ಗದಗ: ‘ವೇಮನ ಅವರು ಸಮಾಜ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ’ ಎಂದು ಶಾಸಕ ಬಿ.ಆರ್.ಯಾವಗಲ್ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆದ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವೇಮನರು ಜೀವನದ ಭೋಗ, ಲಾಲಸೆಗಳನ್ನು ದಾಟಿ ಎಲ್ಲವನ್ನೂ ತ್ಯಾಗ ಮಾಡಿ ಸನ್ಯಾಸಿಯಾದರು. ವೈರಾಗಿಯಾಗಿ ನಿರಾಡಂಬರ ಜೀವನ ನಡೆಸಿ ಸಮಾಜದ ಪ್ರಗತಿಗೆ ಶ್ರಮಿಸಿದರು. ರಾಜಮನೆತನದಲ್ಲಿ ಜನಿಸಿ ಒಬ್ಬ ತತ್ವಜ್ಞಾನಿ, ಮೇಧಾವಿಯಾಗಿ ಜಗತ್ತಿಗೆ ಶಾಂತಿ ಸಂದೇಶ ನೀಡಿದರು. ಅವರ ತತ್ವಾದರ್ಶಗಳು ಸಾರ್ವಕಾಲಿಕ, ಅನುಕರಣೀಯವಾಗಿವೆ. ವೇಮನರು ಲೋಕ ಸಂಚಾರ ಮಾಡಿ ಸಾಮಾನ್ಯ ಜನರಿಗೆ ತಿಳಿವಳಿಕೆ ನೀಡುವ ಮೂಲಕ ಸಮಾಜ ಸುಧಾರಣೆಯಲ್ಲಿ ತೊಡಗಿಕೊಂಡರು’ ಎಂದರು. ಬಸವರಡ್ಡಿ ಸ್ವಾಮೀಜಿ ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರೂಪಾ ಅಂಗಡಿ, ಸದಸ್ಯ ಸಿದ್ದು ಪಾಟೀಲ, ಶೋಭಾ ಮೇಟಿ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎ.ಆರ್.ನದಾಫ, ಸದಸ್ಯ ಶರಣಪ್ಪ ಪಾಟೀಲ, ನಗರಸಭೆ ಅಧ್ಯಕ್ಷ ಬಿ.ಬಿ.ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭು ಬುರಬುರೆ, ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಲ್ಲಾ ರೆಡ್ಡಿ ಸಮಾಜ ಸಂಘದ ಅಧ್ಯಕ್ಷ ರವೀಂದ್ರನಾಥ ಮೂಲಿಮನಿ, ಜಿಲ್ಲಾ ರಡ್ಡಿ ಸಮಾಜ ಸಂಘದ ಉಪಾಧ್ಯಕ್ಷ ಲಕ್ಷ್ಮಣಗೌಡ ಪಾಟೀಲ, ತಮ್ಮನಗೌಡ ಶಿರಿಯಪ್ಪಗೌಡ್ರ, ಪ್ರೇಮಾ ಮೇಟಿ, ಅಪ್ಪಣ್ಣ ಇನಾಮತಿ, ಸಚಿನಗೌಡ ಪಾಟೀಲ, ಎ.ಓ.ಪಾಟೀಲ, ಎಸ್.ಆರ್.ಪಾಟೀಲ, ಶ್ರೀನಿವಾಸ ದ್ಯಾವನೂರ, ರವೀಂದ್ರನಾಥ ಕುಲಕರ್ಣಿ, ಕಸ್ತೂರಿಬಾಯಿ ಹಿರೇಗೌಡ್ರ ಇದ್ದರು.
ಈರಣ್ಣ ಅಂಗಡಿ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸ್ವಾಗತಿಸಿದರು. ಜಿಲ್ಲಾ ರಡ್ಡಿ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ಶೇಖಣ್ಣ ಗದ್ದಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್.ಹಳ್ಳೂರ, ಜಯಶ್ರೀ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಕೆ.ಬಿ.ಕೊಣ್ಣೂರು ವಂದಿಸಿದರು.
* *
ವೇಮನರು 16 ಸಾವಿರಕ್ಕೂ ಹೆಚ್ಚು ವಚನಗಳು ರಚಿಸಿದ್ದರು. ಈ ಪೈಕಿ 6 ಸಾವಿರ ವಚನಗಳು ಮಾತ್ರ ಪ್ರಕಟವಾಗಿವೆ
ಬಿ.ವಿ.ಶಿರೂರ ಉಪನ್ಯಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.