ADVERTISEMENT

ಎಂಟನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ

ನರಗುಂದ: ಧರಣಿ ವೇದಿಕೆಯಲ್ಲಿ ಕಪ್ಪು ಪಟ್ಟಿ ಧರಿಸಿ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 2:45 IST
Last Updated 17 ಜುಲೈ 2022, 2:45 IST
ನರಗುಂದದ ಮಹದಾಯಿ ಧರಣಿ ಶನಿವಾರ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿ ರೈತಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿದರು
ನರಗುಂದದ ಮಹದಾಯಿ ಧರಣಿ ಶನಿವಾರ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿ ರೈತಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿದರು   

ನರಗುಂದ: ಪಟ್ಟಣದಲ್ಲಿ ಹುತಾತ್ಮ ರೈತ ವೀರಗಲ್ಲಿನ ಸಮೀಪ ರೈತ ಸೇನಾ ಕರ್ನಾಟಕದ ಆಶ್ರಯದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿ ಶನಿವಾರ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು. ಹೋರಾಟ 8ನೇ ವರ್ಷಕ್ಕೆ ಕಾಲಿಟ್ಟರೂ ಮಹದಾಯಿ ಯೋಜನೆ ಅನುಷ್ಠಾನ ಗೊಳ್ಳದಿರುವುದಕ್ಕೆ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ ರೈತರು ಧರಣಿ ವೇದಿಕೆಯಲ್ಲಿ ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೀರೇಶ ಸೊಬರದಮಠ, ಬಂಡಾಯ ನೆಲದಲ್ಲಿ ಕಳೆದ 7 ವಷ೯ಗಳಿಂದ ಮಹದಾಯಿ ನೀರಿಗಾಗಿ ಹೋರಾಟ ಮಾಡಿದರೂ ಸಕಾ೯ರ ಈ ಯೋಜನೆ ಜಾರಿಗೊಳಿಸದೇ ಅನ್ಯಾಯ ಮಾಡಿದೆ. ರೈತ ಸೇನಾ ಸಂಘಟನೆಯ ನೇತೃತ್ವದಲ್ಲಿ 2015 ಜುಲೈ 16 ರಂದು ಪ್ರಾರಂಭವಾದ ಐತಿಹಾಸಿಕ ಹೋರಾಟವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇದು ನಮ್ಮ ದೇಶಕ್ಕೆ‌ ಅವಮಾನಕಾರಿ ಸಂಗತಿ. ಕುಡಿಯುವ ಮತ್ತು ಕೃಷಿ ನೀರಿಗಾಗಿ ಯಾವ ದೇಶದಲ್ಲಿಯೂ ಇಂತಹ‌ ಸುಧೀರ್ಘ ಹೋರಾಟ ನಡೆದಿಲ್ಲ. ರಾಜಕೀಯ ಮೇಲಾಟಗಳಲ್ಲಿ‌ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಯ ರೈತರ ಜೀವನ‌ ಅಯೋಮಯವಾಗುತ್ತಿರುವುದು ಇಂದಿನ ಹೊಲಸು‌ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದರು.

ನ್ಯಾಯಮಂಡಳಿ ತೀರ್ಪು ಬಂದರೂ ಪ್ರಧಾನಿ ಅವರು ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲಿಲ್ಲ. ಸರ್ವೋಚ್ಚ ನ್ಯಾಯಾಲಯವು ಛೀಮಾರಿ ಹಾಕಿದಾಗ ಅಧಿಸೂಚನೆ ಹೊರಡಿಸಿದರು, ಅಂತಿಮವಾಗಿ ಅನ್ನದಾತನಿಗೆ ನ್ಯಾಯ ದೇವತೆಯಿಂದ ಮತ್ತೊಂದು ಹಂತದ ಜಯ ಸಿಕ್ಕಿತು. ಅಧಿಸೂಚನೆ ಹೊರಡಿಸಿ ಮೂರುವರೆ ವರ್ಷ ಗತಿಸಿದರೂ ಕಾಮಗಾರಿ ಪ್ರಾರಂಭವಾಗುತ್ತಿಲ್ಲ, ಇದರಲ್ಲಿಯೂ ರಾಜಕಾರಣದ ಕೆಸರಾಟ ತುಂಬಿ‌ದೆಎಂದುದೂರಿದರು.

ADVERTISEMENT

ಅಂತಿಮವಾಗಿ ರೈತ ಹೋರಾಟಗಾರರು ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸುವ ಸಕಾ೯ರ ಈ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಜು.18ರಂದು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ 2019-2020ರಲ್ಲಿ ತಾಲ್ಲೂಕಿನಲ್ಲಿ ಅತಿವೃಷ್ಟಿ ಸಂಭವಿಸಿದ್ದಾಗ ಸಕಾ೯ರ ಅಂದು ಈ ಜಿಲ್ಲೆಗೆ ₹ 400 ಕೋಟಿ ಪರಿಹಾರ ನೀಡಿತ್ತು, ಆದರೆ ಈ ಪರಿಹಾರ ರೈತರಿಗೆ ಮುಟ್ಟಿಲ್ಲ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಸೊಬರದಮಠ ಎಚ್ಚರಿಕೆ ನೀಡಿದರು.

ರೈತ ಮುಖಂಡ ಎಸ್.ಬಿ ಜೋಗಣ್ಣವರ ಮಾತನಾಡಿ, ಜುಲೈ 21ರ ರೈತ ಹುತ್ಮಾತ ದಿನವನ್ನು ರೈತ ಸೇನಾ ಸಂಘಟನೆ ಹಾಗೂ ರೈತ ಸಂಘದ ನೇತೃತ್ವದಲ್ಲಿ ಪಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ರೈತ ಸಮಾವೇಶ ಮಾಡಿ ಮಹದಾಯಿ ನೀರು ಪಡೆದುಕೊಳ್ಳವುದರ ಬಗ್ಗೆ ನಿಣ೯ಯ ಕೈಗೊಳ್ಳುತ್ತೇವೆ ಎಂದರು.

ಧರಣಿಯಲ್ಲಿ ಎ.ಪಿ.ಪಾಟೀಲ, ರಾಘವೇಂದ್ರ ಗುಜಮಾಗಡಿ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಅಜು೯ನ ಮಾನೆ, ಯಲ್ಲಪ್ಟ ಚಲವಣ್ಣವರ, ವಾಸು ಚವ್ಹಾಣ, ಮಲ್ಲಪ್ಪ ಅಣ್ಣಿಗೇರಿ, ಶಿವಪ್ಪ ಸಾತಣ್ಣವರ, ಅನಸವ್ವ ಶಿಂಧೆ, ನಾಗರತ್ನ ಸವಳಭಾವಿ, ಈರಣ್ಣ ಗಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.