ಮುಂಡರಗಿ: ತಾಲ್ಲೂಕು ಕೃಷಿ ಅಧಿಕಾರಿ ಪಿ.ವೈ.ಕುದರಿಮೋತಿ ಅವರ ನಿವಾಸದ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅರ್ಧ ಕೆ.ಜಿ ಚಿನ್ನ, 2 ಕೆ.ಜಿ ಬೆಳ್ಳಿ, ₹80 ಸಾವಿರ ನಗದು, ಜಮೀನು ಮತ್ತು ನಿವೇಶನ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಗದಗ ಹಾಗೂ ಧಾರವಾಡದಿಂದ ನಾಲ್ಕು ಪ್ರತ್ಯೇಕ ವಾಹನಗಳಲ್ಲಿ ಬಂದಿದ್ದ ಎಸಿಬಿ ಅಧಿಕಾರಿಗಳು ಬೆಳಿಗ್ಗೆ 6.15ಕ್ಕೆ ದಾಳಿ ನಡೆಸಿದರು.ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿದ್ದ ಕುದರಿಮೋತಿ ಅವರು ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮಕ್ಕೆ ತೆರಳಿದ್ದರು. ಅಲ್ಲಿಗೆ ತೆರಳಿದ ಎಸಿಬಿ ಪೊಲೀಸರು ಅವರನ್ನು ಪ್ರತ್ಯೇಕ ವಾಹನದಲ್ಲಿ ಪಟ್ಟಣಕ್ಕೆ ಕರೆತಂದರು.
ಕುದರಿಮೋತಿ ಅವರ ಸ್ವಂತ ಮನೆ ಹಾಗೂ ಅವರು ಬಾಡಿಗೆ ನೀಡಿದ್ದ ಮನೆ ಮತ್ತು ಅವರು ಕಾರ್ಯನಿರ್ವಹಿಸುತ್ತಿರುವ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಿದರು.
ಚಿನ್ನ,ಬೆಳ್ಳಿಯ ಆಭರಣಗಳು, ನಗದಿನ ಜತೆಗೆ ನಾಲ್ಕು ಎಕರೆ ಜಮೀನು ಹಾಗೂ ಎರಡು ನಿವೇಶನಗಳ ಪತ್ರಗಳು ಲಭಿಸಿವೆ. ಸತತ 6 ಗಂಟೆಗಳ ಕಾಲ ಅಧಿಕಾರಿಗಳು ಅವರ ಮನೆಯಲ್ಲಿ ಪರಿಶೀಲನೆ ನಡೆಸಿದರು. ಎಸಿಬಿ ಡಿ.ವೈ.ಎಸ್.ಪಿ. ಆರ್.ಎನ್.ವಾಸುದೇವ, ಎ.ಎಸ್.ಗೂದಿಕೊಪ್ಪ, ಮೋಹನ ತಾನಪ್ಪಗೌಡರ, ಪ್ರಮೋದ ಎಲಿಗಾರ, ಜಿ.ಎ.ಜಾಧವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.