ADVERTISEMENT

ಗಜೇಂದ್ರಗಡ: ಹೋಳಿ ಹುಣ್ಣಿಮೆ; ರಂಗಿನ ಹಬ್ಬಕ್ಕೆ ಸಿದ್ಧತೆ

ಕಾಲಕಾಲೇಶ್ವರನ ವ್ಯಾಪ್ತಿಯ ಗ್ರಾಮಗಳಲ್ಲಿ ಇಲ್ಲ ಹೋಳಿ ಆಚರಣೆ

ಶ್ರೀಶೈಲ ಎಂ.ಕುಂಬಾರ
Published 2 ಮಾರ್ಚ್ 2026, 7:05 IST
Last Updated 2 ಮಾರ್ಚ್ 2026, 7:05 IST
ಗಜೇಂದ್ರಗಡದಲ್ಲಿ ಮಕ್ಕಳು ಅಣಕು ಶವಯಾತ್ರೆ ಮಾಡುತ್ತ ಅಂಗಡಿಗಳಿಂದ ಚಂದಾ ಸಂಗ್ರಹಿಸುತ್ತಿರುವುದು
ಗಜೇಂದ್ರಗಡದಲ್ಲಿ ಮಕ್ಕಳು ಅಣಕು ಶವಯಾತ್ರೆ ಮಾಡುತ್ತ ಅಂಗಡಿಗಳಿಂದ ಚಂದಾ ಸಂಗ್ರಹಿಸುತ್ತಿರುವುದು   

ಗಜೇಂದ್ರಗಡ: ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ರಂಗುರಂಗಿನ ಬಣ್ಣದ ಹಬ್ಬವಾಗಿರುವ ಹೋಳಿ ಹುಣ್ಣಿಮೆ ಆಚರಣೆಗೆ ತಾಲ್ಲೂಕಿನಲ್ಲಿ ಸಂಭ್ರಮದ ಸಿದ್ದತೆ ನಡೆದಿದೆ.

ವಿವಿಧ ಸಂಘಗಳು ಹಾಗೂ ಓಣಿಗಳ ಜನರು ರತಿ-ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸಲು ಸಿದ್ದತೆ ಆರಂಭಿಸಿದ್ದಾರೆ. ಇದರ ಜತೆಗೆ ಮಕ್ಕಳು ಹಲಗೆ ಬಾರಿಸುತ್ತ, ಬಾಯಿ ಬಡಿದುಕೊಳ್ಳುತ್ತ ಅಣಕು ಶವಯಾತ್ರೆ ನಡೆಸಿ ಚಂದಾ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮಂಗಳವಾರ ರಾತ್ರಿ ಕಾಮದಹನ, ಬುಧವಾರ ಹೋಳಿ ಆಚರಣೆ ನಡೆಯಲಿದೆ. 

ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ 15 ದಿನಗಳ ಹಿಂದಿನಿಂದಲೇ ಹೋಳಿ ಸಂಭ್ರಮ ಗರಿಗೆದರಿದೆ. ಪಟ್ಟಣದಲ್ಲಿ ಮಕ್ಕಳು ಗುಂಪು ಗುಂಪಾಗಿ ಬಾಯಿ ಬಡಿದುಕೊಳ್ಳುತ್ತ, ಅಣಕು ಶವಯಾತ್ರೆ ಮಾಡಿ ಮನೆ ಅಂಗಡಿಗಳಿಂದ ಚಂದಾ ಸಂಗ್ರಹಿಸುತ್ತಿದ್ದಾರೆ. ಪಟ್ಟಣದ ವಾಣಿ ಪೇಟೆಯ ಡೊಳ್ಳಿನವರ ಓಣಿ, ಜಗದಂಬಾ ದೇವಸ್ಥಾನ ಸೇರಿದಂತೆ ವಿವಿಧ ಓಣಿಗಳಲ್ಲಿ ರತಿ-ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ದತೆ ನಡೆದಿದೆ.

ADVERTISEMENT

ಇತ್ತೀಚೆಗೆ ಯುವಕರು ಬಣ್ಣದಾಟ ಆಡಿ, ಸ್ನೇಹಿತರ ಜತೆಗೂಡಿ ಜಮೀನುಗಳಲ್ಲಿ ಬಾಡೂಟ ಸವಿಯುವುದು, ದೂರದ ಗೋವಾ, ದಾಂಡೇಲಿಗೆ ತೆರಳಿ ಸಂಭ್ರಮಿಸುವುದು ಸಾಮಾನ್ಯವಾಗಿದೆ.

ಕಾಲಕಾಲೇಶ್ವರನ ವ್ಯಾಪ್ತಿಯ ಗ್ರಾಮಗಳಲ್ಲಿ ಹೋಳಿ ನಿಷಿದ್ಧ:

‌ಹೋಳಿ ಹುಣ್ಣಿಮೆಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ, ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದಿರುವ ಕಾಲಕಾಲೇಶ್ವರ ಹಾಗೂ ಇದರ ವ್ಯಾಪ್ತಿಗೆ ಬರುವ ಏಳು ಗ್ರಾಮಗಳಲ್ಲಿ ಬಾಯಿ ಬಡಿದುಕೊಳ್ಳುವುದು, ಹಲಗೆ ಬಾರಿಸುವುದು, ಓಕುಳಿ ಆಡುವುದು, ಕಾಮದಹನ ಮಾಡುವುದು ನಿಷಿದ್ಧವಾಗಿದೆ.

ತಾಲ್ಲೂಕಿನ ರಾಜೂರ, ಭೈರಾಪುರ, ಜಿಗೇರಿ, ದಿಂಡೂರ, ಲಕ್ಕಲಕಟ್ಟಿ, ನಾಗೇಂದ್ರಗಡ ಗ್ರಾಮಗಳನ್ನು ಒಳಗೊಂಡ ಕಾಲಕಾಲೇಶ್ವರ ಸುಕ್ಷೇತ್ರ ಒಂದು ಕಾಲದಲ್ಲಿ ರುದ್ರಭೂಮಿ ಆಗಿತ್ತಂತೆ. ಐತಿಹ್ಯದ ಪ್ರಕಾರ ಹಿಂದೆ ಈ ಬೆಟ್ಟದಲ್ಲಿ ಗಜಾಸುರನೆಂಬ ರಾಕ್ಷಸ ನೆಲೆಸಿದ್ದನೆಂದು ಅವನ ಉಪಟಳ ತಾಳಲಾರದೆ ಋಷಿ-ಮುನಿಗಳು ಶಿವನಿಗೆ ಮೊರೆಯಿಟ್ಟಾಗ ಶಿವನು ಆ ರಾಕ್ಷಸನನ್ನು ಸಂಹರಿಸಿ ಅವನ ಚರ್ಮವನ್ನು ಸುತ್ತಿಕೊಂಡಿದ್ದರಿಂದ ಗಜಚರ್ಮಾಂಬರನಾಗಿ ಇಲ್ಲಿಯೇ ನೆಲೆಸಿದನೆಂದು ಹೇಳಲಾಗುತ್ತದೆ.

ಹೀಗಾಗಿ ಇಲ್ಲಿ ರುದ್ರ ನೆಲೆಸಿರುವುದರಿಂದ ಈ ಗ್ರಾಮಗಳಲ್ಲಿ ಹೋಳಿ ಆಚರಣೆ ನಿಷಿದ್ಧ. ಇಂತದ್ದೊಂದು ಸಂಪ್ರದಾಯವನ್ನು ಈ ಗ್ರಾಮಗಳ ಜನರು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದು, ಈ ನಿಯಮ ಮೀರಿದರೆ ರುದ್ರನ ಕೋಪಕ್ಕೆ ಗುರಿಯಾಗಿ ಊರಿಗೆ ಕೇಡಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಈ ಗ್ರಾಮಗಳಲ್ಲಿ ಹೋಳಿ ಹುಣ್ಣಿಮೆ ಆಚರಣೆ ಇರುವುದಿಲ್ಲ. 

ಇದು ಕಾಲಕಾಲೇಶ್ವರನ ರುದ್ರಭೂಮಿ. ಇಲ್ಲಿ ಕಾಮದಹನ ಮಾಡುವಂತಿಲ್ಲ. ಮಾಡಿದರೆ ಆತನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ನಮ್ಮ ಊರಿನಲ್ಲಿ ಯಾರೂ ಹೋಳಿ ಹಬ್ಬ ಆಚರಿಸುವುದಿಲ್ಲ
ಯಲ್ಲಪ್ಪ ಶಂಕ್ರಿ ಕಳಕಪ್ಪ ಹುಡೆದ ರಾಜೂರ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.