ADVERTISEMENT

ಸಾವಿರದ ಗಡಿ ದಾಟಿದ ಸೋಂಕಿತರು

26 ದಿನದಲ್ಲಿ 19 ಮಂದಿ ಸೋಂಕಿಗೆ ಬಲಿ; ಏರುತ್ತಲೇ ಇರುವ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 15:17 IST
Last Updated 26 ಜುಲೈ 2020, 15:17 IST

ಗದಗ: ಜಿಲ್ಲೆಯಲ್ಲಿ ಭಾನುವಾರ ಮತ್ತೆ 61 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು,ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟಿದೆ. ಭಾನುವಾರ ಮತ್ತಿಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ನಗರ ನಿವಾಸಿ 78 ವರ್ಷದ ವೃದ್ಧೆ ಮತ್ತು ಗದುಗಿನ ಬ್ಯಾಂಕರ್ಸ್‌ ಕಾಲೋನಿ ನಿವಾಸಿ 64 ವರ್ಷದ ಪುರುಷ ಮೃತಪಟ್ಟವರು.

ಜಿಲ್ಲೆಯಲ್ಲಿ ಜುಲೈ 1ರಿಂದ ಜುಲೈ 26ರವರೆ ಒಟ್ಟು 828 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಈ ಅವಧಿಯಲ್ಲಿ ಸೋಂಕು ದೃಢಪಟ್ಟಿದ್ದ 19 ಮಂದಿ ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆಗಿಂತಲೂ ಸಕ್ರಿಯ ಪ್ರಕರಣಗಳು ಹೆಚ್ಚಿವೆ. ಭಾನುವಾರದ 26 ಮಂದಿ ಸೇರಿ ಇದುವರೆಗೆ 354 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಸದ್ಯ 628 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಜಿಲ್ಲಾ ಕೇಂದ್ರ ಗದಗ,ಮಸಾರಿ, ಶರಣಬಸವೇಶ್ವರ ನಗರ, ಬೆಟಗೇರಿ, ಹುಡ್ಕೋ ಕಾಲನಿ, ಒಕ್ಕಲಗೇರಿ ಓಣಿ, ಕಿಲ್ಲಾ ಓಣಿ, ತಾಲ್ಲೂಕಿನ ಬಿಂಕದಕಟ್ಟಿ, ಹೊಂಬಳ, ನೀಲಗುಂದ, ಮಲ್ಲಾಪೂರ, ಚಿಕ್ಕ ಹಂದಿಗೋಳ, ಮುಂಡರಗಿ ಪಟ್ಟಣದ ಜಾಗೃತ ವೃತ್ತ, ಮಸೂತಿ ಓಣಿ, ಮುಂಡರಗಿ ತಾಲ್ಲೂಕಿನ ಹಳ್ಳಿಗುಡಿ, ರೋಣ ಪಟ್ಟಣದ ತಳವಾರ ಓಣಿ, ತಾಲ್ಲೂಕಿನ ಹಿರೇಹಾಳ, ನಿಡಗುಂದಿ, ಹೊಳೆಆಲೂರ, ಅಬ್ಬಿಗೇರಿ, ಲಕ್ಷ್ಮೇಶ್ವರದ ಹಳ್ಳದಕೇರಿ, ಪೇಟೆಬನ, ಗೌಡರ ಓಣಿ, ಲಕ್ಷ್ಮೇಶ್ವರ ತಾಲ್ಲೂಕಿನ ಯಳವತ್ತಿ,ನರಗುಂದ ಪಟ್ಟಣದ ಹುಣಸಿಕಟ್ಟಿ ಪ್ಲಾಟ, ನೀರಾವರಿ ಪ್ಲಾಟ್‌, ಗಾಡಿ ಓಣಿ, ಅಂಬೇಡ್ಕರ ನಗರ, ನರಗುಂದ ತಾಲ್ಲೂಕಿನ ಹುಣಸಿಕಟ್ಟಿ, ಹೊಸೂರ, ಕೋಣ್ಣೂರ, ಶಿರೋಳ, ಸೋಮಾಪುರದಲ್ಲಿ ಹೊಸ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ.

‘ಕೋವಿಡ್-19 ಪರಿಣಾಮಕಾರಿ ನಿಯಂತ್ರಣಕ್ಕೆ ಮಾಸ್ಕ್‌ ಧರಿಸುವುದು, ಅಂತರ ಪಾಲಿಸುವುದು ಅಗತ್ಯ. ಈ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾರ್ಡ್‌ವಾರು ರಚಿಸಲಾದ ಕ್ರಿಯಾ ಸಮಿತಿಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‍ಬಾಬು ಹೇಳಿದ್ದಾರೆ.

‘ಕೋವಿಡ್-19 ಮರಣ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಶದಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ ಅವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.