ರೋಣ: ತಾಲ್ಲೂಕಿನ ಸವಡಿ ಗ್ರಾಮದ ನೂರಾರು ರೈತರು ಜೈಕಿಸಾನ್ ಕಂಪನಿಯ ಡಿಎಪಿ ಗೊಬ್ಬರ ಎಂದು ನಂಬಿ ಖರೀದಿಸಿ ಮೋಸ ಹೋಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಸವಡಿ ಗ್ರಾಮದ ರೈತರು ಡಿಎಪಿ ಗೊಬ್ಬರ ಎಂದು ಸಾವಿರಾರು ಟನ್ ಗೊಬ್ಬರ ಖರೀದಿಸಿ ಮೋಸ ಹೋಗಿದ್ದಾರೆ. ಚಿಕ್ಕಮಣ್ಣುರೂ, ಮಲ್ಲಾಪೂರ, ಹೊನ್ನಾಪುರ ರೈತರು ಮೂಟೆಗೆ ₹1,550 ನೀಡಿ ಖರೀದಿಸಿದ್ದಾರೆ.
ಗೊಬ್ಬರ ಖರೀದಿ ಮಾಡಿದ್ದ ರೈತರು ಬಿತ್ತನೆ ವೇಳೆ ಅಳತೆ ಮಾಡುವಾಗ ಕಡಿಮೆ ಸೇರು ಬಂದಿದ್ದರಿಂದ ಇದೂ ಕಳಪೆ ಎಂಬ ಭಾವನೆ ಬಂದಿದೆ. ರೈತರು ಪರಸ್ಪರ ವಿಚಾರ ಹಂಚಿಕೊಂಡಾಗ ನಕಲಿ ಗೊಬ್ಬರ ಎಂಬುದು ಬೆಳಕಿಗೆ ಬಂತು ಎಂದು ರೈತರು ತಿಳಿಸಿದ್ದಾರೆ.
ಕಳಪೆ ಗೊಬ್ಬರ ತಂದು ಕೊಡುವ ಮಧ್ಯವರ್ತಿಗೆ ಕರೆ ಮತ್ತೊಂದು ಲೋಡ್ ಗೊಬ್ಬರ ಬೇಕಾಗಿದೆ ಎಂದು ಕರೆ ಮಾಡಿ ತರಿಸಿಕೊಂಡು ಗ್ರಾಮದ ರೈತರೆಲ್ಲರೂ ಸೇರಿ ವಂಚನೆಗೆ ಮುಂದಾಗಿದ್ದ ಮಂಜುನಾಥ ಸಿ ಹಾಗೂ ಸ್ವಾಮಿ ರಾಚಪ್ಪ ಎಂಬುವವರನ್ನು ಗೊಬ್ಬರ ತುಂಬಿದ ಲಾರಿ ಸಮೇತ ಬಂಧಿಸಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ತಕ್ಷಣವೇ ಘಟನಾ ಸ್ಥಳಕ್ಕೆ ಕೃಷಿ ಇಲಾಖೆ ನಿರ್ದೇಶಕ ರವೀಂದ್ರ ಪಾಟೀಲ ಹಾಗೂ ರೋಣ ಪೊಲೀಸರು ನಕಲಿ ಗೊಬ್ಬರ ಸಮೇತ ಲಾರಿ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ.
ರೈತರು ಎಂದರೆ ಎಲ್ಲರಿಗೂ ಮೋಸ ಮಾಡುವ ಒಂದು ಪ್ರಾಣಿ ಎಂದುಕೊಂಡಿದ್ದಾರೆ. ಸರ್ಕಾರ ಒಳ್ಳೆಯ ರಸಗೊಬ್ಬರ ನೀಡದೇ ಇರುವುದರಿಂದ ಇಂತಹ ಅವಘಡ ಆಗಿವೆ. ರೈತರು ಮೋಸ ಹೋಗಿ ಗೊಬ್ಬರ ಖರೀದಿ ಮಾಡಿದ್ದಾರೆ ಎಂದು ಚಿಕ್ಕಮಣ್ಣೂರು ರೈತ ಶರಣಪ್ಪ ಕೊಪ್ಪದ ಹೇಳಿದರು.
‘ ಡಿಎಪಿ ಗೊಬ್ಬರ ಎಂದು ಎಂದು ನಂಬಿ ದುಡ್ಡು ಕೊಟ್ಟು ಬೂದಿ ಖರೀದಿಸಿದೆವು. ಆದರೆ ಯಾವುದೇ ಫಲ ಸಿಗಲಿಲ್ಲ ಎಂದು ರೈತರಾದ ಬಸವರಾಜ ಎಲಿಗಾರ್, ಮಲ್ಲಪ್ಪ ಹಕ್ಕಿ, ಮಲ್ಲಪ್ಪ ತಿಳಿಸಿದರು.
‘ಗೊಬ್ಬರದ ಮಾದರಿ ಪರೀಕ್ಷೆ’
‘ಲೋಡ್ ತುಂಬಿದ ಗೊಬ್ಬರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ವರದಿ ಪಡೆದ ಮೇಲೆ ನಿರ್ಧಾರಕ್ಕೆ ಬರಲಾಗುತ್ತದೆ. ಯಾವುದೇ ರಸೀದಿ ಇಲ್ಲದೇ ಗೊಬ್ಬರ ತಂದಿರುವುದರಿಂದ ಅಕ್ರಮ ಗೊಬ್ಬರ ಸಾಗಾಣಿಕೆದಾರರ ಮೇಲೆ ದೂರು ದಾಖಲಿಸಲಾಗಿದೆ’ ಎಂದು ಕೃಷಿ ಇಲಾಖೆಯ ನಿರ್ದೇಶಕ ರವೀಂದ್ರ ಪಾಟೀಲ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.