ADVERTISEMENT

ಜೀವಾಮೃತ ತಯಾರಿಕೆ: ಬೆಳೆಗಳಿಗೆ ಹೆಚ್ಚಿದ ಸಮೃದ್ಧತೆ– ಮುಂಡರಗಿ ಮಾದರಿ ರೈತ

ಕಾಶಿನಾಥ ಬಿಳಿಮಗ್ಗದ
Published 21 ಫೆಬ್ರುವರಿ 2025, 6:29 IST
Last Updated 21 ಫೆಬ್ರುವರಿ 2025, 6:29 IST
ಮುಂಡರಗಿ ತಾಲ್ಲೂಕಿನ ಜಾಲವಾಡಿಗೆ ಗ್ರಾಮದ ಮಲ್ಲಪ್ಪ ರಘುನಾಥನಹಳ್ಳಿ ಅವರು ಬಾಳೆ ಗಿಡಗಳ ಮಧ್ಯದಲ್ಲಿ ಶೇಂಗಾ ಬೆಳೆದಿದ್ದಾರೆ
ಮುಂಡರಗಿ ತಾಲ್ಲೂಕಿನ ಜಾಲವಾಡಿಗೆ ಗ್ರಾಮದ ಮಲ್ಲಪ್ಪ ರಘುನಾಥನಹಳ್ಳಿ ಅವರು ಬಾಳೆ ಗಿಡಗಳ ಮಧ್ಯದಲ್ಲಿ ಶೇಂಗಾ ಬೆಳೆದಿದ್ದಾರೆ   

ಮುಂಡರಗಿ: ಸಾಂಪ್ರದಾಯಿಕ ಬೆಳೆ, ದೀರ್ಘಾವಧಿ ಫಸಲು ನೀಡುವ ಮರಗಳು, ಹೈನುಗಾರಿಕೆ ಮೊದಲಾದ ವೈವಿಧ್ಯಮಯ ಕೃಷಿ ಚಟುವಟಿಕೆ ಮಾಡುತ್ತಿರುವ ತಾಲ್ಲೂಕಿನ ಜಾಲವಾಡಿಗೆ ಗ್ರಾಮದ ರೈತ ಮಲ್ಲಪ್ಪ ಫಕ್ಕೀರಪ್ಪ ರಘುನಾಥನಹಳ್ಳಿ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಗ್ರಾಮದಲ್ಲಿ 20 ಎಕರೆ ಜಮೀನು ಹೊಂದಿರುವ ಮಲ್ಲಪ್ಪ ರಘುನಾಥನಹಳ್ಳಿ ಅವರು ವ್ಯವಸ್ಥಿತವಾಗಿ ಕೃಷಿ ಕಾಯಕ ಮಾಡುತ್ತಾರೆ. ಮಲ್ಲಪ್ಪನವರು ತಮ್ಮ ಜಮೀನಿನಲ್ಲಿ ಕೇವಲ ಒಂದೇ ಬೆಳೆಯನ್ನು ಬೆಳೆಯದೆ ಮಿಶ್ರ ಬೆಳೆ ಬೆಳೆದು ಆರ್ಥಿಕ ನಷ್ಟದಿಂದ ಪಾರಾಗುತ್ತಿದ್ದಾರೆ.

ನಾಲ್ಕು ಎಕರೆ ಜಮೀನಿನಲ್ಲಿ ಬಾಳೆ, ಐದು ಎಕರೆ ಜಮೀನಿನಲ್ಲಿ ರೇಷ್ಮೆ (ಹಿಪ್ಪನೇರಳೆ), ಮೂರು ಎಕರೆ ಶೇಂಗಾ ಮೊದಲಾದ ಸಾಂಪ್ರದಾಯಯಿಕ ಬೆಳೆಗಳನ್ನು ಬೆಳೆದಿದ್ದಾರೆ.

ADVERTISEMENT

ಮೂರು ಎಕರೆ ಜಮೀನಿನಲ್ಲಿ 80 ಚೀಲ ಶೇಂಗಾ ಬೆಳೆದು ಸಾಕಷ್ಟು ಆದಾಯ ಪಡೆದುಕೊಂಡಿದ್ದಾರೆ. ಸಧ್ಯ ಬಾಳೆ ಬೆಳೆಯ ಮಧ್ಯದಲ್ಲಿ ಗೆಜ್ಜೆ ಶೇಂಗಾ ಬೆಳೆದಿದ್ದು, ಇದೀಗತಾನೆ ಅದರ ಒಕ್ಕಲು ಆರಂಭಿಸಿದ್ದಾರೆ. ಅದರಿಂದಲೂ ಸಾಕಷ್ಟು ಆದಾಯದ ನಿರೀಕ್ಷೆಯಲ್ಲಿದ್ದಾರೆ. ಅದೇ ರೀತಿ ಮೂರು ಎಕರೆ ಜಮೀನಿನಲ್ಲಿ ಕಡಲೆ ಬೆಳೆದಿದ್ದು, ಅದನ್ನು ಕಿತ್ತು ಒಂದೆಡೆ ಸಂಗ್ರಹಿಸಿದ್ದಾರೆ. ಸದ್ಯದಲ್ಲಿಯೇ ಅದರ ಒಕ್ಕಲು ಆರಂಭಿಸಲಿದ್ದು, ಅದು ಸಹಿತ ಮಲ್ಲಪ್ಪನವರಿಗೆ ಸಾಕಷ್ಟು ಆದಾಯ ತರಲಿದೆ.

ಐದು ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆದಿದ್ದು, ಕಳೆದ ವರ್ಷ 350ಕೆಜಿ ರೇಷ್ಮೆ ಮಾರಾಟ ಮಾಡಿದ್ದಾರೆ. ಪ್ರಸ್ತುತ ರೇಷ್ಮೆ ಗಿಡಗಳು ತುಂಬಾ ಹಳೆಯ ಗಿಡಗಳಾಗಿದ್ದು, ಕೊಪ್ಪಳದಿಂದ ಹೊಸ ಸಸಿಗಳನ್ನು ನಾಟಿ ಮಾಡಿದ್ದಾರೆ. ಅದರ ಮಧ್ಯದಲ್ಲಿ ಮೆಣಸಿನಕಾಯಿ, ನೀರುಳ್ಳಿ, ಟೊಮೊಟೊ ಮೊದಲಾದವುಗಳನ್ನು ಬೆಳೆಯುತ್ತಿದ್ದಾರೆ. ಅದರಿಂದ ದೊರೆಯುವ ಆದಾಯದಿಂದ ಮನೆಯ ಖರ್ಚು ನಿಭಾಯಿಸುತ್ತಿದ್ದಾರೆ.

ಜಮೀನಿನ ಬದುವುಗಳಲ್ಲಿ ಮೂವತ್ತು ತೆಂಗಿನ ಮರಗಳನ್ನು ಬೆಳೆದಿದ್ದು, ಅವುಗಳು ನಿಯಮಿತವಾಗಿ ಫಲ ನೀಡುತ್ತಲಿವೆ. ಜಮೀನಿನಲ್ಲಿಯೇ ಮನೆ ಮಾಡಿರುವ ಮಲ್ಲಪ್ಪ ಹಾಗೂ ಅವರ ಕುಟುಂಬ ವರ್ಗದವರು 11 ಹಸುಗಳನ್ನು ಸಾಕಿದ್ದಾರೆ. ಅವುಗಳಿಂದ ಹಾಲು, ಮೊಸರು ಹಾಗೂ ಮತ್ತಿತರ ಹೈನೋತ್ಪನ್ನಗಳನ್ನು ಪಡೆದುಕೊಳ್ಳುತ್ತಲಿದ್ದಾರೆ.

ಮಲ್ಲಪ್ಪನವರ ವೃದ್ಧ ತಂದೆ ಫಕ್ಕೀರಪ್ಪನವರು ಮಗನ ಕೃಷಿ ಕಾಯಕಕ್ಕೆ ಸದಾ ಮಾರ್ಗದರ್ಶನ ನೀಡುತ್ತಿದ್ದಾರೆ. ಜೊತೆಗೆ ಅವರ ಕೃಷಿ ಕಾಯಕಕ್ಕೆ ಕುಟುಂಬದ ಸದಸ್ಯರೆಲ್ಲ ನೆರವು ನೀಡುತ್ತಿದ್ದಾರೆ.

ಮಡರಗಿ ತಾಲ್ಲೂಕಿನ ಜಾಲವಾಡಿಗೆ ಗ್ರಾಮದ ರೈತ ಮಲ್ಲಪ್ಪ ಸಾಕಿರುವ ಜಾನುವಾರುಗಳು

ಕೃಷಿ ಜೊತೆಗೆ ಸಾಕಷ್ಟು ಕೃಷಿಯಾಧಾರಿತ ಕಾಯಕಗಳಿದ್ದು ರೈತರು ಅವುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇದರಿಂದ ನಷ್ಟ ಎದುರಾಗುವುದಿಲ್ಲ

–ಮಲ್ಲಪ್ಪ ಫಕ್ಕೀರಪ್ಪ ರಘುರಾಥನಹಳ್ಳಿ ರೈತ

ಬೆಳೆಗಳಿಗೆ ಜೀವಾಮೃತದ ಬಲ ಮಲ್ಲಪ್ಪನವರು 11 ಜವಾರಿ ಹಸುಗಳನ್ನು ಸಾಕಿದ್ದು ಸಗಣಿ ಗೋಮೂತ್ರ ಮೊದಲಾದ ಹಸು ತ್ಯಾಜ್ಯವನ್ನು ಬೆಳೆಗಳಿಗೆ ನೀಡುತ್ತಾರೆ. ಅದರ ಜೊತೆಗೆ ಬೆಳೆಗಳಿಗೆ ನಿಯಮಿತವಾಗಿ ಜೀವಾಮೃತ ನೀಡುತ್ತಲಿದ್ದಾರೆ. ಬೆಲ್ಲ ಮಜ್ಜಿಗೆ ಕಡಲೆ ಹಿಟ್ಟು ಮಡಿಕೆ ಹಿಟ್ಟು ಜೋಳದ ಹಿಟ್ಟು ರಾಗಿ ಹಿಟ್ಟು ಮೊದಲಾದವುಗಳನ್ನು ಎರಡು ದೊಡ್ಡ ಬ್ಯಾರಲ್ ಗಳಲ್ಲಿ ಮಿಶ್ರಣ ಮಾಡುತ್ತಾರೆ. ಹೀಗೆ ತಯಾರಿಸಿದ ಮಿಶ್ರಣವನ್ನು ಹತ್ತು ದಿನಗಳ ಕಾಲ ಕಳಿಯಲು ಬಿಡುತ್ತಾರೆ. ನಂತರ ಮಂಚಾಮೃತವನ್ನು ನೀರಿನ ಮೂಲಕ ಬೆಳೆಗಳಿಗೆ ನೀಡುತ್ತಾರೆ. ಹೀಗಾಗಿ ಮಲ್ಲಪ್ಪನವರ ಜಮೀನಿನಲ್ಲಿ ಎಲ್ಲ ಬೆಳೆಗಳು ಸಮೃದ್ಧವಗಿ ಬೆಳೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.