ADVERTISEMENT

ಅಕ್ಷರ ಕ್ರಾಂತಿಗೆ ಮುಂದಾದ ವಿದ್ಯಾರ್ಥಿಗಳು

ಗ್ರಾಮೀಣ ಅನಕ್ಷರಸ್ಥರಿಗೆ ಅ, ಆ, ಇ,ಈ.. ಪಾಠ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 7:33 IST
Last Updated 11 ಏಪ್ರಿಲ್ 2021, 7:33 IST
ನರೇಗಲ್ ಸಮೀಪದ ಕೋಚಲಾಪುರ ಗ್ರಾಮದಲ್ಲಿ ಅಕ್ಷರಕ್ರಾಂತಿಗೆ ಮುಂದಾಗಿರುವ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು
ನರೇಗಲ್ ಸಮೀಪದ ಕೋಚಲಾಪುರ ಗ್ರಾಮದಲ್ಲಿ ಅಕ್ಷರಕ್ರಾಂತಿಗೆ ಮುಂದಾಗಿರುವ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು   

ನರೇಗಲ್:‌ ಅನಕ್ಷರಸ್ಥರಿಗೆ ಅ, ಆ, ಇ, ಈ... ಕನ್ನಡ ವರ್ಣಮಾಲೆ ಕಲಿಸುವ ಮೂಲಕ ಅಕ್ಷರ ಕ್ರಾಂತಿಗೆ ಮುಂದಾಗಿದ್ದಾರೆ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು.

‘ವಿದ್ಯಾಭ್ಯಾಸದ ಅವಧಿಯಲ್ಲೂ ಸಮಾಜ ಸೇವೆ ಮಾಡಬಹುದು. ನಾವು ಇದ್ದ ಸ್ಥಳದಲ್ಲೇ ಸೇವೆ ಮಾಡಲು ಲೆಕ್ಕವಿಲ್ಲದಷ್ಟು ಅವಕಾಶಗಳಿವೆ. ಅವುಗಳನ್ನು ಗುರುತಿಸುವ ಸೂಕ್ಷ್ಮ ಮನಸ್ಸು ಇರಬೇಕು’ ಎಂದು ಹೇಳಿದ ಪ್ರಾಧ್ಯಾಪಕರ ಮಾತಿನಿಂದ ಸ್ಫೂರ್ತಿಗೊಂಡ ರೆಂಜರ್ಸ್‌, ರೋವರ್ಸ್‌ ಘಟಕದ ವಿದ್ಯಾರ್ಥಿಗಳು ದೇವಸ್ಥಾನದ ಆವರಣ, ಮನೆಯ ಅಂಗಳದ ಮುಂದೆ ಕುಳಿತಿರುವ ಅನಕ್ಷರಸ್ಥ ಗೃಹಣಿಯರಿಗೆ, ಹಿರಿಯರಿಗೆ, ರೈತರಿಗೆ, ಕೃಷಿ ಕಾರ್ಮಿಕರಿಗೆ ಹಾಗೂ ಕಟ್ಟಡ ಮತ್ತು ಕೂಲಿ ಕಾರ್ಮಿಕರಿಗೆ ಅಕ್ಷರ ಜ್ಞಾನವನ್ನು ನೀಡುತ್ತಿದ್ದಾರೆ.

ಆರಂಭದಲ್ಲಿ ಒಂದು ಕಡೆ ಸೇರಿಸಿ ಅವರಿಗೆ ತಿಳಿವಳಿಕೆ ಹೇಳುತ್ತಾರೆ. ನಂತರ ಮೂಲಾಕ್ಷರ ಕಲಿಸುತ್ತಾರೆ. ಮುಂದುವರಿದು ಅವರಿಗೆ ಹೆಸರು, ಪೂರ್ಣ ಹೆಸರು, ಗ್ರಾಮದ ಹೆಸರು ಬರೆಯುವುದನ್ನು ರೂಢಿ ಮಾಡಿಸುತ್ತಾರೆ. ಅದೇ ರೀತಿ ಸಹಿ ಮಾಡುವುದನ್ನು ಸಹ ಕಲಿಸುತ್ತಿದ್ದಾರೆ. ಪದವಿ ಶಿಕ್ಷಣದ ಕಲಿಕೆಯ ಜೊತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ADVERTISEMENT

ಕೋಚಲಾಪುರ ಗ್ರಾಮದ ವಿದ್ಯಾರ್ಥಿಗಳಾದ ಹಸೀನಾ ಬೇಗಂ, ಅಲ್ತಾಫ್‌ ಬಂಕಾಪುರ, ಬಾನು ನದಾಫ್ ಅವರು ಕಾಲೇಜು ಮುಗಿದ ನಂತರ ಹಾಗೂ ರಜಾ ದಿನಗಳಲ್ಲಿ ಪಾಠಿ, ಬಳಪ ಹಿಡಿದು ನಾಗರಿಕರ ಬಳಿಗೆ ಹೋಗುತ್ತಾರೆ. ಬೇಸಿಗೆ ಎಂದು ಮಧ್ಯಾಹ್ನದ ವೇಳೆ ದೇವಸ್ಥಾನದ ಆವರಣದಲ್ಲಿ ಹಾಗೂ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅನಕ್ಷರಸ್ಥರನ್ನು ಎಬ್ಬಿಸಿ ಅವರ ಬೆರಳು ಹಿಡಿದು ಅಕ್ಷರ ತಿದ್ದಿಸುತ್ತಿದ್ದಾರೆ.

‘ಗ್ರಾಮದ ಜನರು ಸಹಕಾರ ನೀಡಿ, ನಮ್ಮ ಆಸಕ್ತಿಗೆ ಬೆನ್ನು ತಟ್ಟುತ್ತಿದ್ದಾರೆ. ಅಷ್ಟೇ ಅಲ್ಲದೆ ಶಿಕ್ಷಕರಿಗೆ ನೀಡುವ ಹಾಗೆ ನಮಗೂ ಗೌರವ ನೀಡುತ್ತಿದ್ದಾರೆ’ ಎಂದು ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ಬ್ಯಾಂಕ್‌ ಖಾತೆ, ಪ್ಯಾನ್‌ ಕಾರ್ಡ್‌, ಎಟಿಎಂ ಸೇರಿದಂತೆ ಖಾಸಗಿ ಹಾಗೂ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಅಕ್ಷರ ಜ್ಞಾನ ಅವಶ್ಯಕ. ಹೆಬ್ಬೆಟ್ಟು ಸಹಿ ಬಾಳಿಗೆ ಕಹಿ ಎಂದು ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಈ ಅಕ್ಷರ ಕಾರ್ಯಕ್ರಮವನ್ನು ಎಲ್ಲಾ ಗ್ರಾಮಗಳಿಗೆ ವಿಸ್ತರಿಸಲಿದ್ದೇವೆ’ ಎಂದು ರೆಂಜರ್ಸ್‌ ಮತ್ತು ರೋವರ್ಸ್‌ ಮಾರ್ಗದರ್ಶಕ ಅನಿಲಕುಮಾರ ಹಾಗೂ ಡಾ. ನಸರಿನ್‌ಬಾನು ತಿಳಿಸಿದರು.

ಶಿಕ್ಷಣ ಸಮಾಜಕ್ಕಾಗಿ ಮೀಸಲಾಗಿರಲಿ ಎಂದು ಮಕ್ಕಳಿಗೆ ಹೇಳಿದ ಪಾಠ ಅಕ್ಷರ ಕ್ರಾಂತಿಗೆ ಸಾಕ್ಷಿಯಾಗಿದೆ.

ಡಾ. ಜಗದೀಶ ಹುಲ್ಲೂರ, ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.