ADVERTISEMENT

ಶುಲ್ಕ ಹೆಚ್ಚಳ: ಪೋಷಕರ ಪ್ರತಿಭಟನೆ

ಜೇಸಿ ಶಾಲೆ ವಿರುದ್ಧ ಕ್ರಮಕ್ಕೆ ಡಿಡಿಪಿಐ ಪತ್ರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 5:52 IST
Last Updated 6 ಏಪ್ರಿಲ್ 2013, 5:52 IST

ಗದಗ: ನಗರದ ಜೇಸಿ ಶಾಲೆಯಲ್ಲಿ ಬೋಧನ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಮತ್ತು ಪೋಷಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜೇಸಿ ಶಾಲೆ ಆವರಣದಲ್ಲಿ ಜಮಾಯಿಸಿದ ಜಯ ಕರ್ನಾಟಕ ಸಂಘಟನೆ ಮುಖಂಡರು ಹಾಗೂ ಪೋಷಕರು ಶಾಲೆಯ ಆಡಳಿತ ಮಂಡಳಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಕರಿಗೆ ಹೆಚ್ಚಿನ ಸಂಬಳ ನೀಡಬೇಕು ಎಂಬ ಕಾರಣ ನೀಡಿ ಶುಲ್ಕ ಹೆಚ್ಚಳ ಮಾಡಲಾಗಿದೆ. ಈಗಾಗಲೇ ವರ್ಷಕ್ಕೆ ್ಙ12 ಸಾವಿರ ಪಾವತಿಸಲಾಗುತ್ತಿದೆ. ಮತ್ತೆ ್ಙ 6 ಸಾವಿರ ಹೆಚ್ಚಳ ಮಾಡಲಾಗಿದೆ. ಇದರಿಂದ ಸಾಕಷ್ಟು ತೊಂದರೆಯಾಗಿದೆ. ಕೂಡಲೇ ಶುಲ್ಕವನ್ನು ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದರು.

`ಶಾಲೆಯಲ್ಲಿ ಬೋಧನೆ ಮಾಡುವ ಶಿಕ್ಷಕರು ಸರ್ಕಾರದ ಆದೇಶ ಪ್ರಕಾರ ವಿದ್ಯಾರ್ಹತೆ ಹೊಂದಿಲ್ಲ. ಆಡಳಿತ ಮಂಡಳಿ ಸದಸ್ಯರೊಬ್ಬರ ಪತ್ನಿ ಪಾಠ ಮಾಡುತ್ತಾರೆ.  15ಕ್ಕೆ ಸಿಗುವ ಪುಸ್ತಕ ್ಙ 45ಕ್ಕೆ ಮಾರಾಟ ಮಾಡಲಾಗುತ್ತಿದೆ. ಪೋಷರ ಮೇಲೆ ಒಂದಿಲ್ಲ ಒಂದು ಹೊರೆ ಹೇರುತ್ತಿದ್ದಾರೆ. ಸರಿಯಾದ ಶಿಕ್ಷಣ ನೀಡದೆ ವಂಚಿಸುತ್ತಿದ್ದಾರೆ' ಎಂದು ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ರಾಜೀವ್ ನಾಯಕ ಮತ್ತು ಬಿಇಒ ಬೆನಕೊಪ್ಪ ಅವರ ಬಳಿ ಪೋಷಕರು ಅಳಲು ತೋಡಿಕೊಂಡರು.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ವಾದ-ಪ್ರತಿವಾದ ನಡೆದರೂ ಶಾಲಾ ಆಡಳಿತ ಮಂಡಳಿ ನಿರ್ದೇಶಕರು ಪೋಷಕರ ಜತೆ ಮಾತುಕತೆ ನಡೆಸಲು ಬಾರಲಿಲ್ಲ. `ಶಾಲೆಯ ಶಿಕ್ಷಕರಿಗೆ ಆರನೇ ವೇತನ ಆಯೋಗದ ಪ್ರಕಾರ ಸಂಬಳ ನೀಡಬೇಕಿದೆ. ಪೋಷಕರ ಸಭೆ ನಡೆಸಿ ಅಲ್ಲಿ ಒಪ್ಪಿಗೆ ಪಡೆದೇ ಶುಲ್ಕ ಹೆಚ್ಚಳ ಮಾಡಲಾಗಿದೆ' ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿತು.

ಈ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಡಿಡಿಪಿಐ ರಾಜೀವ ನಾಯಕ,`ಶಾಲಾ ಆಡಳಿತ ಮಂಡಳಿ ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಳ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಈ ಬಗ್ಗೆ ಬಿಇಒ ಸಹ ವರದಿ ನೀಡಿದ್ದಾರೆ. ನಿಯಮ ಪ್ರಕಾರ ಶಾಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಧಾರವಾಡದ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.