
ಲಕ್ಷ್ಮೇಶ್ವರ: ತಾಲ್ಲೂಕಿನ ಹಿರೇಮಲ್ಲಾಪುರ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿ ಇರುವ ಎಥೆನಾಲ್ ಕಾರ್ಖಾನೆಯನ್ನು ಬೇಗನೇ ಆರಂಭಿಸದಿದ್ದರೆ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಜಯನಗೌಡ್ರ ಆಗ್ರಹಿಸಿದರು.
ಈ ಕುರಿತು ಸೋಮವಾರ ಸಂಘದ ಸದಸ್ಯರೊಂದಿಗೆ ತಹಶೀಲ್ದಾರ್ ಎಂ.ಧನಂಜಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
‘ಎಥೆನಾಲ್ ಕಾರ್ಖಾನೆ ಆರಂಭ ಆಗುವುದರಿಂದ ರೈತರು ಬೆಳೆಯುವ ಮೆಕ್ಕೆಜೋಳಕ್ಕೆ ಭಾರೀ ಬೇಡಿಕೆ ಬರುತ್ತದೆ. ರೈತರು ಅಲ್ಲಿ ಇಲ್ಲಿ ಮೆಕ್ಕೆಜೋಳ ಮಾರಾಟ ಮಾಡುವ ತೊಂದರೆ ತಪ್ಪುತ್ತದೆ. ಇದರಿಂದಾಗಿ ಅವರಿಗೆ ಸಾಕಷ್ಟು ಅನುಕೂಲ ಆಗುತ್ತದೆ’ ಎಂದು ತಿಳಿಸಿದರು.
‘ಅದರೊಂದಿಗೆ ತಾಲ್ಲೂಕಿನ ನೂರಾರು ನಿರುದ್ಯೋಗಿ ಯುವ ಜನತೆಗೆ ಕೆಲಸ ಸಿಗುತ್ತದೆ. ಕಾರಣ ತಾಲ್ಲೂಕು ಆಡಳಿತ ವದಂತಿಗಳಿಗೆ ಕಿವಿಗೊಡದೆ ಎಥೆನಾಲ್ ಕಾರ್ಖಾನೆ ಆರಂಭಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಬಗೆ ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಡಿ.20ರಿಂದ ಅಹೋರಾತ್ರಿ ಧರಣಿ ನಡೆಸಲು ನಮಗೆ ಸ್ಥಳಾವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
ಸುರೇಶ ಸಿಂದಗಿ ಮಾತನಾಡಿದರು.
ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಕ್ಷ್ಮವ್ವ ಮೆಳ್ಳಿಗಟ್ಟಿ ಮಾತನಾಡಿ ‘ಹಿರೇಮಲ್ಲಾಪುರದಲ್ಲಿ ಎಥೆನಾಲ್ ಕಾರ್ಖಾನೆ ಕಟ್ಟಡ ಮುಗಿಯುವ ಹಂತದಲ್ಲಿದೆ. ಇಂತಹ ಸಮಯದಲ್ಲಿ ಅದರ ಆರಂಭಕ್ಕೆ ವಿರೋಧ ವ್ಯಕ್ತ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕಾರ್ಖಾನೆ ಆರಂಭ ಆಗದಿದ್ದರೆ ಮೆಕ್ಕೆಜೋಳ ಬೆಳೆಯುವ ತಾಲ್ಲೂಕಿನ ರೈತರಿಗೆ ಅನ್ಯಾಯ ಆಗುತ್ತದೆ. ಕಾರಣ ಕಾರ್ಖಾನೆ ಆರಂಭ ಆಗಲೇಬೇಕು’ ಎಂದು ಒತ್ತಾಯಿಸಿದರು.
ರೈತ ಮುಖಂಡ ಟಾಕಪ್ಪ ಸಾತಪುತೆ ಮಾತನಾಡಿ ‘ತಾಲ್ಲೂಕಿನಲ್ಲಿ ಹೊಸ ಹೊಸ ಕಾರ್ಖಾನೆಗಳು ಸ್ಥಾಪನೆ ಆಗಬೇಕು. ಸದ್ಯ ನಿರ್ಮಾಣ ಆಗುತ್ತಿರುವ ಎಥೆನಾಲ್ ಕಾರ್ಖಾನೆ ರೈತರ ಪರವಾಗಿದೆ. ಯಾರೇ ಆಗಲಿ ಇದನ್ನು ವಿರೋಧಿಸುವುದು ಸರಿ ಅಲ್ಲ’ ಎಂದು ಹೇಳಿದರು.
ಆದೇಶ ಹುಲಗೂರ, ನಾಗರಾಜ ಕಳ್ಳಿಹಾಳ, ವಿರುಪಾಕ್ಷಪ್ಪ ಅರಳಿ, ಶರಣಪ್ಪ ಕಮ್ಮಾರ, ಶರಣಪ್ಪ ಕಮ್ಮಾರ, ಶಿವಪ್ಪನಾಯಕ ಮೆಳ್ಳಿಗಟ್ಟಿ, ಯಲ್ಲಪ್ಪ ವಾಲ್ಮೀಕಿ, ಅಬ್ದುಲ್ರೆಹಮಾನ್ ಕಮಡೊಳ್ಳಿ, ಈಶ್ವರ ಮೆಳ್ಳಿಗಟ್ಟಿ, ಮುತ್ತವ್ವ ವಾಲ್ಮೀಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.