ADVERTISEMENT

ಆಜಾನ್‌ ವಿರುದ್ಧ 2ನೇ ಹಂತದ ಹೋರಾಟ: ರಾಜು ಖಾನಪ್ಪನವರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 4:45 IST
Last Updated 3 ಜೂನ್ 2022, 4:45 IST

ಗದಗ: ‘ಮಸೀದಿಗಳಲ್ಲಿನ ಮೈಕ್ ತೆರವುಗೊಳಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಜೂನ್‌ 8ರಂದು ಜಿಲ್ಲೆಯ ಸಚಿವರು, ಶಾಸಕರ ಮನೆ ಹಾಗೂ ಕಚೇರಿ ಮುಂದೆ ಎರಡನೇ ಹಂತದ ಪ್ರತಿಭಟನೆ ನಡೆಸಲಿದೆ’ ಎಂದು ಶ್ರೀರಾಮಸೇನೆ ಧಾರವಾಡ ವಿಭಾಗೀಯ ಸಂಚಾಲಕ ರಾಜು ಖಾನಪ್ಪನವರ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನಮಾಜ್‌ ಮಾಡಲು ಮೈಕ್‌ ಬಳಸದಂತೆ ಆಗ್ರಹಿಸಿ ಕಳೆದು ತಿಂಗಳು ಶ್ರೀರಾಮ ಸೇನೆ ಪ್ರತಿಭಟನೆ ನಡೆಸಿತ್ತು. ಅಲ್ಲದೇ ಆಜಾನ್‌ ವಿರುದ್ಧ ಸುಪ್ರಭಾತ, ಭಜನೆ, ದೇವಿಗೀತೆಗಳನ್ನು ಮೊಳಗಿಸುವ ಮೂಲಕ ಮಸೀದಿಯಲ್ಲಿ ಮೈಕ್‌ ಬಳಸುವುದನ್ನು ಖಂಡಿಸಿತ್ತು. ಸುಪ್ರೀಂ ಕೋರ್ಟ್‌ ಆದೇಶ ಇದ್ದರೂ ಯಾವ ಮಸೀದಿಗಳಲ್ಲಿಯೂ ನಿಯಮ ಪಾಲನೆ ಆಗುತ್ತಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಈ ಹಿಂದೆ ಬಾಳಾ ಸಾಹೇಬ್ ಠಾಕ್ರೆ ಅವರೂ ಮೈಕ್ ಆಜಾನ್ ವಿರುದ್ಧ ಧ್ವನಿ ಎತ್ತಿದ್ದರು. ಶ್ರೀರಾಮ ಸೇನೆ ಆರಂಭಿಸಿದ ಆಜಾನ್ ವಿರುದ್ಧದ ಹೋರಾಟಕ್ಕೆ ಶೇ 50ರಷ್ಟು ಜಯ ಸಿಕ್ಕಿದೆ. ಆದರೆ, ಬಹುತೇಕ ಕಡೆಗಳಲ್ಲಿ ಈಗಲೂ ಬೆಳಿಗ್ಗೆ ಲೌಡ್ ಸ್ಪೀಕರ್‌ನಲ್ಲಿ ಆಜಾನ್ ಮೊಳಗಿಸಲಾಗುತ್ತಿದೆ. ಹೀಗಾಗಿ ನಿರ್ಣಾಯಕ ಹೋರಾಟ ಕೈಗೊಳ್ಳಲು ಶ್ರೀರಾಮ ಸೇನೆ ನಿರ್ಧರಿಸಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಈ ಹಿನ್ನಲೆಯಲ್ಲಿ ಶ್ರೀರಾಮ ಸೇನೆ ಮತ್ತೇ ಹೋರಾಟಕ್ಕೆ ಮುಂದಾಗಿದ್ದು, ಜೂನ್‌ 8ರಂದು ಗದಗ ನಗರದಲ್ಲಿರುವ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರ ಕಚೇರಿ, ಗಜೇಂದ್ರಗಡದಲ್ಲಿರುವ ಶಾಸಕ ಕಳಕಪ್ಪ ಬಂಡಿ ಅವರ ಕಚೇರಿ ಹಾಗೂ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಅವರ ಮನೆ ಎದುರು ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ’ ಎಂದು ತಿಳಿಸಿದರು.

ಶ್ರೀರಾಮ ಸೇನೆ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ರೋಖಡೆ, ಗದಗ ತಾಲ್ಲೂಕು ಅಧ್ಯಕ್ಷ ಸೋಮು ಗುಡಿ, ಗದಗ ಶಹರ ಅಧ್ಯಕ್ಷ ಬಸವರಾಜ ಕುರ್ತಕೋಟಿ, ಸತೀಶ ಕುಂಬಾರ, ಮಹಾಂತೇಶ ಪಾಟೀಲ ಸೇರಿದಂತೆ ಹಲವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.