ಗದಗ: ‘ಕೊರೊನಾ ನಮಗೆ ಸಂಯಮದ ಪಾಠ ಕಲಿಸಿದೆ. ಇಂತಹ ಸಂದಿಗ್ಧ ಕಾಲದಲ್ಲಿ ನಾವು ಸಮಾಜವನ್ನು ಕಟ್ಟಬೇಕಿದೆ’ ಎಂದು ದಯಾನಂದ ಪುರಿ ಸ್ವಾಮೀಜಿ ಹೇಳಿದರು.
ಕರ್ನಾಟಕ ರಾಜ್ಯ ದೇವಾಂಗ ಸಂಘ, ಗದಗ ಜಿಲ್ಲಾ ದೇವಾಂಗ ಸಂಘ, ದೇವಾಂಗ ಮಹಿಳಾ ಮಂಡಳ ಹಾಗೂ ಗದಗ ತಾಲ್ಲೂಕು ದೇವಾಂಗ ಯುವಕ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಗದಗ- ಬೆಟಗೇರಿಯ ದೇವಾಂಗ ಸಮಾಜ ಪುರಾತನ ಇತಿಹಾಸ ಹೊಂದಿದೆ. ಶೂನ್ಯವಾಗಿದ್ದ ಗುರುಪೀಠವನ್ನು ತುಂಬಲು ಬೆಟಗೇರಿಯ ಹಿರಿಯರು ಶ್ರಮಿಸಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಸಮಾಜದ ಅಭಿವೃದ್ಧಿಗಾಗಿ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು, ಮಹಿಳಾ ಸಮಾವೇಶ ನಡೆಯಬೇಕು. ಈ ನಿಟ್ಟಿನಲ್ಲಿ ಒಗ್ಗಟ್ಟು ಪ್ರದರ್ಶನಗೊಳ್ಳಬೇಕು’ ಎಂದು ಹೇಳಿದರು.
ಕರ್ನಾಟಕ ರಾಜ್ಯ ದೇವಾಂಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ. ರಮೇಶ ಮಾತನಾಡಿ, ‘ರಾಜ್ಯದಲ್ಲಿ 25ರಿಂದ 30 ಲಕ್ಷದಷ್ಟಿರುವ ದೇವಾಂಗ ಸಮುದಾಯ ಶಿಕ್ಷಣ ಸಂಘಟನೆಯ ಧ್ಯೇಯವನ್ನಿರಿಸಿಕೊಂಡು ದೂರದೃಷ್ಟಿಯ ಚಿಂತನೆಗಳ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ. ದೇವಾಂಗ ಸಮುದಾಯ ರಾಜಕೀಯ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ನಾಯಕರನ್ನು ಹೊಂದಿದೆ. ಇದರಿಂದ ದೇವಾಂಗರ ಅಭಿವೃದ್ಧಿ ಕುಂಠಿತವಾಗಿದೆ. ಸಮುದಾಯದ ಗಣತಿ ಕಾರ್ಯ ನಡೆದು ನಮ್ಮ ಇರುವಿಕೆಯನ್ನು ಸಂಖ್ಯೆಯ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಬೇಕಾದ ಅಗತ್ಯ ಇದೆ’ ಎಂದು ಹೇಳಿದರು.
ದಶರಥರಾಜ ಕೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಯಳವತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ದೇವಾಂಗ ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕ ಬಣ್ಣದ, ಮಹಿಳಾ ಮಂಡಳದ ನಿಕಟಪೂರ್ವ ಅಧ್ಯಕ್ಷೆ ರತ್ನಾ ಗಾರ್ಗಿ, ಪ್ರೇಮನಾಥ ಬಣ್ಣದ, ಮಹಾಬಳೇಶ್ವರಪ್ಪ ಬೇವಿನಮರದ, ಸುಭಾಸ ಹುಲಗೂರ ಮಾತನಾಡಿದರು.
ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಎಚ್.ಕೆ.ಪಾಟೀಲ, ಎಸ್.ವಿ.ಸಂಕನೂರ, ರಾಜ್ಯ ದೇವಾಂಗ ಸಂಘದ ಚೂಡಾಮಣಿ, ಮಂಜುಳಾ, ರಾಜೇಂದ್ರ ಬರದ್ವಾಡ, ಮಲ್ಲಿಕಾರ್ಜುನ ಬೆಲ್ಲದ, ಶಂಕ್ರಪ್ಪ ಬರಗಿ, ಪ್ರೇಮನಾಥ ಬಣ್ಣದ, ಮಹಾಬಳೇಶ್ವರಪ್ಪ ಬೇವಿನಮರದ, ಪ್ರಕಾಶ ಹತ್ತಿಕಾಳ, ನೂತನ ಪದಾಧಿಕಾರಿಗಳಾದ ಅಶೋಕ ಹೊನ್ನಳ್ಳಿ, ಪ್ರಭು ನೀಲಗುಂದ, ಸುಭಾಸ ಹುಲಗೂರ, ವಸಂತ ಇಂಜನಿ, ನಿರ್ಮಲಾ ಕೊಳ್ಳಿ, ಸುಜಾತಾ ಕಾಕಣಕಿ, ಮಹೇಶ ಕೋಚಿ, ರಾಜೇಂದ್ರ ಕಂಗೂರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.