ADVERTISEMENT

‘ಬಿಜೆಪಿ-ಜೆಡಿಎಸ್ ಸಹಕಾರದಲ್ಲಿ ಬೊಮ್ಮಾಯಿ ಗೆಲುವು’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 14:12 IST
Last Updated 27 ಮಾರ್ಚ್ 2024, 14:12 IST

ನರೇಗಲ್: ನರೇಂದ್ರ ಮೋದಿಯವರು ದೇಶ ಕಂಡ ಅತ್ಯಂತ ಸಮರ್ಥ ಪ್ರಧಾನಿಯಾಗಿದ್ದಾರೆ. ಅವರ ಉತ್ತಮ ಆಡಳಿತದ ಪರಿಣಾಮದಿಂದಾಗಿ ಈಗಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಯು ಮೋದಿ ಅವರಿಗೆ ಬಲ ನೀಡಲಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವೈ. ಮುಧೋಳ ಹೇಳಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಎಲ್ಲ ಜೆಡಿಎಸ್ ಕಾರ್ಯಕರ್ತರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ, ಬಾಗಲಕೋಟೆ ಕ್ಷೇತ್ರದಲ್ಲಿ ಪಿ.ಸಿ. ಗದ್ದಿಗೌಡರ ಅವರನ್ನು ಗೆಲ್ಲಿಸುವ ಪಣ ತೊಟ್ಟಿದ್ದೇವೆ ಎಂದರು.

ಕಾರ್ಯಕರ್ತರು, ಬಿಜೆಪಿ ಮುಖಂಡರೂ ಜೆಡಿಎಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರೆ ಚುನಾವಣೆಯಲ್ಲಿ ಇನ್ನಷ್ಟು ಸುಲಭವಾಗಿ ಗೆಲ್ಲಬಹುದು ಎಂದರು.

ADVERTISEMENT

ನಮ್ಮ ದೇಶಕ್ಕೆ ನರೇಂದ್ರ ಮೋದಿಯಂತಹ ಧೀಮಂತ ನಾಯಕ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ದೇಶದ ಎಲ್ಲ ಸಮಾಜದ ಜನರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ಪ್ರಧಾನಿ ಮೋದಿ ಅತ್ಯಂತ ಸಮರ್ಪಕವಾಗಿ ಮಾಡುತ್ತಿದ್ದಾರೆ. ಮತದಾರರ ಜಾತಿ-ಮತ-ಧರ್ಮ ಯಾವುದೇ ಇರಲಿ ಅವರು ದೇಶ ಪ್ರೇಮಿಗಳಾಗಿದ್ದಲ್ಲಿ, ಕಳೆದ ಹತ್ತು ವರ್ಷಗಳಲ್ಲಿ ಮೋದಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ, ವಿಶ್ವ ಮಟ್ಟದಲ್ಲಿ ಮೋದಿಯವರು ಭಾರತದ ಕೀರ್ತಿ ಪತಾಕೆ ಹಾರಿಸಿರುವುದನ್ನು ನೋಡಿ ಖಂಡಿತ ಮೋದಿಯವರ ಪಕ್ಷಕ್ಕೆ ಮತ ಹಾಕುತ್ತಾರೆ ಎಂದರು.

ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ವೀರಪ್ಪ ಜಿರ್ಲ, ರೋಣ ತಾಲ್ಲೂಕು ಅಧ್ಯಕ್ಷ ಶಿವಕುಮಾರ ಶಿರಹಟ್ಟಿ, ಗಜೇಂದ್ರಗಡ ಉಪಾಧ್ಯಕ್ಷ ರಕ್ಷಿತಗೌಡ ಪಾಟೀಲ, ಎಸ್.ಸಿ. ಘಟಕದ ಅಧ್ಯಕ್ಷ ರಘು ಕಟ್ಟಿಮನಿ, ತಾಲ್ಲೂಕು ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಗಜೇಂದ್ರಗಡ ತಾಲ್ಲೂಕು ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಭಾಷಾಸಾಬ ಬಾಗವಾನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.