ಗದಗ: ಇತ್ತೀಚಿಗೆ ಜರುಗಿದ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಗದಗ ಜಿಲ್ಲಾ ಪಂಚಾಯ್ತಿ ವತಿಯಿಂದ ಭಾಗವಹಿಸಿದ್ದ ‘ದ್ವೇಷ ಬಿಡು, ಪ್ರೀತಿ ಮಾಡು’ ಎಂಬ ಸಂದೇಶ ಹೊಂದಿದ ಜಿಲ್ಲೆಯ ಶಿರಹಟ್ಟಿಯ ಫಕ್ಕೀರಸ್ವಾಮಿ ಮಠದ ಮಾದರಿಯ ಸ್ತಬ್ಧ ಚಿತ್ರಣಕ್ಕೆ ಪ್ರಥಮ ಬಹುಮಾನ ಲಭಿಸಿದೆ.
ಸ್ತಬ್ಧ ಚಿತ್ರಣದ ಮುಂಭಾಗದಲ್ಲಿ ನಗಾರಿಖಾನೆ ಮತ್ತು ಎದುರಲ್ಲಿ ಸ್ಥಾಪಿಸಿದ ಫಕ್ಕೀರೇಶ್ವರ ಮೂರ್ತಿ ಆಕರ್ಷಣೆಯಾಗಿತ್ತು. ಹಿಂಭಾಗದಲ್ಲಿ ಸಂಪೂರ್ಣ ಮಠದ ಮಾದರಿ, ಮಧ್ಯ ಭಾಗದಲ್ಲಿ ಮಠಕ್ಕೆ ಹೋಗುತ್ತಿರುವ ಭಕ್ತರ ದೃಶ್ಯ, ಹಿಂದೂ-ಮುಸ್ಲಿಂ ಭಾವೈಕ್ಯತೆ ಎದ್ದು ಕಾಣುತ್ತಿರುವುದನ್ನು ಜಂಬೂ ಸವಾರಿಯಲ್ಲಿ ನೆರೆದ ಜನಸ್ತೋಮ ಉತ್ಸುಕತೆಯಿಂದ ವೀಕ್ಷಿಸಿದರು.
ಕಳೆದ 2010 ರಲ್ಲಿ ಜಿಲ್ಲಾ ಪಂಚಾಯ್ತಿ ವತಿಯಿಂದ ತಯಾರಿಸಿದ ಗದುಗಿನ ಪುಟ್ಟರಾಜ ಕವಿ ಗವಾಯಿಗಳ ಸ್ತಬ್ಧ ಚಿತ್ರಣಕ್ಕೆ ರಾಜ್ಯಕ್ಕೆ ಎರಡನೇ ಸ್ಥಾನ ಬಂದಿದ್ದು ಇಲ್ಲಿ ಸ್ಮರಿಸಬಹುದು.ಈ ಬಾರಿಯ ಜಂಬೂ ಸವಾರಿಯಲ್ಲಿ ಗದುಗಿನ ಕಲಾವಿದರು ತಯಾರಿಸಿದ ಕೊಪ್ಪಳ ಜಿಲ್ಲೆಯ ಸ್ತಬ್ದ ಚಿತ್ರಣಕ್ಕೆ ದ್ವಿತೀಯ ಸ್ಥಾನ ಲಭಿಸಿದ್ದು ವಿಶೇಷ.
ಜಿಲ್ಲೆಯ ಕಲಾವಿದರಾದ ಫಕ್ಕೀರೇಶ ಕುಳಗೇರಿ, ರವಿ ಶಿಶುವಿನಹಳ್ಳಿ, ಶಹಜಹಾನ ಮುದಕವಿ, ಎನ್. ಬಿ. ಪರ್ವತಗೌಡ್ರ, ಗಿರೀಶ ಕದಂ, ಜಿ. ಕೆ. ಬಡಿಗೇರ, ಹರೀಶ ಪತ್ತಾರ ಸೇರಿದಂತೆ 20 ಜನ ಕಲಾವಿದರು ಚಿತ್ರವನ್ನು ತಯಾರಿಸಿದ್ದಾರೆ. ಶಿರ ಹಟ್ಟಿಯ ಫಕ್ಕೀರಸ್ವಾಮಿ ಮಠ ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಡಾ. ಎಸ್. ಆರ್. ನಾಗನೂರ ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.