ADVERTISEMENT

ಗಜೇಂದ್ರಗಡ: ಬಾವಿಯಲ್ಲಿ ತೇಲಿದ ಅವಧಿ ಮೀರಿದ ಔಷಧಿಗಳು

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 23:31 IST
Last Updated 2 ಜೂನ್ 2023, 23:31 IST
ಗಜೇಂದ್ರಗಡದ ರೋಣ ರಸ್ತೆಯಲ್ಲಿರುವ ಚಂದ್ರಕಾಂತ ಮಹೇಂದ್ರಕರ ಎಂಬುವವರ ತೋಟದ ಬಾವಿಯಲ್ಲಿ ಅವಧಿ ಮೀರಿದ ಔಷಧಿಗಳು ತೇಲುತ್ತಿರುವುದು
ಗಜೇಂದ್ರಗಡದ ರೋಣ ರಸ್ತೆಯಲ್ಲಿರುವ ಚಂದ್ರಕಾಂತ ಮಹೇಂದ್ರಕರ ಎಂಬುವವರ ತೋಟದ ಬಾವಿಯಲ್ಲಿ ಅವಧಿ ಮೀರಿದ ಔಷಧಿಗಳು ತೇಲುತ್ತಿರುವುದು   

ಗಜೇಂದ್ರಗಡ: ಪಟ್ಟಣದ ರೋಣ ರಸ್ತೆಯ ಪ್ರವಾಸಿ ಮಂದಿರದ ಹತ್ತಿರದ ತಮ್ಮ ತೋಟದ ಬಾವಿಯಲ್ಲಿ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ನಿಯಮ ಉಲ್ಲಂಘಿಸಿ, ಫಾರ್ಮಾಲಿಂಕ್ ಕಂಪನಿಯೊಂದರ ಅವಧಿ ಮೀರಿದ ಔಷಧಗಳನ್ನು ಎಸೆಯಲಾಗಿದೆ ಎಂದು ಚಂದ್ರಕಾಂತ ಮಹೇಂದ್ರಕರ ಎಂಬುವವರು ಇತ್ತೀಚೆಗೆ ಜಿಲ್ಲಾ ಸಹಾಯಕ ಔಷಧ ನಿಯಂತ್ರಣಾಧಿಕಾರಿಗೆ ದೂರು ಸಲ್ಲಿಸಿದ್ದರು.

ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಧನಂಜಯ ಅವರು ಸಿದ್ದಲಿಂಗೇಶ್ವರ ಫಾರ್ಮಾಲಿಂಕ್‌ ಔಷಧ ಅಂಗಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಟ್ಟಣಕ್ಕೆ ಮಲಪ್ರಭಾ ಕುಡಿಯುವ ನೀರು ಪೂರೈಸುವ ಪೈಪ್, ಬಾವಿ ಸಮೀಪವೇ ಒಡೆದಿದ್ದು, ಆ ನೀರು ಬಾವಿಗೆ ಹರಿದಿದ್ದರಿಂದ ಮಾತ್ರೆಗಳು, ಔಷಧ ಬಾಟಲ್‌ಗಳು ತೇಲಾಡುತ್ತಿವೆ. ಇದರಿಂದ ತೋಟದ ಸುತ್ತಲಿನ ರೈತರು ಆತಂಕಗೊಂಡಿದ್ದು, ರಾಸಾಯನಿಕ ಪದಾರ್ಥಗಳು ಅಂತರ್ಜಲ ಸೇರಿದರೆ ಗತಿ ಏನು? ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಮ್ಮ ಹೊಲ ಮಹೇಂದ್ರಕರ ಅವರ ಹೊಲದ ಪಕ್ಕದಲ್ಲಿದೆ. ಅವರ ತೋಟದ ಬಾವಿಯಲ್ಲಿ ಅವಧಿ ಮೀರಿದ ಅಪಾರ ಪ್ರಮಾಣದ ಔಷಧಗಳನ್ನು ಹಾಕಿದ್ದರಿಂದ ಆತಂಕ ಉಂಟಾಗಿದೆ. ನಮ್ಮ ಹೊಲದಲ್ಲಿನ ಕೊಳವೆಬಾವಿ ನೀರನ್ನು ಕುಡಿಯಲೂ ಹೆದರಿಕೆಯಾಗುತ್ತಿದೆ’ ಎಂದು ಪ್ರವೀಣ ಕಮಾಟ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.