ADVERTISEMENT

ವಿದ್ಯಾರ್ಥಿಗಳು ಗ್ರಾಹಕ ಶಿಕ್ಷಣ ಹೊಂದಲಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 5:30 IST
Last Updated 6 ಫೆಬ್ರುವರಿ 2012, 5:30 IST

ಗದಗ: `ವಿದ್ಯಾರ್ಥಿಗಳು ಗ್ರಾಹಕ ಶಿಕ್ಷಣದ ಕುರಿತು ಜ್ಞಾನ ಪಡೆದು ಪಾಲಕರು ಹಾಗೂ ಸಾರ್ವಜನಿಕರನ್ನು ಜಾಗೃತಗೊಳಿಸಬೇಕು~ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಅಭಿಪ್ರಾಯಪಟ್ಟರು. 

ಮುಂಡರಗಿ ತಾಲ್ಲೂಕಿನ ಮೇವುಂಡಿ ಗ್ರಾಮದ  ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಗ್ರಾಹಕ ಕ್ಲಬ್ ಹಾಗೂ ಇಕೋ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು. 

`ಇಂದಿನ ವಿದ್ಯಾರ್ಥಿಗಳು ಜೀವನಕ್ಕೆ ಅತೀ ಅವಶ್ಯಕವಾದ ಗ್ರಾಹಕ ಶಿಕ್ಷಣ, ಪರಿಸರ ಶಿಕ್ಷಣ, ಸಂವಿಧಾನದ  ಅರಿವು ಪಡೆಯಬೇಕು. ಸಂಚಾರಿ ನಿಯಮಗಳ ಕುರಿತು ತಿಳುವಳಿಕೆ ಪಡೆದುಕೊಂಡು ಜನರಲ್ಲಿ ಮಾಹಿತಿ ನೀಡಬೇಕು~ ಎಂದು ಅವರು ಸಲಹೆ ನೀಡಿದರು.

ಮುಂಡರಗಿ ವಲಯ ಅರಣ್ಯಧಿಕಾರಿ ಪರಿಮಳಾ ಮಾತನಾಡಿ, `ನಾಗರಿಕರು ಆಸೆಗಳನ್ನು ಹೊಂದಿರಲಿ. ಆದರೆ ಅತಿಯಾದ ದುರಾಸೆಯಿಂದ ಮರಗಳನ್ನು ಕಡಿಯಬಾರದು. ಹಿಂದಿನಿಂದ ಬಂದಿರುವ ಕೆಲವು ಸಾಮಾಜಿಕ, ಧಾರ್ಮಿಕ ಗೊಡ್ಡು ಸಂಪ್ರದಾಯಗಳನ್ನು ಬಿಟ್ಟು ವೈಜ್ಞಾನಿಕವಾಗಿ ಯೋಚಿಸಿ ಪರಿಸರವನ್ನು ರಕ್ಷಿಸಬೇಕು. ವಿದ್ಯಾರ್ಥಿಗಳು ಒಂದೊಂದು ಸಸಿಯನ್ನು ದತ್ತು ತೆಗೆದುಕೊಂಡು ರಕ್ಷಿಸುವ ಕಾಳಜಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿ ಕೊಳ್ಳಬೇಕು~ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಶರಣು ಗೋಗೇರಿ ಮಾತನಾಡಿ, `ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಮೂಲಕ ಪರಿಸರ ಸಂರಕ್ಷಣೆಗಾಗಿ ಇಕೊ ಕ್ಲಬ್‌ನ್ನು ಹಾಗೂ ಗ್ರಾಹಕ ಶಿಕ್ಷಣದ ಜಾಗೃತಿಗಾಗಿ ಗ್ರಾಹಕ ಕ್ಲಬ್ ಅನ್ನು ಪ್ರತಿಯೊಂದು ಶಾಲೆಯಲ್ಲಿಯೂ ಜಾರಿ ಗೊಳಿಸಿರುವುದು ಸ್ತುತ್ಯಾರ್ಹವಾಗಿದೆ. ಈ ಕ್ಲಬ್‌ಗಳ ಮೂಲಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಸರ್ಕಾರದ ಯೋಜನೆಗಳು ಸಫಲತೆ ಕಾಣುತ್ತವೆ~ ಎಂದರು.

ಗ್ರಾಹಕ ಕ್ಲಬ್‌ನ್ನು ಬಿ.ಕೆ. ಕಟ್ಟೆಣ್ಣವರ ಉದ್ಘಾಟಿಸಿದರು. ಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರಬಂಧ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಡೆಸಿದರು,

ಪಿ.ಆರ್.ನಡುವಿನಹಳ್ಳಿ,  ಬಿ.ಎನ್‌ನದಾಫ, ಎನ್.ಎಂ. ಚಿತ್ರಗಾರ, ಶೌಕತ್ ಅಲಿ, ತಳವಾರ, ಚಂದಾವರಿ, ತಿಮ್ಮೋಪೂರ, ಹಳೆಮನಿ, ಈರಗಾರ, ಅಕ್ಕಮ್ಮ, ಎ.ಕೆ.ಉಮಚಗಿ ಮತ್ತಿತರರು ಹಾಜರಿದ್ದರು. ಸುವರ್ಣ ಹಿರೇಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎಲ್.ಎಚ್. ಯಣ್ಣಿ ಸ್ವಾಗತಿಸಿದರು. ಬಿ.ಬಿ.ಬೆನಕನವಾರಿ ನಿರೂಪಿಸಿದರು. ವಿ.ಡಿ.ಶಿರಗುಂಪಿ ವಂದಿಸಿದರು. ಇದೇ ಸಂದರ್ಭದಲ್ಲಿ ಸಸಿಗಳನ್ನು ನೆಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.