ADVERTISEMENT

ಗದಗ | 'ಇ ಶ್ರಮ: ನೋಂದಣಿ ಮಾಡಿಸಿ'

ವಿಶ್ವ ಪತ್ರಿಕಾ ವಿತರಕರ ದಿನಾಚರಣೆ: ಕಾರ್ಮಿಕ ಅಧಿಕಾರಿ ಶ್ರೀಶೈಲ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 15:42 IST
Last Updated 4 ಸೆಪ್ಟೆಂಬರ್ 2024, 15:42 IST
ಬೆಟಗೇರಿಯ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಬುಧವಾರ ನಡೆದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯನ್ನು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಉದ್ಘಾಟಿಸಿದರು
ಬೆಟಗೇರಿಯ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಬುಧವಾರ ನಡೆದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯನ್ನು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಉದ್ಘಾಟಿಸಿದರು   

ಗದಗ: ‘ಅಸಂಘಟಿತ ವಲಯದ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ನೀಡಲಾಗುತ್ತಿದೆ. ಆಕಸ್ಮಿಕವಾಗಿ ಮರಣ ಹೊಂದಿದರೆ ₹2 ಲಕ್ಷ, ಶಾಶ್ವತ ಅಂಗವಿಕಲರಾದರೆ ಹಾಗೂ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದರೆ ಸರ್ಕಾರ ನೆರವು ನೀಡುತ್ತಿದೆ’ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ತಿಳಿಸಿದರು.

ಬೆಟಗೇರಿಯ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ ಬುಧವಾರ ನಡೆದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ 13ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ 97 ಮಂದಿ ವಿತರಕರು ಈಗಾಗಲೇ ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಉಳಿದ ಅರ್ಹ ಪತ್ರಿಕಾ ವಿತರಕರು ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆಯಬಹುದು’ ಎಂದು ತಿಳಿಸಿದರು.

ADVERTISEMENT

‘ಸುದ್ದಿ ವಾಹಿನಿ, ಯೂಟ್ಯೂಬ್ ಚಾನೆಲ್ ಸೇರಿದಂತೆ ಸಮೂಹ ಮಾಧ್ಯಮಗಳ ಅಬ್ಬರದ ನಡುವೆ ಇಂದಿಗೂ ಪತ್ರಿಕೆಗಳು ಮಹತ್ವ ಕಳೆದುಕೊಂಡಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹಾಗೂ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲು ಪತ್ರಿಕೆಗಳು ನೆರವಾಗಿವೆ. ಪ್ರತಿಯೊಬ್ಬರೂ ಕನ್ನಡ ಹಾಗೂ ಇಂಗ್ಲಿಷ್‌ ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು’ ಎಂದರು.

‘ಹಿರಿಯರು ಬೆಳಿಗ್ಗೆ ಪತ್ರಿಕೆಗಳನ್ನು ಓದದಿದ್ದರೆ ಚಹಾ, ಕಾಫಿ ಸೇರುತ್ತಿರಲಿಲ್ಲ. ಆದರೆ, ಇಂದಿನ ಯುವಕರು ಪತ್ರಿಕೆ ಓದುವುದನ್ನು ಬಿಟ್ಟು ಮೊಬೈಲ್ ಫೋನ್‌, ಟಿವಿಯಂತಹ ಸಮೂಹ ಮಾಧ್ಯಮಗಳ ಪ್ರಭಾವದಿಂದ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಪತ್ರಿಕೆ ವಿತರಣೆ ಮಾಡುತ್ತ ಸಾಧನೆ ಮಾಡಿದ ಸಾಧಕರು ಹಲವರಿದ್ದಾರೆ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆದರ್ಶ ಅಳವಡಿಸಿಕೊಂಡು ಬೆಳವಣಿಗೆ ಹೊಂದಬೇಕು’ ಎಂದು ಹೇಳಿದರು.

ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜೆ ಮಾತನಾಡಿ, ‘ಪತ್ರಿಕಾ ವಿತರಕರ ಇ-ಶ್ರಮ ನೋಂದಣಿಗೆ ಕೆಲ ಅಡತಡೆಗಳಿದ್ದು, ಆಯಾ ಪತ್ರಿಕೆಗಳ ಸಂಪಾದಕರು ನೀಡುವ ಶಿಫಾರಸು ಪತ್ರದ ಅನ್ವಯ ನೋಂದಣಿಯಾಗಬೇಕಿದೆ. ದೇಶದಲ್ಲಿ ಅಸಂಖ್ಯಾತ ಪತ್ರಿಕೆಗಳಿದ್ದು, ಲಕ್ಷಾಂತರ ಪತ್ರಿಕೆ ವಿತರಕರಿದ್ದಾರೆ. ಅಂತಹ ದೊಡ್ಡ ಸಮುದಾಯದ ಕ್ಷೇಮಾಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕಿದೆ’ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ‘ಪತ್ರಿಕಾ ವಿತರಕರನ್ನು ಅಸಂಘಟಿತ ವಲಯಕ್ಕೆ ಸೇರಿಸಿದ ಸರ್ಕಾರ, ಶೈಕ್ಷಣಿಕ ನೆರವು ನೀಡುವ ಯೋಜನೆ ರೂಪಿಸಿಲ್ಲ. ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯಗಳು ಪತ್ರಿಕಾ ವಿತರಕರಿಗೂ ದೊರೆಯಬೇಕು. ಕಿಟ್‌ಗಳನ್ನು ಪೂರೈಸಬೇಕು’ ಎಂದು ಆಗ್ರಹಿಸಿದರು.

ಉದ್ಯಮಿ ಕಿಶನ್ ಮೇರವಾಡೆ ಮಾತನಾಡಿ, ‘ಪತ್ರಿಕೆ ವಿತರಕರು ಮಳೆ, ಗಾಳಿ, ಚಳಿ ಎನ್ನದೇ ಕೆಲಸ ನಿರ್ವಹಿಸುತ್ತಿದ್ದಾರೆ. ಪತ್ರಿಕೆಗಳ ಓದುಗರು ಬಿಲ್ ನೀಡುವಾಗ ಅವರನ್ನು ಪರದಾಡಿಸಬಾರದು’ ಎಂದು ಮನವಿ ಮಾಡಿದರು.

ಮುಕ್ಕಣ್ಣೇಶ್ವರ ಮಠದ ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುನಾಲ್ ಅಬ್ಬಿಗೇರಿ, ರಮೇಶ ಭಜಂತ್ರಿ, ಸಂಘದ ಉಪಾಧ್ಯಕ್ಷ ಈರಣ್ಣ ಮಳೇಕರ, ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕುಬನೂರ, ಶಂಕರಗುರು ಕಂದಗಲ್, ದತ್ತಾತ್ರೇಯ ಮುಂಡರಗಿ, ವಿನಾಯಕ ಬದಿ, ಗಣೇಶ ಶಿರಹಟ್ಟಿ, ಗುರುರಾಜ ಕಲಾಲ, ಕೆ.ಎಸ್.ಹಿರೇಮಠ, ಪ್ರಮೋದ ಜೋಶಿ, ಗಂಗಾಧರ ಮಡ್ಡಿ, ಸಿದ್ಧಲಿಂಗೇಶ ಮಡಿವಾಳ ಇದ್ದರು.

ಗುರುರಾಜ ಕಲಾಲ
ಪತ್ರಿಕೆ ಏಜೆಂಟರ ಮಕ್ಕಳು ಹಾಗೂ ಪತ್ರಿಕೆ ವಿತರಿಸುರುವ ಮಕ್ಕಳ ಶಾಲಾ ಶುಲ್ಕದಲ್ಲಿ ಅರ್ಧದಷ್ಟು ಹಣವನ್ನು ರಾಜ್ಯಸರ್ಕಾರ ಭರಿಸಬೇಕು
ಗುರುರಾಜ ಕಲಾಲ ಪತ್ರಿಕಾ ವಿತರಕ ಗದಗ ಬೇಟಗೆರಿ

‘ವಿದ್ಯಾಭ್ಯಾಸಕ್ಕೆ ಸೌಲಭ್ಯ ಕಲ್ಪಿಸಿ’ ‘ಪತ್ರಿಕಾ ವಿತರಕರಿಗೆ ಕಾರ್ಮಿಕ ಇಲಾಖೆಯಿಂದ ಸದ್ಯ ಮರಣಾನಂತರ ಸೌಲಭ್ಯಗಳಿವೆ. ಅವರು ಜೀವಂತ ಇರುವಾಗಲೇ ಸೌಲಭ್ಯಗಳನ್ನು ಒದಗಿಸಬೇಕು. ವಿತರಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರಬಸಯ್ಯ ವಿರಕ್ತಮಠ ಮನವಿ ಮಾಡಿದರು. ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಕುದರಿಮೋತಿ ಮಾತನಾಡಿ ‘ವಿತರಕರ ಕೆಲಸ ಸಣ್ಣದೆನಿಸಿದರೂ ಶ್ರಮದಾಯಕವಾಗಿದೆ. ಆದರೆ ಅವರಲ್ಲಿ ಸಂಘಟನೆ ಕೊರತೆಯಿದೆ. ಗ್ರಾಮೀಣ ಭಾಗದ ವಿತರಕರು ಸಹಕಾರ ನೀಡಿದಾಗ ಸಂಘ ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.