ADVERTISEMENT

50 ಹಾಸಿಗೆಯ ಕೋವಿಡ್ ಕೇರ್- ಆಸ್ಪತ್ರೆ ಉದ್ಘಾಟನೆ ಇಂದು: ಬಡವರಿಗೆ ಉಚಿತ ಚಿಕಿತ್ಸ

​ಪ್ರಜಾವಾಣಿ ವಾರ್ತೆ
Published 30 ಮೇ 2021, 19:30 IST
Last Updated 30 ಮೇ 2021, 19:30 IST
ಉದ್ಘಾಟನೆಗೆ ಸಿದ್ಧಗೊಂಡಿರುವ ಆಸ್ಪತ್ರೆ
ಉದ್ಘಾಟನೆಗೆ ಸಿದ್ಧಗೊಂಡಿರುವ ಆಸ್ಪತ್ರೆ   

ಗದಗ/ರೋಣ: ‘ಪಟ್ಟಣದ ರಾಜೀವ್‌ಗಾಂಧಿ ಆಯುರ್ವೇದ ಆಸ್ಪತ್ರೆಯನ್ನು ಕೋವಿಡ್ ಕೇರ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದು, ಹಾಲಕೆರೆ ಅಭಿನವ ಅನ್ನದಾನ ಸ್ವಾಮೀಜಿ ಸೋಮವಾರ ಉದ್ಘಾಟಿಸಲಿದ್ದಾರೆ’ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ರಾಜೀವ್‌ಗಾಂಧಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೋವಿಡ್‌ ಸೋಂಕಿತರಾಗಿರುವ ರೋಣ ಹಾಗೂ ಗಜೇಂದ್ರಗಡ ತಾಲ್ಲೂಕಿನ ಬಡ ಜನರು ಸಮರ್ಪಕ ಚಿಕಿತ್ಸೆ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ. ಅಂತವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೋವಿಡ್‌ ಆಸ್ಪತ್ರೆ ತೆರೆಯಲಾಗಿದೆ. 50 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು’ ಎಂದು ಅವರು ತಿಳಿಸಿದರು.

‘50 ಹಾಸಿಗೆಗಳಲ್ಲಿ 5 ವೆಂಟಿಲೇಟರ್‌ ಬೆಡ್‌ಗಳು ಇರಲಿವೆ. 25 ಆಮ್ಲಜನಕ ಸಹಿತ ಹಾಸಿಗೆಗಳು ಹಾಗೂ 20 ಸಾಮಾನ್ಯ ಹಾಸಿಗೆಗಳು ಇರಲಿವೆ. ಸೋಂಕಿನ ತೀವ್ರತೆ ಕಡಿಮೆ ಇರುವವರ ಜತೆಗೆ ಆಮ್ಲಜನಕ ಹಾಗೂ ವೆಂಟಿಲೇಟರ್‌ ಬೆಡ್‌ ಅವಶ್ಯಕತೆ ಇರುವ ಸೋಂಕಿತರಿಗೂ ಚಿಕಿತ್ಸೆ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಗ್ರಾಮೀಣ ಭಾಗದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ವೆಂಟಿಲೇಟರ್‌ ಸಿಗದೇ ಅನೇಕರು ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಡ ವರ್ಗದ ರೋಗಿಗಳ ಚಿಕಿತ್ಸೆಗೆ ಅವಶ್ಯಕವಿರುವ ವ್ಯವಸ್ಥೆ ಕಲ್ಪಿಸಿ, ಅವರಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ಕೋವಿಡ್‌ ಆಸ್ಪತ್ರೆ ಆರಂಭಿಸಲಾಗುವುದು. ರೋಣ ಮತ್ತು ಗಜೇಂದ್ರಗಡ ಜನರು ಇದರ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.

‘ಜೂಮ್‌ ಆ್ಯಪ್‌ ಮೂಲಕ ಸೋಮವಾರ ಕೋವಿಡ್‌ ಆಸ್ಪತ್ರೆ ಉದ್ಘಾಟನೆಗೊಳ್ಳಲಿದ್ದು, ಶಾಸಕ ಎಚ್‌.ಕೆ.ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಚಾಲನೆ ನೀಡಲಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಚಿಕಿತ್ಸೆಗೆ ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೈದ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಾರೆ. 10 ಮಂದಿ ನರ್ಸ್‍ಗಳು ರೋಗಿಗಳನ್ನು ಆರೈಕೆ ಮಾಡಲಿದ್ದಾರೆ. ಸೋಂಕಿತರಿಗೆ ಊಟ, ಔಷಧಿಗಳನ್ನು ಉಚಿತವಾಗಿ ಒದಗಿಸಲಾಗುವುದು’ ಎಂದು ತಿಳಿಸಿದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ಐ.ಬಿ.ಕೊಟ್ಟರಶೆಟ್ಟರ, ಕಾಂಗ್ರೆಸ್ ಕಮಿಟಿ ಜಿಲ್ಲಾ ಉಪಾಧ್ಯಕ್ಷ ವಿ.ಬಿ.ಸೋಮನಕಟ್ಟಿ ಇದ್ದರು.

ಮೂರು, ನಾಲ್ಕನೇ ಅಲೆ ಎದುರಿಸಲು ಅನುಕೂಲ

‘ವಾರದ ಹಿಂದಷ್ಟೇ ಕೋವಿಡ್‌ ಆಸ್ಪತ್ರೆ ತೆರೆಯಬೇಕು ಎಂಬ ಆಲೋಚನೆ ಮೂಡಿತು. ಅದನ್ನು ಕೇವಲ ಏಳು ದಿನಗಳಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಅನೇಕರ ಶ್ರಮ, ಆತ್ಮಬಲ ಅಡಗಿದೆ’ ಎಂದು ಜಿ.ಎಸ್‌.ಪಾಟೀಲ ಹೇಳಿದರು.

‘ಸೋಂಕು ಇಳಿಮುಖ ಆಗುತ್ತಿರುವ ಹೊತ್ತಿನಲ್ಲಿ ಕೋವಿಡ್‌ ಆಸ್ಪತ್ರೆ ಆರಂಭಿಸಿದ್ದು ಏಕೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿರಬಹುದು. ಆದರೆ ತಜ್ಞರು ಹಾಗೂ ವಿಜ್ಞಾನಿಗಳು ನಮ್ಮ ದೇಶದಲ್ಲಿ ಕೋವಿಡ್‌ ಮೂರು ಮತ್ತು ನಾಲ್ಕನೇ ಅಲೆ ಬರಬಹುದು ಎಂದು ಎಚ್ಚರಿಸಿದ್ದಾರೆ. ಆ ಸಂದರ್ಭದಲ್ಲಿ ಕೋವಿಡ್‌ ಎದುರಿಸಲು ಇದು ನೆರವಾಗಲಿದೆ ಎಂಬ ವಿಚಾರವನ್ನು ತಲೆಯಲ್ಲಿಟ್ಟುಕೊಂಡು ಆಸ್ಪತ್ರೆ ಆರಂಭಿಸಲಾಗಿದೆ’ ಎಂದು ಹೇಳಿದರು.

***

ಆರ್ಥಿಕವಾಗಿ ಚೆನ್ನಾಗಿರುವವರು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ. ಆದರೆ, ಬಡ ವರ್ಗದವರಿಗೆ ಅದು ಸಾಧ್ಯವಾಗುವುದಿಲ್ಲ. ಈ ಆಸ್ಪತ್ರೆ ಬಡವರಿಗೆ ಮೀಸಲು.

- ಜಿ.ಎಸ್.ಪಾಟೀಲ, ಗದಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಐಸಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.