ADVERTISEMENT

₹ 1 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಶಾಲಾ ಕೊಠಡಿ ಉದ್ಘಾಟಿಸಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 4:41 IST
Last Updated 21 ಮಾರ್ಚ್ 2022, 4:41 IST
ನರಗುಂದ ತಾಲ್ಲೂಕು ಬೂದಿಹಾಳ ನವ ಗ್ರಾಮದಲ್ಲಿ ಶಾಲಾ ಕೊಠಡಿಗಳನ್ನು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು
ನರಗುಂದ ತಾಲ್ಲೂಕು ಬೂದಿಹಾಳ ನವ ಗ್ರಾಮದಲ್ಲಿ ಶಾಲಾ ಕೊಠಡಿಗಳನ್ನು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು   

ನರಗುಂದ: ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸುವ ಮೂಲಕ ಶಿಕ್ಷಣ ನೀಡಬೇಕು. ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿ ಮಾಡಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ತಾಲ್ಲೂಕಿನ ಬೂದಿಹಾಳ ನವಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಶಾಲಾ ಕೊಠಡಿಗಳ ಉದ್ಘಾಟನೆ ಹಾಗೂ ಎಸ್ಸಿ ಕಾಲೊನಿಯಲ್ಲಿ ತಡೆಗೋಡೆ ನಿರ್ಮಾಣ, ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜಾ ಸಮಾರಂಭದಲ್ಲಿ ಮಾತನಾಡಿದರು.

ಶಾಲಾ ಕೊಠಡಿಗಳನ್ನು ಉದ್ಘಾಟಿಸುವ ಮೂಲಕ ಪವಿತ್ರ ಕಾರ್ಯ ಮಾಡಲಾಗಿದೆ. ಇಲ್ಲಿ ಕಲಿತ ಮಕ್ಕಳು ತಮ್ಮ ಜೀವನ ರೂಪಿಸಿಕೊಳ್ಳುವ ಹಾಗೆ ಶಿಕ್ಷಣ ನೀಡಬೇಕು ಎಂದರು. ಕೋವಿಡ್ ನಿರಂತರ ನೋವು ನೀಡಿದೆ. ಈಗಷ್ಟೇ ಆರ್ಥಿಕ ಸಬಲತೆ ಬರುತ್ತಿದೆ. ಅದರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಹಾಯದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಬಹುದಿನದ ಬೇಡಿಕೆಯಾಗಿದ್ದ ತಡೆಗೋಡೆ ನಿರ್ಮಾಣ ಹಾಗೂ ಸಿಸಿರಸ್ತೆಯನ್ನು ₹ 70 ಲಕ್ಷದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.

ADVERTISEMENT

ಬೂದಿಹಾಳ ಗ್ರಾಮದ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು. ಬಿಜೆಪಿ ಮುಖಂಡರಾದ ಚಂದ್ರು ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ಬಾಬು ಹಿರೆಹೊಳಿ, ಕೊಟ್ರೇಶ್ ಕೊಟ್ಟೂರಶೆಟ್ರ ಮಾತನಾಡಿದರು.

ಕೊಣ್ಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೂಳಪ್ಪ ಹುಜರತ್ತಿ, ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದಗೌಡ ಪಾಟೀಲ, ಎನ್.ಕೆ.ಸೋಮಾಪುರ, ಎ.ಎಂ.ಹುಡೇದ, ಎಸ್.ಆರ್.ಯಲ್ಲಪ್ಪಗೌಡ್ರ, ಎಂ.ಎಚ್.ತಿಮ್ಮನಗೌಡ್ರ, ಕೃಷ್ಣಪ್ಪ ಚವ್ಹಾಣ, ಹನುಮಂತಗೌಡ ಪಾಟೀಲ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು,.ಬೂದಿಹಾಳ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.