ADVERTISEMENT

ಗದಗ | ಶಿಥಿಲವಾದ ಅಂಗನವಾಡಿ ಕಟ್ಟಡ; ಚಾವಣಿಯಿಂದ ಉದುರುತ್ತಿರುವ ಸಿಮೆಂಟ್‌

ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 28 ಮೇ 2025, 4:09 IST
Last Updated 28 ಮೇ 2025, 4:09 IST
ಶಿರಹಟ್ಟಿ ತಾಲ್ಲೂಕಿನ ಕುಸಲಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಚಾವಣಿಯ ಸಿಮೆಂಟ್ ಪದರು ಉದುರಿ ಬಿದ್ದು, ಕಬ್ಬಿಣದ ಸಲಾಕೆಗಳು ಕಾಣುತ್ತಿದೆ
ಶಿರಹಟ್ಟಿ ತಾಲ್ಲೂಕಿನ ಕುಸಲಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಚಾವಣಿಯ ಸಿಮೆಂಟ್ ಪದರು ಉದುರಿ ಬಿದ್ದು, ಕಬ್ಬಿಣದ ಸಲಾಕೆಗಳು ಕಾಣುತ್ತಿದೆ   

ಶಿರಹಟ್ಟಿ (ಗದಗ ಜಿಲ್ಲೆ): ತಾಲ್ಲೂಕಿನ ಕುಸಲಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಚಾವಣಿಯ ಸಿಮೆಂಟ್ ಉದುರಿ ಬೀಳುತ್ತಿದ್ದು, ಮಕ್ಕಳು ನಿತ್ಯ ಜೀವಭಯದಲ್ಲಿ ಪಾಠ ಆಲಿಸುವ ಸ್ಥಿತಿಯಿದೆ.

ಗ್ರಾಮದ ಅಂಗನವಾಡಿ ಕೇಂದ್ರ–18ನ್ನು ಹಲವು ವರ್ಷಗಳ ಹಿಂದೆಯೇ ಕಟ್ಟಲಾಗಿದ್ದು, ಸಂಪೂರ್ಣ ಶಿಥಿಲಗೊಂಡಿದೆ. ಸದ್ಯ ಸತತ ಮಳೆ ಆಗುತ್ತಿರುವುದರಿಂದ ಚಾವಣಿಯಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ತಂಪು ಹೆಚ್ಚಾಗಿ ಸೋರುವುದರ ಜತೆಗೆ ಸಿಮೆಂಟ್ ಪದರ ಉದುರುತ್ತಿದೆ. ಪಾಠಬೋಧನೆಯ ವೇಳೆ ಮಕ್ಕಳ ತಲೆಯ ಮೇಲೆ ಬಿದ್ದರೆ ಯಾವುದೇ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಪ್ರಸ್ತುತ ಅಂಗನವಾಡಿ ಕೇಂದ್ರದಲ್ಲಿ 40ಕ್ಕೂ ಹೆಚ್ಚು ಮಕ್ಕಳ ಹಾಜರಾತಿ ಇದೆ. ಹಲವು ವರ್ಷಗಳ ಹಿಂದೆಯೇ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ಇದುವರೆಗೂ ತಾತ್ಕಾಲಿಕ ದುರಸ್ತಿ ಮಾಡುತ್ತ, ಸುಣ್ಣ ಬಣ್ಣ ಬಳಿಯುತ್ತ ಬಂದಿದ್ದಾರೆ. ವಿದ್ಯುತ್ ಸಂಪರ್ಕ ಸಹ ಇಲ್ಲ. ಕಗ್ಗತ್ತಲೆಯ ಶಿಶು ಕೇಂದ್ರವಾಗಿರುವ ಈ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಕತ್ತಲಿನ ಭಯವೂ ಆವರಿಸಿಕೊಂಡಿದೆ.

ADVERTISEMENT

ಮೂಲಸೌಕರ್ಯ ವಂಚಿತ ಕೇಂದ್ರ:

ಸರ್ಕಾರ ಮಕ್ಕಳಿಗೆ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೂರೈಕೆ ಮಾಡುತ್ತಿರುವ ಆಹಾರ ಸಾಮಗ್ರಿ ಇಟ್ಟುಕೊಳ್ಳಲು ಅಂಗನವಾಡಿ ಕೇಂದ್ರದಲ್ಲಿ ಸ್ಥಳಾವಕಾಶ ಇಲ್ಲ. ಅಡುಗೆ ಕೋಣೆಯೂ ಇಲ್ಲ. ಅದರಲ್ಲಿಯೇ ಒಂದೆಡೆ ಮೂಲೆಯಲ್ಲಿ ಇಟ್ಟ ರೇಷನ್‌ನಲ್ಲಿ ಸಿಮೆಂಟ್ ಪದರು ಉದುರಿ ಬೀಳುತ್ತಿದ್ದು, ಆಹಾರಪದಾರ್ಥದಲ್ಲಿ ಸಿಮೆಂಟ್, ಉಸುಕು (ಮರಳು) ಮಿಶ್ರಣವಾಗುತ್ತಿದೆ. ಮಕ್ಕಳಿಗೆ ಆಟದ ಮೈದಾನ, ಶೌಚಾಲಯದ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕೇಂದ್ರದ ಸುತ್ತ ಸ್ವಚ್ಛತೆಯ ಕೊರತೆಯೂ ಕಾಡುತ್ತಿದೆ. ಮೂಲಸೌಕರ್ಯಗಳಿಂದ ವಂಚಿತವಾದ ಅಂಗನವಾಡಿ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಸೀದಿ, ದೇವಸ್ಥಾನದಲ್ಲಿ ಪಾಠ:

ಅಂಗನವಾಡಿ ಕೇಂದ್ರವು ಅಪಾಯಕಾರಿ ಸ್ಥಿತಿಯಲ್ಲಿರುವ ಕಾರಣ ಮಕ್ಕಳ ಜೀವ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಗ್ರಾಮಸ್ಥರೇ ಅಂಗನವಾಡಿ ಮಕ್ಕಳನ್ನು ಪಕ್ಕದ ಮಸೀದಿ ಅಥವಾ ದೇವಸ್ಥಾನದಲ್ಲಿ ಕೂರಿಸಿ ಪಾಠ ಮಾಡಲು ವ್ಯವಸ್ಥೆ ಮಾಡಿದ್ದಾರೆ.

ಕುಸಲಾಪುರ ಗ್ರಾಮದ ಅಂಗನವಾಡಿ ಕೇಂದ್ರವನ್ನು ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಲು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯ ಬಾಡಿಗೆ ಕಟ್ಟಡವೊಂದರಲ್ಲಿ ತರಗತಿ ನಡೆಸಲು ಸೂಚಿಸಲಾಗಿದೆ
ಮೃತ್ಯುಂಜಯ ಗುಡ್ಡದಾನ್ವೇರಿ ಸಿಡಿಪಿಒ ಶಿರಹಟ್ಟಿ
ಅಂಗನವಾಡಿಯ ಮೂಲಸೌಕರ್ಯ ಕೊರತೆ ಹಾಗೂ ಕಟ್ಟಡ ಶಿಥಿಲವಾಗಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅನಾಹುತ ಸಂಭವಿಸುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕು
ಗುಡದಪ್ಪ ಭಂಡಾರಿ ಗ್ರಾಮದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.