ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಗಣೇಶ ಹಬ್ಬ ಕಳೆಗಟ್ಟಿದ್ದು ಶನಿವಾರ ಎಲ್ಲೆಡೆ ಏಕದಂತನ ಮೂರ್ತಿಗಳ ಪ್ರತಿಷ್ಠಾಪನೆ ಸಡಗರ, ಸಂಭ್ರಮದಿಂದ ಜರುಗಿತು.
ಲಕ್ಷ್ಮೇಶ್ವರದಲ್ಲಿ 56 ಕಡೆ ಸೇರಿದಂತೆ ತಾಲ್ಲೂಕಿನಲ್ಲಿ 185 ಕಡೆ ಸಾರ್ವಜನಿಕ ಮೂರ್ತಿಗಳು ಪ್ರತಿಷ್ಠಾಪನೆಗೊಂಡವು.
ಪಟ್ಟಣದ ಬಜಾರ ಹಾವಳಿ ಹನಮಪ್ಪನ ದೇವಸ್ಥಾನದ ಪಕ್ಕದಲ್ಲಿ ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿ ಹಾಗೂ ಸೊಪ್ಪಿನಕೇರಿ ಓಣಿಯ ಯುವಕರ ಸಂಘದ ವತಿಯಿಂದ ಬೃಹತ್ ಗಾತ್ರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಸಕಲ ವಾದ್ಯಗೋಷ್ಠಿಗಳೊಂದಿಗೆ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ತಾಲ್ಲೂಕಿನ ಶಿಗ್ಲಿ ಗ್ರಾಮದ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆ ಮಕ್ಕಳ ಸಾಂಪ್ರದಾಯಕ ನೃತ್ಯದೊಂದಿಗೆ ವಕ್ರತುಂಡನನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು.
ಭಾವೈಕ್ಯತೆ ಮೆರೆದ ಮುಸ್ತಾಕ್ ಕೋಲಕಾರ: ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಮುಸ್ತಾಕ್ ಕೋಲಕಾರ ಎಂಬ ಮುಸ್ಲಿಂ ವ್ಯಕ್ತಿ ತನ್ನ ಮನೆಗೆ ಗಣೇಶ ಮೂರ್ತಿ ತಂದು ಪೂಜಿಸುವುದರ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಮೆರೆದಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.