ರೋಣ: ‘ಮತಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವ ಸಾಮರ್ಥ್ಯವಿದ್ದು, ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಸುಭಾಷ್ ನಗರದ ಗುರುಬಸವೇಶ್ವರ ಸರಳ ಸಜ್ಜನಿಕೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಮಿತಿ ಉದ್ಘಾಟನೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.
‘ಪಟ್ಟಣದ ರೈತರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವುದು ನನ್ನ ಮೊದಲ ಆದ್ಯತೆಯಾಗಿದೆ. ಪಟ್ಟಣದ ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಪ್ರಯತ್ನಿಸಲಾಗಿದೆ. ಜಗಳೂರು ಕೆರೆಯ ಮೂಲಕ ರೋಣ ಕುಡಿಯುವ ನೀರಿನ ಯೋಜನೆ ಕಲ್ಪಿಸಲಾಗಿದೆ’ ಎಂದರು.
ಅಮೃತ ಯೋಜನೆ 2.0 ಅಡಿ ಪ್ರತಿ ಮನೆಗಳಿಗೂ ನಲ್ಲಿ ಅಳವಡಿಸುವ ಕಾರ್ಯ ಜಾರಿಯಲ್ಲಿದ್ದು, ಕ್ಷೇತ್ರದ ಬಡ ಜನತೆಯ ಅನುಕೂಲಕ್ಕಾಗಿ ಗುಣಮಟ್ಟದ ವಸತಿ ಶಾಲೆಗಳನ್ನು ಕಲ್ಪಿಸಲಾಗಿದೆ. ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆ ಪ್ರಾರಂಭಿಸಲಾಗಿದ್ದು, ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ ವಸತಿ ಶಾಲೆ ತೆರೆಯಲಾಗಿದೆ. ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಖರೀದಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದರು.
ರೈತರ ಅನುಕೂಲಕ್ಕಾಗಿ ₹6 ಕೋಟಿ ವೆಚ್ಚದ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಗಿದ್ದು, ಹಿರೇಮನ್ನೂರು ಗ್ರಾಮದಿಂದ ಬಾಸಲಾಪುರ ಮಾರ್ಗವಾಗಿ ರೋಣ ರಸ್ತೆ ನಿರ್ಮಿಸಲಾಗುವುದು. ರೋಣದಿಂದ ಕುರಹಟ್ಟಿ ಮಾರ್ಗವಾಗಿ ಕೊತಬಾಳವರೆಗಿನ 37 ಕಿಮೀ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ರಸ್ತೆ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.
ಪಟ್ಟಣದ ಸಿಸಿ ರಸ್ತೆಗಳ ದುರಸ್ತಿಗೆ ₹4 ಕೋಟಿ ನೀಡಲಾಗಿದ್ದು, ಆಸರೆ ಪ್ಲಾಟ್ 11 ಎಕರೆ ಜಮೀನನ್ನು ಅಳತೆ ಮಾಡಿಸಲಾಗಿದ್ದು, ಅತಿ ಶೀಘ್ರದಲ್ಲಿ ಫಲಾನುಭವಿಗಳಿಗೆ ಪಟ್ಟಾ ವಿತರಣೆ ಮಾಡಲಾಗುವುದು ಎಂದರು.
ಪುರಸಭೆ ಸದಸ್ಯ ಮಲ್ಲಯ್ಯ ಮಹಾಪುರುಷಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಪುರಸಭೆ ಸದಸ್ಯರು ಹಾಗೂ ಶಾಸಕರನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ಐ.ಎಸ್. ಪಾಟೀಲ, ಮಿಥುನ ಪಾಟೀಲ, ವಿ.ಆರ್. ಗುಡಿಸಾಗರ, ಸಿದ್ದಣ್ಣ ಬಂಡಿ, ಪಿ.ಬಿ. ಅಳಗವಾಡಿ, ವೀರಣ್ಣ ಶೆಟ್ಟರ್, ವಿ.ಬಿ. ಸೋಮನಕಟ್ಟಿಮಠ, ಎಚ್.ಎಸ್. ಸೋಂಪುರ, ಯೂಸುಫ್ ಇಟಗಿ, ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನುಮಂತ ತಳ್ಳಿಕೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.