆ. ವಿಚಾರಣೆ ವೇಳೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣ ಭೇದಿಸಿದ ಪೊಲೀಸ್ ತಂಡದ ಸದಸ್ಯರಿಗೆ ನಗದು ನೀಡಲಾಗುವುದು ಎಂದು ಎಸ್ಪಿ ವಿವರಿಸಿದರು. ಡಿವೈಎಸ್‌ಪಿ ವಿ.ವಿ.ಕುಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT