ADVERTISEMENT

ಗದಗ| ನಗರಸಭೆ ಗದ್ದುಗೆ ಗುದ್ದಾಟ: ಕಾಂಗ್ರೆಸ್‌ಗೆ ಮೇಲುಗೈ

ಪ್ರಾದೇಶಿಕ ಆಯುಕ್ತರ ಆದೇಶ ಎತ್ತಿ ಹಿಡಿದ ಧಾರವಾಡ ಹೈಕೋರ್ಟ್‌ ಪೀಠ: ಮತ್ತೇ ಕಾನೂನು ಹೋರಾಟಕ್ಕೆ ಬಿಜೆಪಿ ಸಜ್ಜು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 4:35 IST
Last Updated 11 ಫೆಬ್ರುವರಿ 2026, 4:35 IST
ಗದಗ ಬೆಟಗೇರಿ ನಗರಸಭೆ
ಗದಗ ಬೆಟಗೇರಿ ನಗರಸಭೆ   

ಗದಗ: ನಕಲಿ ಠರಾವು ಸೃಷ್ಟಿಸಿದ ಆರೋಪಕ್ಕೆ ಗುರಿಯಾಗಿದ್ದ ಗದಗ ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನೀಡಿದ್ದ ಆದೇಶವನ್ನು ಧಾರವಾಡ ಹೈಕೋರ್ಟ್‌ನ ಏಕಸದಸ್ಯ ಪೀಠ ಮಂಗಳವಾರ ಎತ್ತಿ ಹಿಡಿದಿದೆ.

ಮುಂದುವರಿದು, ಪ್ರಾದೇಶಿಕ ಆಯುಕ್ತರ ಅನರ್ಹತೆ ಆದೇಶ ಪ್ರಶ್ನಿಸಿ ನಗರಸಭೆ ಸದಸ್ಯರಾದ ಉಷಾ ದಾಸರ, ಅನಿಲ್‌ ಅಬ್ಬಿಗೇರಿ ಹಾಗೂ ಮುತ್ತು ಮುಶಿಗೇರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಜತೆಗೆ ಮುಂದಿನ 45 ದಿನಗಳ ಒಳಗಾಗಿ ಗದಗ ಬೆಟಗೇರಿ ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸುವಂತೆಯೂ ಆದೇಶಿಸಿದೆ.

ಪ್ರಕರಣದ ಹಿನ್ನಲೆ:

ADVERTISEMENT

ನಗರಸಭೆಗೆ ಸೇರಿದ್ದ 54 ವಕಾರಸಾಲು ಆಸ್ತಿಯನ್ನು ಅಕ್ರಮವಾಗಿ ಗುತ್ತಿಗೆ ನೀಡಲು ನಕಲಿ ಠರಾವು ಸೃಷ್ಟಿಸಿ, ಅದಕ್ಕೆ ಪೌರಾಯುಕ್ತರ ಸಹಿ ಫೋರ್ಜರಿ ಮಾಡಿದ ಆರೋಪ ಹಿಂದಿನ ಅಧ್ಯಕ್ಷೆಯಾಗಿದ್ದ ಉಷಾ ದಾಸರ, ಸದಸ್ಯರಾದ ಅನಿಲ್‌ ಅಬ್ಬಿಗೇರಿ ಹಾಗೂ ಗೂಳಪ್ಪ ಮುಶಿಗೇರಿ ಅವರ ಮೇಲಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಪ್ರಾದೇಶಿಕ ಆಯುಕ್ತರು 2025ರ ಫೆಬ್ರುವರಿ 15ರಂದು ಬಿಜೆಪಿಯ ಮೂವರು ನಗರಸಭಾ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿದ್ದರು. ಇದಾದ ಬಳಿಕ, ಗದ್ದುಗೆ ಗುದ್ದಾಟ ಕೋರ್ಟ್‌ ಅಂಗಳ ತಲುಪಿತ್ತು. ಎರಡೂ ಪಕ್ಷದವರಿಂದ ಕಾನೂನು ಹೋರಾಟಗಳು ನಡೆದಿದ್ದವು. 

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ 2025ರ ಫೆ.28ರಂದೇ ನಿಗದಿಯಾಗಿದ್ದ ಕಾರಣ ಸದಸ್ಯತ್ವ ಅನರ್ಹ ಆದೇಶ ಬಿಜೆಪಿ ಸದಸ್ಯರಿಗೆ ನಿರಾಸೆ ತರಿಸಿತ್ತು. ಆದರೂ, ಫೆ.28ರಂದು ಬೆಳಿಗ್ಗೆಯೇ ಧಾರಾವಾಡ ಹೈಕೋರ್ಟ್‌ ಪೀಠದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡುವಂತೆ ಬಿಜೆಪಿ ಸದಸ್ಯರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಮಾರ್ಚ್‌ 5ರವರೆಗೆ ಚುನಾವಣೆ ನಡೆಸದಂತೆ ಆದೇಶ ನೀಡಿತ್ತು. ಆದರೆ, ಚುನಾವಾಣಾಧಿಕಾರಿ ಗಂಗಪ್ಪ ಎಂ., ‘ಕೋರ್ಟ್‌ ನೀಡಿದ ಆದೇಶ ಪ್ರತಿ ಚುನಾವಣಾ ಪೂರ್ವದಲ್ಲಿ ಸಿಕ್ಕಿಲ್ಲ’ ಎಂದು ಹೇಳಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ, ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆ ಘೋಷಣೆ ಮಾಡಿದ್ದರು. ಅದರಂತೆ ಫೆ. 28ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸದಸ್ಯರಾದ ಕೃಷ್ಣಾ ಪರಾಪುರ ಮತ್ತು ಶಕುಂತಲಾ ಅಕ್ಕಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದನ್ನು ತೀವ್ರವಾಗಿ ವಿರೋಧಿಸಿದ್ದ ಬಿಜೆಪಿ ಸದಸ್ಯರು, ನ್ಯಾಯಾಂಗ ನಿಂದನೆಯ ಅಸ್ತ್ರ ಹಿಡಿದು ಮತ್ತೇ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೀಗೆ ಕಳೆದ ಒಂದು ವರ್ಷದಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ಕಾನೂನು ಹೋರಾಟದ ಮೂಲಕ ಗದ್ದುಗೆ ಗುದ್ದಾಟವನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ.

ಈ ನಡುವೆ, ಸದಸ್ಯರ ಅನರ್ಹತೆ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದ್ದರು ಕೂಡ ಚುನಾವಣಾ ಅಧಿಕಾರಿಗಳಿಂದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ. ಜತೆಗೆ ಮುಂದಿನ 45 ದಿನಗಳ ಒಳಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಬಿಜೆಪಿಯ ಅನರ್ಹ ಸದಸ್ಯರು ಮುಂದೆ ಕೂಡ ಸದಸ್ಯತ್ವ ಪಡೆಯಲು ವಿಫಲರಾದಲ್ಲಿ ನಗರಸಭೆ ಗದ್ದುಗೆ ಕಾಂಗ್ರೆಸ್‌ ಪಾಲಾಗುವುದು ನಿಶ್ಚಿತ. ಅಲ್ಲೀವರೆಗೆ, ನಗರಸಭೆಯಲ್ಲಿ ಆಡಳಿತಾಧಿಕಾರಿ ಅಧಿಕಾರವೇ ಮುಂದುವರಿಯುವುದು ಸ್ಪಷ್ಟವಾಗಿದೆ.

ಚಂದ್ರು ತಡಸದ
ಬಿಜೆಪಿ ಸದಸ್ಯರ ನಗರಸಭೆ ಸದಸ್ಯತ್ವ ಅನರ್ಹತೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶದ ಪ್ರತಿ ಇನ್ನೂ ಕೈಸೇರಿಲ್ಲ. ಕೋರ್ಟ್‌ ಸೂಚನೆಯಂತೆ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ.
ಗಂಗಪ್ಪ ಎಂ. ಉಪವಿಭಾಗಾಧಿಕಾರಿ
ನಮಗೆ ಕಾನೂನಿನ ಬಾಗಿಲು ಇನ್ನೂ ಮುಚ್ಚಿಲ್ಲ
ಚಂದ್ರು ತಡಸದ ‘ಬೆಳಗಾವಿ ಪ್ರಾದೇಶಿಕ ಆಯುಕ್ತರು ನೀಡಿದ್ದ ನಗರಸಭೆ ಸದಸ್ಯತ್ವ ಅನರ್ಹತೆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಪೀಠ ವಜಾಗೊಳಿಸಿದೆ. ಆದರೆ ನಮ್ಮ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ಪಕ್ಷದ ಹಿರಿಯರು ಕಾನೂನು ತಜ್ಞರ ಜತೆಗೆ ಚರ್ಚಿಸಿ ಹೋರಾಟ ಮುಂದುವರಿಸುತ್ತೇವೆ. ಕಾನೂನಿನ ಬಾಗಿಲು ನಮಗೆ ಇನ್ನೂ ಮುಚ್ಚಿಲ್ಲ’ ಎಂದು ನಗರಸಭೆ ಸದಸ್ಯ ಚಂದ್ರು ತಡಸದ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ನ್ಯಾಯಾಲಯದಲ್ಲಿ ನಮ್ಮ ವಿರುದ್ಧ ತೀರ್ಪು ಬಂದರೆ ಏನು ಮಾಡಬೇಕು ಎಂದು ಮೊದಲೇ ಯೋಚಿಸಿದ್ದೇವು. ಅದರಂತೆ ಹೈಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ಮತ್ತೇ ಅರ್ಜಿ ಸಲ್ಲಿಸುತ್ತೇವೆ’ ಎಂದು ತಿಳಿಸಿದರು. ‘ಹೈಕೋರ್ಟ್‌ ಪೀಠ ಮಂಗಳವಾರ ನೀಡಿದ ಆದೇಶದ ಪ್ರಕಾರ ಹಿಂದೆ ನಡೆದಿರುವ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಊರ್ಜಿತ ಆಗುವುದಿಲ್ಲ. ಹಾಗಾಗಿ ಕೊನೆ ಹಂತದವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.
ಸಂಖ್ಯಾಬಲ ಕುಸಿತ
ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ 18 ಸಂಖ್ಯಾಬಲ ಹೊಂದಿತ್ತು. ಇಬ್ಬರು ಪಕ್ಷೇತರರ ಜತೆಗೂಡಿ ಕಾಂಗ್ರೆಸ್‌ಗೆ 17 ಮಂದಿಯ ಸದಸ್ಯ ಬಲ ಇತ್ತು. ನಕಲಿ ಠರಾವು ಸೃಷ್ಟಿಸಿದ ಆರೋಪ ಮೇಲೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೂವರು ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿದ್ದರಿಂದ ಬಿಜೆಪಿಯ ಬಲ 15ಕ್ಕೆ ಕುಸಿದಿತ್ತು. ಈಗ ಹೈಕೋರ್ಟ್‌ ಆದೇಶ ಕೂಡ ಅದನ್ನು ಎತ್ತಿಹಿಡಿದಿದ್ದು ನಗರಸಭೆ ಗದ್ದುಗೆ ಹಿಡಿಯಬೇಕು ಎಂಬ ಅವರ ಕನಸಿಗೆ ಸದ್ಯಕ್ಕೆ ತಡೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.