ADVERTISEMENT

‘ಮಹಾ’ ಆತಂಕ: ಮತ್ತೆ 6 ಮಂದಿಗೆ ಸೋಂಕು

ಸೋಂಕು ಹೊತ್ತು ತರುತ್ತಿರುವ ಮುಂಬೈ–ಗದಗ ಎಕ್ಸ್‌ಪ್ರೆಸ್‌ ರೈಲು

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 16:13 IST
Last Updated 8 ಜೂನ್ 2020, 16:13 IST
ಗದುಗಿನ ಮಸಾರಿ ಪ್ರದೇಶದಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ದೇವರ ದರ್ಶನಕ್ಕೆ ಅಂತರ ಪಾಲಿಸಿ ನಿಂತಿದ್ದ ಭಕ್ತರು
ಗದುಗಿನ ಮಸಾರಿ ಪ್ರದೇಶದಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ದೇವರ ದರ್ಶನಕ್ಕೆ ಅಂತರ ಪಾಲಿಸಿ ನಿಂತಿದ್ದ ಭಕ್ತರು   

ಗದಗ: ಮುಂಬೈನಿಂದ ರೈಲಿನಲ್ಲಿ ಜಿಲ್ಲೆಗೆ ಬಂದಿದ್ದ ಆರು ಮಂದಿಗೆ ಕೋವಿಡ್–19 ಇರುವುದು ಸೋಮವಾರ ದೃಢಪಟ್ಟಿದೆ.

ಗಜೇಂದ್ರಗಡ ತಾಲ್ಲೂಕಿನ 30 ವರ್ಷದ ಮಹಿಳೆ (ಪಿ-5486) 22 ವರ್ಷದ ಯುವಕ (ಪಿ-5487), 46 ವರ್ಷದ ಪುರುಷ (ಪಿ–5489) 12 ವರ್ಷದ ಬಾಲಕ (ಪಿ-5490) 23 ವರ್ಷದ ಯುವತಿ (ಪಿ-5491) ಮತ್ತು ಸೊಲ್ಲಾಪುರದಿಂದ ಬೆಟಗೇರಿಗೆ ಬಂದ 42 ವರ್ಷದ ಮಹಿಳೆ (ಪಿ-5488) ಸೇರಿ ಒಟ್ಟು 6 ಜನರಿಗೆ ಸೋಂಕು ತಗುಲಿದೆ.

ಇವರೆಲ್ಲ ಜೂ.4 ಮತ್ತು 5ರಂದು ಜಿಲ್ಲೆಗೆ ಬಂದಿದ್ದರು. ಎಲ್ಲರನ್ನೂ 7 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಸೋಂಕು ದೃಢಪಟ್ಟ ಬೆನ್ನಲ್ಲೇ ಇವರನ್ನು ಕ್ವಾರಂಟೈನ್‌ ಕೇಂದ್ರದಿಂದ ನಿಗದಿತ ಕೋವಿಡ್‌–19 ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಮಹಾರಾಷ್ಟ್ರದಿಂದ ಜಿಲ್ಲೆಗೆ ರೈಲಿನಲ್ಲಿ ಬರುತ್ತಿರುವ ಬಹುತೇಕ ಪ್ರಯಾಣಿಕರಿಗೆ ಸೋಂಕು ಇದೆ ಎನ್ನುವ ಆತಂಕ ಜಿಲ್ಲೆಯ ಜನರದ್ದು. ಹೀಗಾಗಿ ಇವರ ವೈದ್ಯಕೀಯ ವರದಿಯ ಫಲಿತಾಂಶವನ್ನು ಜಿಲ್ಲೆಯ ಜನರು ಆತಂಕದಿಂದಲೇ ಎದುರು ನೋಡುತ್ತಿದ್ದಾರೆ. ಇದುವರೆಗೆ ಮಹಾರಾಷ್ಟ್ರದಿಂದ ಬಂದ 8 ಪ್ರಯಾಣಿಕರಿಗೆ ಸೋಂಕು ದೃಢಪಟ್ಟಿದೆ. ಸೋಮವಾರದ 6 ಪಾಸಿಟಿವ್‌ ಪ್ರಕರಣಗಳು ಸೇರಿ ಜಿಲ್ಲೆಯ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಸದ್ಯ 14 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಿಂದ ಬಂದ 8 ಮಂದಿಗೆ ಸೋಂಕು: ಜೂ.2ರಿಂದ ರೈಲಿನ ಮೂಲಕ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ ಒಟ್ಟು 432 ಪ್ರಯಾಣಿಕರು ಬಂದಿಳಿದಿದ್ದು, ಇದರಲ್ಲಿ 199 ಜನರು ಗದಗ ಜಿಲ್ಲೆಗೆ ಸೇರಿದವರು. ಇವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇನ್ನುಳಿದ 233 ಜನರು ಬೇರೆ ಜಿಲ್ಲೆಯವರಾಗಿದ್ದು, ಅವರನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಇದುವರೆಗೆ 179 ಜನರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 08 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. 171 ಜನರ ವರದಿ ನೆಗಟಿವ್‌ ಬಂದಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.