ADVERTISEMENT

ಹಳ್ಳಿಗುಡಿ ರೈತರಿಂದ ತೋಂಟದ ಶ್ರೀ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 6:25 IST
Last Updated 16 ಜನವರಿ 2012, 6:25 IST

ಗದಗ: ಹಳ್ಳಿಗುಡಿಯಲ್ಲಿ ಪೋಸ್ಕೊ ಕಂಪೆನಿಯು ಕೈಗಾರಿಕಾ ಘಟಕ ಸ್ಥಾಪಿಸುವುದನ್ನು ತಡೆಯುವಲ್ಲಿ ಮಾಧ್ಯಮದ ಪಾತ್ರವೂ ಪ್ರಮುಖ ವಾಗಿದೆ ಎಂದು ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಹೈಕೋರ್ಟ್‌ನಲ್ಲಿ ಪೋಸ್ಕೊ ಪರ ರೈತರ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ರೈತರಿಗೆ ಸಿಹಿಹಂಚಿ ಅವರು ಮಾತನಾಡಿದರು. 

 ಹಳ್ಳಿ ಗುಡಿಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಹಾಗೂ ಅದರಿಂದಾಗ ಬಹುದಾದ ಅನಾಹುತಗಳ ಕುರಿತು ಮಾಧ್ಯಮಗಳು ಎಚ್ಚರಿಸಿದವು. ರೈತರ ಧ್ವನಿಯಾಗಿ ನಿಂತವು. ಈ ಸುದ್ದಿ ರಾಷ್ಟ್ರವ್ಯಾಪಿ ಪ್ರಸಾರಗೊಂಡು ಪರಿಸರ ವಾದಿಗಳೂ ಇತ್ತ ಕಣ್ಣು ಹಾಯಿಸುವಂತಾಯಿತು.

ಸದ್ಯ ಪೋಸ್ಕೊ ಘಟಕ ಸ್ಥಾಪನೆಗೆ ಸದ್ಯ ತೆರೆಬಿದ್ದಿದ್ದು, ಇದು ರೈತರು, ಪರಿಸರವಾದಿಗಳ ಜಯದ ಜೊತೆಗೆ ಮಾಧ್ಯಮದ ಜಯವೂ ಹೌದು ಎಂದು ಅವರು ನುಡಿದರು.  ಈ ಸಂದರ್ಭ `ಪ್ರಜಾವಾಣಿ~ ಜೊತೆಗೆ ಮಾತನಾಡಿದ ಹಳ್ಳಿಗುಡಿ ರೈತರು, ಸರ್ಕಾರ ಭೂಬ್ಯಾಂಕ್ ಯೋಜನೆಯ ಮೂಲಕ ರೈತರ ಜಮೀನನ್ನು ಕಬಳಿಸುವ ಯತ್ನ ನಡೆಸಿದೆ. ಇದು ರೈತರನ್ನು ಕೆರಳಿಸಿದ್ದು, ಸರ್ಕಾರ ಈ ಯತ್ನವನ್ನು ಕೈಬಿಡದಿದ್ದಲ್ಲಿ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ರೈತರಾದ ಹನುಮಂತಪ್ಪ ಗಡ್ಡದ, ಶಿವಪ್ಪ ಮೊಟಗಿ, ಕುಮ್ಮಣ್ಣ ಚನ್ನಳ್ಳಿ, ಅಮರಪ್ಪ ಚನ್ನಳ್ಳಿ, ಶಂಭುಲಿಂಗಪ್ಪ ಬೇವೂರ, ಐಯಜ್ಜ ಕಮತರ, ಶಿವಬಸಪ್ಪ ಚನ್ನಳ್ಳಿ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.