ADVERTISEMENT

ವೀರಭದ್ರೇಶ್ವರ ಜಾತ್ರೆ: ಭಕ್ತರ ಕೆಂಡ ಸೇವೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 10:54 IST
Last Updated 17 ಏಪ್ರಿಲ್ 2013, 10:54 IST
ಮುಂಡರಗಿ ತಾಲ್ಲೂಕಿನ ಸಿಂಗಟಾಲೂರಕ್ಷೇತ್ರದ ವೀರಭದ್ರೇಶ್ವರ ಜಾತ್ರೆಯ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಕೆಂಡಸೇವೆಯಲ್ಲಿ ಸಾವಿರಾರು ಭಕ್ತರು ಭಯ ಭಕ್ತಿಯಿಂದ ಅಗ್ನಿ ಹಾಯ್ದು ಹರಕೆ ತೀರಿಸಿದರು.
ಮುಂಡರಗಿ ತಾಲ್ಲೂಕಿನ ಸಿಂಗಟಾಲೂರಕ್ಷೇತ್ರದ ವೀರಭದ್ರೇಶ್ವರ ಜಾತ್ರೆಯ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಕೆಂಡಸೇವೆಯಲ್ಲಿ ಸಾವಿರಾರು ಭಕ್ತರು ಭಯ ಭಕ್ತಿಯಿಂದ ಅಗ್ನಿ ಹಾಯ್ದು ಹರಕೆ ತೀರಿಸಿದರು.   

ಮುಂಡರಗಿ: ತಾಲ್ಲೂಕಿನ ಸಿಂಗಟಾ ಲೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಜರುಗಿದ ಅಗ್ನಿ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಯ ಭಕ್ತಿಯಿಂದ ಅಗ್ನಿ ಹಾಯುವ ಮೂಲಕ ಕೆಂಡ ಸೇವೆ ಸಲ್ಲಿಸಿದರು. ವೃದ್ಧರು, ಯುವಕರು, ಚಿಕ್ಕ ಮಕ್ಕಳು ಹಾಗೂ ಎಲ್ಲ ವಯೋಮಾನದ ಮಹಿಳೆಯರು ಕೆಂಡ ಸೇವೆಯಲ್ಲಿ ಪಾಲ್ಗೊಂಡಿದ್ದು ವಿಶೇಷ ವಾಗಿತ್ತು.

ಮುಂಜಾನೆ 9ಗಂಟೆಗೆ ಪ್ರಾರಂಭವಾದ ಅಗ್ನಿ ಮಹೋತ್ಸವ 11ಗಂಟೆಯವರೆಗೂ ಜರುಗಿತು. ದೇವಸ್ಥಾನದ ಮುಂಭಾಗದಲ್ಲಿ ಹರಿದಿರುವ ತುಂಗಭದ್ರಾ ನದಿಯಲ್ಲಿ  ಬೆಳಿಗ್ಗೆ ಸ್ನಾನ ಪೂರೈಸಿದ ಸಾವಿರಾರು ಭಕ್ತರು ನಂತರ ಹಲವಾರು ನಂದಿಕೋಲು ಮತ್ತು ಸಮ್ಮಾಳದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ, ವೀರಾವೇಶದಿಂದ ಕುಣಿದು ಅಗ್ನಿ ಕುಂಡದತ್ತ ಸಾಗುತ್ತಿದ್ದರು. ಪುರವಂತರ ಹಿಂದೆ ಅಲಕೃತ ವೀರಭದ್ರೇಶ್ವರನ ಪಲ್ಲಕ್ಕಿ ಸಾಗುತ್ತಿತ್ತು.

ಮಾರ್ಗ ಮಧ್ಯದಲ್ಲಿ ಬೆಳ್ಳಿ, ತಾಂಬ್ರ ಹಾಗೂ ಪಂಚಲೋಹಗಳಿಂದ ನಿರ್ಮಿಸಿದ ವಿವಿಧ ಗಾತ್ರದ ಮತ್ತು ವಿವಿಧ ಅಳತೆಯ ಶಸ್ತ್ರಗಳನ್ನು ಕೆನ್ನೆಯ ಒಂದು ಬದಿಗೆ ಚುಚ್ಚಿಕೊಂಡು ಕೆನ್ನೆಯ ಇನ್ನೊಂದು ಬದಿಯಿಂದ ಹೊರ ತಗೆಯುತ್ತಿದ್ದ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸಿತ್ತು.

ಮಹಿಳೆಯರು, ಮಕ್ಕಳು ವೃದ್ಧರು ಶಸ್ತ್ರ ಚುಚ್ಚಿಕೊಳ್ಳುವ ಮೂಲಕ ಹರಕೆ ತೀರಿಸಿದರು. 

ಕೆಂಡ ಸೇವೆ: ಹಲವರಿಗೆ  ಗಾಯ: ವೀರಭದ್ರೇಶ್ವರನ ಅಗ್ನಿ ಮಹೋತ್ಸವದಲ್ಲಿ ಅಗ್ನಿ ಹಾಯುವಾಗ ಆಕಸ್ಮಿಕವಾಗಿ ಅಗ್ನಿಕುಂಡದಲ್ಲಿ ಬಿದ್ದು, ಸಿಂಗಟಾಲೂರಿನ ಶಿವಪ್ಪ ಕಲ್ಲೇದೇವರ, ಶಂಬು ಬ್ಯಾಳಿ ಸೇರಿದಂತೆ ಹಲವುರು ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.