ADVERTISEMENT

ಡಂಬಳ: ಖಡಕ್ ರೊಟ್ಟಿ ಜಾತ್ರೆ ರದ್ದು

ಕೋವಿಡ್‌ ಮಾರ್ಗಸೂಚಿ ಪ್ರಕಾರ ಸರಳ ಆಚರಣೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 6:40 IST
Last Updated 16 ಫೆಬ್ರುವರಿ 2022, 6:40 IST
ಲಿಂ. ತೋಂಟದ ಸಿದ್ದಲಿಂಗ ಸ್ವಾಮೀಜಿ
ಲಿಂ. ತೋಂಟದ ಸಿದ್ದಲಿಂಗ ಸ್ವಾಮೀಜಿ   

ಡಂಬಳ: ಇಲ್ಲಿನ ತೋಂಟದಾರ್ಯ ಮದಾರ್ಧನಾರೇಶ್ವರ ಜಾತ್ರೆ ಈ ವರ್ಷ ಕೋವಿಡ್‌–19 ಮಾರ್ಗಸೂಚಿ ಪ್ರಕಾರವಾಗಿ ಸರಳವಾಗಿ ನಡೆಯಲಿದೆ.

ಮನುಷ್ಯ ಮನುಷ್ಯನನ್ನು ಪ್ರೀತಿಸುವಂತಾಗಬೇಕು ಎಂದು ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಪಣತೊಟ್ಟಿದ್ದ ಲಿಂ. ಸಿದ್ಧಲಿಂಗ ಸ್ವಾಮೀಜಿ 1976ರಲ್ಲಿ ಸೌಹಾರ್ದ, ಭಾವೈಕ್ಯಕ್ಕಾಗಿ ಮೊಟ್ಟ ಮೊದಲು ರೊಟ್ಟಿ ಜಾತ್ರೆಯನ್ನು ಡಂಬಳದಲ್ಲಿ ಪ್ರಾರಂಭಿಸಿದರು. ಮಠದ ಆವರಣದಲ್ಲಿ ಎಲ್ಲ ಭಕ್ತರು ಸಾಮೂಹಿಕವಾಗಿ ಕುಳಿತು ಪ್ರಸಾದ ಸ್ವೀಕರಿಸುತ್ತಿದ್ದರು. ಇದು ಖಡಕ್‌ ರೊಟ್ಟಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿತ್ತು. ಆದರೆ, ನಾಲ್ಕು ದಶಕಗಳ ನಂತರ ಡಂಬಳದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದಲ್ಲಿ ಖಡಕ್‌ ರೊಟ್ಟಿ ಜಾತ್ರೆಯನ್ನು ರದ್ದುಪಡಿಸಿದೆ.

ತೋಂಟದ ಸಿದ್ದರಾಮ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ 281ನೇ ಜಾತ್ರಾ ಮಹೋತ್ಸವದಲ್ಲಿ ಫೆ.16ರಂದು ರಥೋತ್ಸವ ಹಾಗೂ 17ರಂದು ಲಘು ರಥೋತ್ಸವ ನಡೆಯಲಿದೆ. ಜಾತ್ರೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಾತ್ರಾ ಕಮಿಟಿ ಹಾಗೂ ಭಕ್ತರ ಸಲಹೆ ಪಡೆದು ರೊಟ್ಟಿ ಪ್ರಸಾದ ವ್ಯವಸ್ಥೆಯನ್ನು ರದ್ದು ಪಡಿಸಲಾಗಿದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಮುದಕಪ್ಪ ಮೇವುಂಡಿ, ಉಪಾಧ್ಯಕ್ಷ ಮುತ್ತಣ್ಣ ಕೊಂತಿಕೊಲ್ಲ ತಿಳಿಸಿದ್ದಾರೆ.

ADVERTISEMENT

ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಭಕ್ತರಿಗೆ ಹುಗ್ಗಿ ಹಾಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಧರ್ಮ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನ ಮಾಡುವುದು ಸೇರಿದಂತೆ ಇತರೆ ಕಾರ್ಯಕ್ರಮಗಳು ಕೂಡ ಈ ಬಾರಿ ರದ್ದಾಗಿವೆ.

ಜಾತ್ರೆಯ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳು ಕೋವಿಡ್ ನಿಮಯದಂತೆ ಸರಳವಾಗಿ ನಡೆಯಲಿವೆ. ಜಾತ್ರೆಯ ಯಶಸ್ಸಿಗೆ ಭಕ್ತರು ಸಹಕರಿಸಬೇಕು.
ಜಿ.ವಿ.ಹಿರೇಮಠ, ಮಠದ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.