ADVERTISEMENT

ರೋಣ ಬಂದ್: ಸಂಪೂರ್ಣ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 6:25 IST
Last Updated 14 ಅಕ್ಟೋಬರ್ 2011, 6:25 IST

ರೋಣ: ರೋಣ ತಾಲ್ಲೂಕನ್ನು ಬರಪೀಡಿತವೆಂದು ಸರ್ಕಾರ ಘೋಷಿಸಬೇಕೆಂದು ಆಗ್ರಹಿಸಿ ಗುರುವಾರ ನಡೆದ ರೋಣ ಬಂದ್ ಸಂಪೂರ್ಣ ಯಶಸ್ವಿಯಾಗಿತ್ತು.ಈ ಸಂದರ್ಭದಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ರೈತ ಕಾರ್ಮಿಕರು ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ವ್ಯಕ್ತಪಡಿಸಿದರು. ಉಳಿದಂತೆ ಬಂದ್ ಶಾಂತಿಯುತವಾಗಿ ನಡೆಯಿತು.

`ಸರಕಾರವು ಬರಗಾಲಪೀಡಿತ ಪ್ರದೇಶಗಳು ಎಂದು ಘೋಷಿಸಿದ 84 ತಾಲೂಕುಗಳಲ್ಲಿ ರೋಣ ತಾಲ್ಲೂಕನ್ನು ಕಡೆಗಣಿಸಿರುವುದನ್ನು ನೋಡಿದರೆ ಜನಪ್ರತಿನಿಧಿಗಳ ನಿರ್ಲಕ್ಷವೇ ಕಾರಣ~ ಎಂದು ರೋಣ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಹೇಳಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರಕ್ಕೆ ವರದಿ ಸಲ್ಲಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿರುವುದರಿಂದಲೇ ತಾಲೂಕಿನ ರೈತರು ಇಂತಹ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಹೇಳಿದರು.

ತಾ.ಪಂ. ಸದಸ್ಯೆ ಗಾಯಿತ್ರಿ ನಾಗನೂರ, ಮಾಜಿ ಶಾಸಕ ಜಿ.ಎಸ್. ಪಾಟೀಲ, ಕಾಡಾ  ಮಾಜಿ ಅಧ್ಯಕ್ಷ ವೀರಣ್ಣ ಶೆಟ್ಟರ,  ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎಸ್. ಕೆಂಗಾರ ಮಾತನಾಡಿ, ತಾಲೂಕನ್ನು ಬರಪೀಡಿತವೆಂದು ಘೋಷಿಸಬೇಕೆಂದು ಆಗ್ರಹಿಸಿದರು.

ಸರಕಾರ ನಮ್ಮ ತಾಲೂಕಿಗೆ ತಾರತಮ್ಯ ಮಾಡುತ್ತಿದೆ. ಜನರು ಹೇಗಾದರೂ ಜೀವನ ಸಾಗಿಸಬಹುದು. ಆದರೆ ಜಾನುವಾರುಗಳ ಸ್ಥಿತಿ ತುಂಬಾ ಶೋಚನಿಯವಾಗಿದೆ. ರೈತರು ಕಡಿಮೆ ಬೆಲೆಯಲ್ಲಿ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ರೋಣ ತಾಲೂಕನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಿಸುವಂತೆ ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಐ.ಎಸ್.ಪಾಟೀಲ, ಸಂಗು ನವಲಗುಂದ, ಶಿವಕುಮಾರ ಬೆಲ್ಲದ ಇತರರು ಹಾಜರಿದ್ದರು.
ಮನವಿ ಸಲ್ಲಿಕೆತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಬೇಕು. ಕೂಡಲೇ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಜಿ.ಎಸ್. ಪಾಟೀಲ ಅವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷೆ ಸುಮಂಗಲಾ ಪಾಟೀಲ. ಉಪಾಧ್ಯಕ್ಷ, ಯುಸೂಫ್ ಇಟಗಿ. ಗಾಯಿತ್ರಿ ನಾಗನೂರ, ಸುರೇಶ ಜಗ್ಗಲ, ಸಂಜಯ ದೊಡ್ಡಮನಿ, ಉಮೇಶ ರಾಠೋಡ, ಶಿವಕುಮಾರ ಬೆಲ್ಲದ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.