ಮುಂಡರಗಿ: ಈಚೆಗೆ ಬೆಂಗಳೂರಿನ ಜಿ.ಕೆ.ವಿ.ಕೆ.ಯಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಬಿಜಿನೆಸ್ ಮೀಟ್ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಡಂಬಳ ಗ್ರಾಮದ ಚಂದನವನ ರೈತ ಉತ್ಪಾದಕ ಕಂಪನಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಅಂತರರಾಷ್ಟ್ರೀಯ ವ್ಯಾಪಾರ ಮಳಿಗೆಯಲ್ಲಿ ಚಂದನವನ ಕಂಪನಿಯು ಪ್ರದರ್ಶನಕ್ಕೆ ಇಟ್ಟಿದ್ದ ಈ ಭಾಗದ ಉತ್ಕೃಷ್ಟ ಗುಣಮಟ್ಟದ ಈರುಳ್ಳಿ, ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ, ಶೇಂಗಾ, ಹೆಸರು, ಕಡಲೆ, ಮತ್ತು ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಪೇರಲ, ಹುಣಿಸೆ ಮೊದಲಾದವುಗಳು ಅಂತರರಾಷ್ಟ್ರೀಯ ಗ್ರಾಹಕರ ಗಮನ ಸೆಳೆದವು.
ಆಫ್ರಿಕಾದ ಗೀನಿಯಾ ದೇಶದ ಪ್ರತಿನಿಧಿಗಳು ಚಂದನವನ ರೈತ ಉತ್ಪಾದಕ ಮಳಿಗೆಗೆ ಭೇಟಿ ನೀಡಿ ವಿವರವಾದ ಮಾಹಿತಿ ಪಡೆದರು. ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ಡಾ.ಸದಾನಂದ, ವಿದೇಶಿಗರಿಗೆ ಸಮಗ್ರ ಮಾಹಿತಿ ನೀಡಿದರು.
‘ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ಸ್ಥಾಪಿತವಾಗಿರುವ ಚಂದನವನ ರೈತ ಉತ್ಪಾದಕ ಕಂಪನಿಯು ಸದಾ ರೈತಪರ ಕಾರ್ಯಗಳನ್ನು ಮಾಡುತ್ತಿದ್ದು, ರೈತ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಕಂಪನಿಯಿಂದ ನೇರವಾಗಿ ವ್ಯವಹಾರ ಮಾಡುವುದಾಗಿ ಆಫ್ರಿಕಾದ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ನಮ್ಮ ಕಂಪನಿಯು ಅಂತರರಾಷ್ಟ್ರೀಯ ಮಟ್ಟದ ವ್ಯವಹಾರಗಳಲ್ಲಿ ಪಾಲ್ಗೊಳ್ಳುವ ಭರವಸೆ ಇದೆ’ ಎಂದು ಚಂದನವನ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಬಸವರಾಜ ಬೇವಿನಮರದ ಅವರು ಹರ್ಷ ವ್ಯಕ್ತಪಡಿಸಿದರು.
ಅಟಿಕಾ ಗೋಲ್ಡ್ ಕಂಪನಿಯ ಮುಖ್ಯಸ್ಥ ಬಾಬು ಬೊಮ್ಮನಹಳ್ಳಿ, ಜಿ.ಕೆ.ವಿ.ಕೆ. ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.