ಗಜೇಂದ್ರಗಡ (ಗದಗ ಜಿಲ್ಲೆ): ಕಳ್ಳರ ಹಾವಳಿಯಿಂದ ಮೆಣಸಿನಕಾಯಿ ಫಸಲು ರಕ್ಷಿಸಿಕೊಳ್ಳಲು ತಾಲ್ಲೂಕಿನ ರಾಜೂರ ಗ್ರಾಮಲ್ಲಿ ರೈತರು ಜಮೀನಿನಲ್ಲಿ ₹ 12 ಸಾವಿರ ವೆಚ್ಚದ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ.
‘ತಾಲ್ಲೂಕಿನಲ್ಲಿ ಬರಗಾಲ ಇದೆ. ಮುಂಗಾರು ಬೆಳೆ ಹಾಳಾಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮೆಣಸಿನಕಾಯಿ ಬೆಳೆದಿದ್ದೇವೆ. ಮೆಣಸಿನಕಾಯಿ ಫಸಲು ಕಟಾವಿಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಕಳ್ಳರ ಕಾಟವಿದ್ದು, ಬೆಳೆ ರಕ್ಷಿಸಿಕೊಳ್ಳಲು ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಂಡಿದ್ದೇವೆ’ ಎಂದು ರೈತ ರಮೇಶ ಗೂಳಿ ತಿಳಿಸಿದರು.
‘360 ಡಿಗ್ರಿ ತಿರುಗುವ ಸಿಸಿಟಿವಿ ಕ್ಯಾಮೆರಾ, ಎರಡು ಎಕರೆ ವ್ಯಾಪ್ತಿವರೆಗೆ ದೃಶ್ಯ ಸೆರೆಹಿಡಿಯುತ್ತದೆ. ರಾತ್ರಿಯಲ್ಲೂ ಸ್ಪಷ್ಟತೆ ಇರುತ್ತದೆ. ಕ್ಯಾಮೆರಾ ಬಳಿ ಯಾರೇ ಬಂದರೂ ಬೀಪ್ ಶಬ್ದ ಆಗುತ್ತದೆ. ಅದರಲ್ಲಿನ ಸಿಮ್ ನಂಬರ್ಗೆ ಕರೆ ಮಾಡಬಹುದು. ಮೊಬೈಲ್ನಲ್ಲೇ ಕ್ಯಾಮೆರಾ ತಿರುಗಿಸಿ, ಸುತ್ತಲೂ ವೀಕ್ಷಿಸಬಹುದು. ಸೋಲಾರ್ ಪ್ಲೇಟ್ ಇರುವುದರಿಂದ ಬ್ಯಾಟರಿ, ವಿದ್ಯುತ್ ಸಂಪರ್ಕವೂ ಬೇಕಿಲ್ಲ. ಮನೆಯಿಂದಲೇ ನಿಗಾ ವಹಿಸುತ್ತೇವೆ’ ಎಂದು ರೈತ ರಾಜು ನಧಾಫ್ ವಿವರಿಸಿದರು.
‘ಜಮೀನಿನಲ್ಲಿ ಕೃಷಿ ಕಾರ್ಮಿಕರು ಕೆಲಸದ ಮೇಲೂ ನಿಗಾ ವಹಿಸಬಹುದು. ಸಿಸಿಟಿವಿ ಕ್ಯಾಮೆರಾಗೆ ಕರೆ ಮಾಡಿ, ಕೂಲಿ ಕಾರ್ಮಿಕರೊಂದಿಗೆ ಮಾತನಾಡಬಹುದು. ಇದರಿಂದ ಬಹಳ ಅನುಕೂಲವಾಗಿದೆ’ ಎಂದು ಮಹಮ್ಮದ್ ರಫಿ ಮುಜಾವರ ತಿಳಿಸಿದರು.
2 ಎಕರೆ ಸ್ವಂತ 2.20 ಎಕರೆ ಲಾವಣಿ ಪಡೆದ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದೇವೆ. 8 ಕ್ವಿಂಟಲ್ ಫಸಲು ಬಂದಿದ್ದು ಇನ್ನೂ 6 ಕ್ವಿಂಟಲ್ ಫಸಲು ಬರಲಿದೆ
-ರಮೇಶ ಗೂಳಿ ರೈತ ರಾಜೂರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.