ADVERTISEMENT

ರಾಕೇಶ್ ಟಿಕಾಯತ್‌ ಮೇಲೆ ಹಲ್ಲೆ: ಸಂವಿಧಾನ ಸಂರಕ್ಷಣಾ ವೇದಿಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಮೇ 2022, 13:15 IST
Last Updated 30 ಮೇ 2022, 13:15 IST
ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿ ಮಸಿ ಎರಚಿರುವುದು – ಪ್ರಜಾವಾಣಿ ಚಿತ್ರ
ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿ ಮಸಿ ಎರಚಿರುವುದು – ಪ್ರಜಾವಾಣಿ ಚಿತ್ರ   

ಗದಗ: ರೈತ ಸಂಘದ ರಾಷ್ಟ್ರೀಯ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ದಾಳಿ ಮಾಡಿದ ಮತೀಯ ಶಕ್ತಿಗಳ ಕೃತ್ಯವನ್ನು ಗದುಗಿನ ಸಂವಿಧಾನ ಸಂರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ.

‘ಭಾರತ ರಕ್ಷಣಾ ವೇದಿಕೆ ಆರ್‌ಎಸ್‌ಎಸ್‌ನ ಒಂದು ಕೃಪಾಪೋಷಿತ ಸಂಘಟನೆ. ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಕೃತ್ಯಗಳಿಂದ ಕರ್ನಾಟಕವನ್ನು ಗೂಂಡಾ ರಾಜ್ಯ ಎಂದು ಘೋಷಣೆ ಮಾಡುವುದಷ್ಟೇ ಬಾಕಿ ಉಳಿದಿದೆ. ಖಂಡನಾರ್ಹ ಕೃತ್ಯಕ್ಕೆ ಕಾರಣವಾದ ದುಷ್ಟಶಕ್ತಿಗಳನ್ನು ತಕ್ಷಣ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದೆ.

‘ರಾಜ್ಯದಲ್ಲಿನ ಇತ್ತೀಚಿನ ದುಷ್ಕೃತ್ಯಗಳು ಗೃಹ ಇಲಾಖೆಯ ವೈಫಲ್ಯತೆಯನ್ನು ಎತ್ತಿತೋರಿಸುತ್ತವೆ. ಇದರ ಹೊಣೆಯನ್ನು ನೇರವಾಗಿ ರಾಜ್ಯದ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರೇ ಹೊರಬೇಕು ಮತ್ತು ರಾಜೀನಾಮೆ ಕೊಡಬೇಕು. ಅವರು ಕರ್ನಾಟಕವನ್ನು ಅತ್ಯಂತ ವ್ಯವಸ್ಥಿತವಾಗಿ ಕೋಮುವಾದದ ಪ್ರಯೋಗಾಲಯವನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯದ ಸರ್ಕಾರದಲ್ಲಿ ಇಂತಹ ಮನಸ್ಸಿರುವ ಮಂತ್ರಿಗಳೇ ಹೆಚ್ಚಿದ್ದಾರೆ’ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆರೋಪ ಮಾಡಿದ್ದಾರೆ.

‘ಆರ್‌ಎಸ್‌ಎಸ್‌ನ ಕೈಗೊಂಬೆಯಂತೆ ವರ್ತಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಹಲ್ಲೇಕೋರ ಸಂಸ್ಕೃತಿ ಬೆಳೆಸುತ್ತಿರುವ ಅನುಮಾನ ದಟ್ಟವಾಗಿದೆ. ದ್ವೇಷದ ನೆಲೆಯಲ್ಲಿ ಜನರನ್ನು ವಿಭಜಿಸುವ ಅವರ ಆಡಳಿತದಿಂದಾಗಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಸಮಾಜವಾದಿಯಾಗಿದ್ದ ಅವರ ತಂದೆ ಹೆಸರು ಹೇಳಿಕೊಳ್ಳುವ ಯೋಗ್ಯತೆಯನ್ನೂ ಅವರು ಕಳೆದುಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಂಘ ಪರಿವಾರದ ಮತೀಯ ಮನಸುಗಳು ಎಷ್ಟೇ ಪ್ರಯತ್ನ ನಡೆಸಿದರೂ ರಾಜ್ಯವನ್ನು ಕೋಮುವಾದದ ಪ್ರಯೋಗಾಲಯ ಮಾಡುವುದಕ್ಕೆ ರಾಜ್ಯದ ಜನ ಅವಕಾಶ ನೀಡಲಾರರು ಎಂಬುದನ್ನು ಸರ್ಕಾರ ನಡೆಸುವ ಮಂತ್ರಿಗಳು ಅರ್ಥಮಾಡಿಕೊಳ್ಳಬೇಕಿದೆ’ ಎಂದು ವೇದಿಕೆಯ ಮುತ್ತು ಬಿಳಿಯಲಿ, ಮುತ್ತು ಹಾಳಕೇರಿ, ಅನಂತ ಕಟ್ಟೀಮನಿ, ಶರೀಫ ಬಿಳಿಯಲಿ, ಆನಂದ ಶಿಂಗಾಡಿ, ರಮೇಶ ಬಾಳಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.