ನರಗುಂದ: ಸತತ ನಾಲ್ಕು ವರ್ಷಗಳಿಂದ ಬರದ ಬರೆ ತಾಲ್ಲೂಕಿನ ರೈತರನ್ನು ಆರ್ಥಿಕವಾಗಿ ಹಿಂಡಿ ಹಿಪ್ಪೆ ಮಾಡಿದೆ. ಈ ಬಾರಿ ಹಿಂಗಾರಿನಲ್ಲಿ ಬಿತ್ತಿದ್ದ ಬಿಳಿಜೋಳವು ಕಾಳು ಕಟ್ಟುವ ಹಂತಕ್ಕೆ ಬಂದಿದ್ದು, ಲದ್ದಿ ಹುಳದ ಬಾಧೆ ಪ್ರಾರಂಭವಾಗಿರುವುದು ರೈತರ ಗಾಯದ ಮೇಲೆ ಬರೆ ಎಳೆದಿದೆ.
ತಾಲ್ಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಿಂದ ಬಿಳಿ ಜೋಳ ಬಿತ್ತನೆ ಪ್ರದೇಶ ಕಡಿಮೆಯಾಗಿದೆ.ಮಲಪ್ರಭಾ ಬಲದಂಡೆ ಕಾಲುವೆ ನೀರಿನಿಂದ ಕೆಲವೆಡೆ ಬಿಳಿ ಜೋಳ ಬೆಳೆಯಲಾಗಿದೆ.ಲಾಭ ಇಲ್ಲದಿದ್ದರೂ, ಕನಿಷ್ಠ ಹೊಟ್ಟೆಗೆ ಗಂಜಿಯಾದರೂ ದೊರಕೀತು ಎಂಬ ಆಲೋಚನೆಯಲ್ಲಿ ರೈತರಿದ್ದರು. ಆದರೆ, ಲದ್ದಿ ಹುಳದ ಬಾಧೆ ಆರಂಭವಾಗಿರುವುದು ಅನ್ನದಾತರ ನಿದ್ರೆಗೆಡಿಸಿದೆ.
ಒಮ್ಮೆ ಜಮೀನಿನಲ್ಲಿ ಲದ್ದಿಹುಳು ಕಾಣಿಸಿಕೊಂಡರೆ ಅದು ಬೆರಳೆಣಿಕೆಯ ದಿನಗಳ್ಲೇ ಇಡೀ ಬೆಳೆಯನ್ನೇ ತಿಂದು ನಾಶ ಮಾಡುತ್ತದೆ. ಇದನ್ನು ನಿಯಂತ್ರಿಸುವೂ ಕಷ್ಟ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ಅವಲತ್ತುಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.