ಗಜೇಂದ್ರಗಡ: ಸಮೀಪದ ಹೊಸರಾಂಪುರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಯು ಕಳಪೆಯಾಗಿದ್ದು, ಈ ಕುರಿತು ಸಮಗ್ರ ತನಿಖೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೂರ್ತಿ ಬಣ) ಸದಸ್ಯರು ಒತ್ತಾಯಿಸಿದ್ದಾರೆ.
ರಾಂಪುರ ಗ್ರಾಮ ಪಂಚಾಯ್ತಿಗೆ ಸೇರಿದ ಹೊಸರಾಂಪುರ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿ ಯೋಜನೆ ಅಡಿಯಲ್ಲಿ ₹ 4.50 ಲಕ್ಷಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಯನ್ನು ಮೊದಲಿನ ರಸ್ತೆಯನ್ನು ತೆಗೆಯದೇ, ಅದಕ್ಕೆ ಕಡಿಯನ್ನು ಸರಿಯಾಗಿ ಹಾಕದೇ ಇರುವ ರಸ್ತೆಯ ಮೇಲೆ ಈಗ ಕಾಂಂಕ್ರಿಟ್ ಹಾಕಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ ಎಂದು ಆರೋಪಿಸಿದರು.
ಈ ಕಾಮಗಾರಿ ಮುಗಿದ ನಂತರ ಹಿರಿಯ ಅಧಿಕಾರಿಗಳು ಅದು ಕಳಪೆಯಾದ ಬಗ್ಗೆ ಪರಿಶೀಲನೆ ಮಾಡದೆ ಹಣವನ್ನು ಪಾವತಿಸುತ್ತಾರೆ. ಗ್ರಾಮದ ಮುಖಂಡರು ಈ ಬಗ್ಗೆ ತಕರಾರು ಸಲ್ಲಿಸಿದರೂ ಯಾರೂ ಗಮನ ಹರಿಸುತ್ತಿಲ್ಲ. ಇದನ್ನು ಅಧಿಕಾರಿಗಳು ಪರಿಶೀಲಿಸಿ ಕಾಮಾಗಾರಿ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ.ಕಟ್ಟಿಮನಿ, ಶರಣಪ್ಪ ಹಲಗಿ, ದುರಗಪ್ಪ ಹಿರೇಮನಿ, ಶರಣಪ್ಪ ಹಿರೇಕೊಪ್ಪ, ಹನಮಪ್ಪ ಹಿರೇಕೊಪ್ಪ, ಮೈಲಾರಪ್ಪ ಹೊಸರಾಂಪುರ, ಪರಸಪ್ಪ ಹಿರೇಮನಿ ಮತ್ತು ಹೊಸರಾಂಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.