ADVERTISEMENT

ವಿವೇಕಾನಂದರ ಆದರ್ಶ ಮಾದರಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 7:45 IST
Last Updated 19 ಜನವರಿ 2012, 7:45 IST

ಗಜೇಂದ್ರಗಡ: ವಿಶ್ವ ಯುವ ಸಮೂಹವನ್ನು ಭಾರತದತ್ತ ತಿರುಗಿ ನೋಡುವಂತೆ ಮಾಡಿ, ಯುವಶಕ್ತಿ ಏನೇಂಬುದನ್ನು ತೋರಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತದೆ ಎಂದು ಕೆ.ಎಸ್.ಎಸ್ ಸಂಸ್ಧೆಯ ಸ್ಧಳೀಯ ಅಧ್ಯಕ್ಷ ಬಿ.ಎಫ್‌ಅವಾರಿ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ರಾಷ್ಟ್ರದ ಯುವ ಶಕ್ತಿಗೆ ವಿವೇಕಾನಂದರ ಜೀವನ ಶೈಲಿ ಹಾಗೂ ತತ್ವಾದರ್ಶಗಳು ಮಾದರಿಯಾಗಿವೆ. ಈ ನಿಟ್ಟಿನಲ್ಲಿ ಯುವಕರು ಅವುಗಳನ್ನು ರೂಢಿ ಸಿಕೊಂಡು ಆದರ್ಶಯುತ ಬದುಕು ರೂಪಿಸಿ ಕೊಳ್ಳಬೇಕಿದೆ ಎಂದರು.

ರಾಷ್ಟ್ರದ ಯುವಕರು ಸಾಧನೆ ಮಾಡುವ ತವಕದಲ್ಲಿದ್ದಾರೆ. ಆದರೆ, ಗುರಿ ತಲುಪುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಪರಿಣಾಮ ಭವಿಷ್ಯತ್ತಿನ ಕನಸು ಸಾಕಾರಗೊಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.

ಯುವಕರು ದುರ್ಬಲರೆಂದು ಭಾವಿಸಬಾರದು. ಅದೇ ದೊಡ್ಡ ಮಹಾಪರಾಧ. ಸಾಧಿಸುವ ಇಚ್ಛಾಶಕ್ತಿ ಹೊಂದಿದ್ದರೆ ಆರ್ಧ ಗುರಿ ತಲುಪಿದಂತೆ. ನಮ್ಮ ಕಣ್ಣುಗಳೆರಡು ನಾವಂದುಕೊಂಡ ಗುರಿ ನೋಡುತ್ತಿರಬೇಕು. ಅಕ್ಕ-ಪಕ್ಕಕ್ಕೂ ಕಣ್ಣಾಡಿಸಬಾರದು ಎಂದ ವಿವೇಕಾನಂದರ ಸಂದೇಶವನ್ನು ನೆನಪಿನಲ್ಲಿಟ್ಟುಕೊಂಡು ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.

ಯುವಕರಿಗೆ ಸ್ಫೂರ್ತಿ ತುಂಬುವ ದಿಸೆಯಲ್ಲಿ ಸ್ವಾಮಿ ವಿವೇಕಾನಂದರು ಪ್ರೇರಕ ಶಕ್ತಿಯಾಗಿದ್ದರು. ಜಾತಿ ನಿರ್ಮೂಲನೆಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು. ಜಾತಿಭೇದಗಳಿಲ್ಲದೆ ನಾವೆಲ್ಲರೂ ಭಾರತೀಯರೆಂಬ ದೃಷ್ಟಿಕೋನದಲ್ಲಿ ಜೀವಿಸುವುದು ಎಲ್ಲರಿಗೂ ಒಳಿತು. ಭಾರತದಲ್ಲಿ ವಿವಿಧ ಜಾತಿ ಧರ್ಮ, ಆಚಾರ-ವಿಚಾರ ಸಾಂಪ್ರದಾಯಗಳು ಆಚರಣೆಯಲ್ಲಿವೆ.  ಜಾತಿ ವಿಚಾರ ಕೆದಕಿ ಶಾಂತಿ ಕದಡುವುದು ಸರಿಯಲ್ಲ ಎಂಬ ವಿವೇಕಾನಂದರ ತತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಚಾರ್ಯ ಡಿ.ಎಸ್.ಗಾಳಿ ಮಾತನಾಡಿ, ಪ್ರಸ್ತುತ ರಾಷ್ಟ್ರದಲ್ಲಿನ ಭ್ರಷ್ಟಾಚಾರ ದೊಡ್ಡ ಸಮಸ್ಯೆಯಾಗಿ ಆವರಿಸಿದೆ. ಈ ಅನಿಷ್ಠವನ್ನು ಬುಡಸ ಮೇತ ಕೀಳದಿದ್ದಲ್ಲಿ ಭವ್ಯ ಭಾರತ ಅವಸಾನದತ್ತ ತಲುಪುತ್ತದೆ. ಇಂತಹ ಸಂದರ್ಭದಲ್ಲಿ ಯುವಕರು ಸ್ವಾಮಿ ವಿವೇಕಾನಂದರ ಚಿಂತನೆ ಮೈಗೂಡಿಸಿಕೊಂಡು ದೇಶದ ರಕ್ಷಣೆಗೆ ಸಿದ್ದರಾಗಬೇಕು ಭ್ರಷ್ಟಾಚಾರ, ಸ್ವಾರ್ಥ ರಾಜಕಾರಣ, ಬಡತನ, ಜಾತೀಯತೆ ಸಮ–ಸ್ಯೆಗಳನ್ನು ತೊಳೆದು ಹಾಕಲು ಹೋರಾಡಬೇಕಿದೆ ಎಂದರು.

ಪ್ರಾಚಾರ್ಯ ಎಚ್.ಎನ್.ಗೌಡರ, ಎನ್.ಎಚ್.ಜೂಚನಿ, ಎಂ.ಕೆ.ಬೆವಿನಕಟ್ಟಿ, ಜಿ.ಜಿ.ಕುಲಕರ್ಣಿ, ಎ.ಎಂ. ಜಾಲಿಹಾಳ, ತುಳಸಾ ಅರಮನಿ, ರೇಣುಕಾ ತಿರಕೋಜಿ ಉಪಸ್ಧಿತರಿದ್ದರು.

ಯು.ಎಸ್.ಮಲ್ಲಾಪೂರ ಸ್ವಾಗತಿಸಿದರು. ರವೀಂದ್ರ ಪತ್ತಾರ ನಿರೂಪಿಸಿದರು. ಎಸ್.ಎಸ್.ಲೆಕ್ಕಿಹಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.