ಗದಗ: ‘ಆಧುನಿಕ ದಿನಗಳಲ್ಲಿ ಪರಿಸರದ ಮೇಲಿನ ಕಾಳಜಿ ಕಡಿಮೆ ಆಗಿರುವುದು ಆತಂಕದ ವಿಷಯ. ಉತ್ತಮ ಪರಿಸರ ಹೊಂದುವುದು ಇಂದಿನ ಅಗತ್ಯವಾಗಿದೆ. ಆಗ ಮಾತ್ರ ನಾವೆಲ್ಲರೂ ಆರೋಗ್ಯದಿಂದ ಇರಲು ಸಾಧ್ಯ’ ಎಂದು ಲೋಕಾಯುಕ್ತ ಅಧಿಕಾರಿ ಪರಮೇಶ್ವರ ಕವಟಗಿ ಹೇಳಿದರು.
ನಗರದ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈ ವರ್ಷದ ಘೋಷವಾಕ್ಯದಂತೆ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಸಂತೋಷ ಎನ್. ಬೆಳವಡಿ ಮಾತನಾಡಿ, ‘ಪರಿಸರ ಉಳಿಸುವುದು, ಬೆಳೆಸುವುದು, ಮಾಲಿನ್ಯ ಮುಕ್ತ ಮಾಡುವುದರ ಜೊತೆಗೆ ಮುಂದಿನ ಪೀಳಿಗೆಗಾಗಿ ಗಿಡಗಳನ್ನು ನೆಟ್ಟು, ಪೋಷಿಸಬೇಕು’ ಎಂದರು.
‘ಮಹಾವಿದ್ಯಾಲಯದ ಸಿಬ್ಬಂದಿ ತಮ್ಮ ಜನ್ಮದಿನದಂದು ಮಹಾವಿದ್ಯಾಲಯದ ಆವರಣದಲ್ಲಿ ಸಸಿ ನೆಡುವ ಮೂಲಕ ಮಹಾವಿದ್ಯಾಲಯದಲ್ಲಿ ಔಷಧ ವನ ನಿರ್ಮಾಣ ಮಾಡಲಾಗುತ್ತಿದೆ’ ಎಂದರು.
ಎನ್ಎಸ್ಎಸ್ ಘಟಕದ ಸಂಯೋಜಕ ಡಾ. ಬೂದೇಶ ಎಂ. ಕನಾಜ ಮಾತನಾಡಿದರು. ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಡಿ.ಜಿ.ಕೋಲ್ಮೆ, ಜೈರಾಜ್ ಪಿ. ಬಸರಿಗಿಡದ, ಎಂ.ವಿ.ಸೊಬಗಿನ, ಕುಮಾರ ಚೌಡಪ್ಪಳವರ, ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹರ್ಷ, ನಂದಿತಾ ಕಾರ್ಯಕ್ರಮ ನಿರೂಪಿಸಿದರು. ರೋಹಿಣಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.