ADVERTISEMENT

ನಿರಂತರ ಮಳೆಗೆ ತುಂಬಿದ ಶಿಂಗಟಾಲೂರು ಬ್ಯಾರೇಜ್‌: ಪ್ರವಾಹ ಭೀತಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 2:43 IST
Last Updated 17 ಜುಲೈ 2022, 2:43 IST
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಬಳಿ ತುಗಭದ್ರಾ ನದಿಯ ಬ್ಯಾರೇಜಿನಿಂದ ಹೊರ ಹೋಗುತ್ತಿರುವ ಅಪಾರ ಪ್ರಮಾಣದ ಹೊಸ ನೀರು
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಬಳಿ ತುಗಭದ್ರಾ ನದಿಯ ಬ್ಯಾರೇಜಿನಿಂದ ಹೊರ ಹೋಗುತ್ತಿರುವ ಅಪಾರ ಪ್ರಮಾಣದ ಹೊಸ ನೀರು   

ಮುಂಡರಗಿ: ಹಲವು ದಿನಗಳಿಂದ ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಹರಿದಿರುವ ತುಂಗಭದ್ರಾ ನದಿಗೆ ಶನಿವಾರ 1,73,961 ಕ್ಯುಸೆಕ್ ಹೊಸ ನೀರು ಹರಿದು ಬಂದಿದೆ.

ಇದರಿಂದಾಗಿ ತಾಲ್ಲೂಕಿನ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಶಿಂಗಟಾಲೂರು, ಹಮ್ಮಿಗಿ, ಬಿದರಳ್ಳಿ ಮೊದಲಾದ ಗ್ರಾಮಗಳ ಮುಂದೆ ತುಂಗಭದ್ರೆ ಉಕ್ಕಿ ಹರಿಯುತ್ತಿದ್ದಾಳೆ. ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿಯ ಬ್ಯಾರೇಜು ಭರ್ತಿಯಾಗಿದ್ದು, 20 ಗೇಟುಗಳ ಮೂಲಕ ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.

ಶಿಂಗಟಾಲೂರ ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ಗುಮ್ಮಗೋಳ, ಬಿದರಳ್ಳಿ ಹಾಗೂ ವಿಠಲಾಪುರ ಗ್ರಾಮಸ್ಥರು ಪ್ರವಾಹದ ಆತಂಕಕ್ಕೆ ಒಳಗಾಗಿದ್ದಾರೆ. ವಿಠಲಾಪುರ ಗ್ರಾಮದ ಮುಂದೆ ತುಂಗಭದ್ರೆಯು ಉಕ್ಕಿ ಹರಿಯುತ್ತಿದ್ದು, ಗ್ರಾಮದ ನದಿ ದಂಡೆಯ ಕೆಲವು ಮನೆಗಳ ಮುಂದೆ ನೀರು ಹರಿಯುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ADVERTISEMENT

ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿಯ ಬ್ಯಾರೇಜಿನಲ್ಲಿ ಗರಿಷ್ಠ 3.12 ಟಿಎಂಸಿ ನೀರನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಿದೆ. ಆದರೆ ಬ್ಯಾರೇಜಿನಲ್ಲಿ ಅಷ್ಟು ಪ್ರಮಾಣದ ನೀರನ್ನು ಸಂಗ್ರಹಿಸಿದರೆ ಗುಮ್ಮಗೋಳ, ಬಿದರಳ್ಳಿ ಹಾಗೂ ವಿಠಲಾಪೂರ ಗ್ರಾಮಗಳಿಗೆ ಧಕ್ಕೆಯಾಗಲಿದೆ.

ಮೇಲಿನಿಂದ ಹರಿದು ಬರುವ ಅಷ್ಟೂ ನೀರನ್ನು ಬ್ಯಾರೇಜಿನ ಗೇಟುಗಳ ಮೂಲಕ ನದಿಗೆ ಬಿಡಲಾಗುತ್ತಿದೆ. ಶನಿವಾರ ಹೊಸಪೇಟೆಯಲ್ಲಿರುವ ತುಂಗಭದ್ರಾ ಡ್ಯಾಂ ಭರ್ತಿಯಾಗಿದೆ ಎಂದು ಹೇಳಲಾಗುತ್ತಿದೆ. ಹೊಸಪೇಟೆ ಡ್ಯಾಂ ತೆರೆದು ಹೆಚ್ಚುವರಿ ನೀರನ್ನು ಹೊರಗೆ ಬಿಡದಿದ್ದರೆ, ನೀರು ಸಂಗ್ರಹವಾಗುತ್ತದೆ. ಇದರಿಂದಾಗಿ ತಾಲ್ಲೂಕಿನ ಮೂರು ಗ್ರಾಮಗಳು ಪ್ರವಾಹಕ್ಕೆ ಈಡಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

***

ಶನಿವಾರ 1,73,961 ಕ್ಯುಸೆಕ್ ನೀರು ಹರಿದು ಬಂದಿದ್ದು, ಅಷ್ಟನ್ನೂ ನದಿಗೆ ಬಿಡಲಾಗುತ್ತಿದೆ. 2,50,000 ಕ್ಯುಸೆಕ್ ನೀರು ಹರಿದು ಬಂದರೆ ಸ್ವಲ್ಪ ತೊಂದರೆಯಾಗುತ್ತದೆ. ಈಗ ಯಾರೂ ಭಯಪಡುವ ಅಗತ್ಯವಿಲ್ಲ

- ಆಶಪ್ಪ ಪೂಜಾರಿ,ತಹಶೀಲ್ದಾರ್ ಮುಂಡರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.