
ಗದಗ ನಗರದ ಹತ್ತಿಕಾಳು ಕೂಟದಲ್ಲಿ ಶನಿವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು
ಗದಗ: ‘ಈವರೆಗೆ ಮುಖ್ಯಮಂತ್ರಿ ಆದವರು ಲೂಟಿ ಮಾಡುವುದನ್ನು ಬಿಟ್ಟು ಬೇರೆನೂ ಮಾಡಿಲ್ಲ. ಒಮ್ಮೆ ನಮಗೆ ಅವಕಾಶ ಕೊಡಿ, ಕರ್ನಾಟಕದ ಚಿತ್ರಣ ಬದಲಾಗಲಿದೆ. ನಾನು ಪ್ರತಿಜ್ಞೆ ಮಾಡುವೆ. ಜನ ಕೊಟ್ಟ ಅಧಿಕಾರವನ್ನು ಚನ್ಮಮ್ಮ, ಶಿವಾಜಿ ರೀತಿಯ ಆಡಳಿತ ಮಾಡುವೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಹತ್ತಿಕಾಳು ಕೂಟದಲ್ಲಿ ಶನಿವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪ್ರಾಮಾಣಿಕವಾಗಿ ಮತದಾನ ಮಾಡಬೇಕು. ಇಲ್ಲದಿದ್ದರೆ ಹಿಂದೂಗಳು ಉಳಿಯಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಸಚಿವ ಜಮೀರ್ 400 ಜನರಿಗೆ ಉಚಿತ ತರಬೇತಿ ಕೊಟ್ಟರು. ನಾವೆಲ್ಲಾ ಜಾತಿ ಜಾತಿ ಎಂದು ಬಡಿದಾಡಿ ಮತ ಹಾಕಿದರೆ; ಹಿಂದೂಗಳು ಜೀವನ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಣವಾಗಲಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಿಕ್ಕಾಗಲ್ಲ, ಆರ್ಎಸ್ಎಸ್ ನಿಷೇಧ ಮಾಡುವ ಬಗ್ಗೆ ಮಾತಾಡುತ್ತಾರೆ. ಅದೇ ಎಸ್ಡಿಪಿಐನವರಿಗೆ ಯಾವ ಪರವಾನಗಿ ಇದೆ. ಗಣಪತಿ ಪ್ರತಿಷ್ಠಾಪನೆಗೆ ಡಿಜೆ ಪರವಾನಗಿ ಬೇಕು. ಐದು ಬಾರಿ ಆಜಾನ್ ಕೂಗುವುದಕ್ಕೆ ಯಾರು ಪರವಾನಗಿ ಕೊಟ್ಟಿದ್ದಾರೆ’ ಎಂದು ಪ್ರಶ್ನಿಸಿದರು.
‘ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಮೋದಿ. ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರಿಗೆ ದಿಲ್ಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಅವರಿಗೆ ಕಾಂಗ್ರೆಸ್ ಸರ್ಕಾರ ‘ಭಾರತ ರತ್ನ’ ಕೊಡಲಿಲ್ಲ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು.
ಅದಕ್ಕಾಗಿ ನಾವೆಲ್ಲಾ ಒಂದಾಗಬೇಕು. ಸನಾತನ ಹಿಂದೂ ಧರ್ಮ ಇರುವವರೆಗೆ ಸಂವಿಧಾನ ಇರುತ್ತದೆ’ ಎಂದು ಹೇಳಿದರು.
ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಂಚಮಸಾಲಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಜೆಡಿಎಸ್ನಿಂದ ಉಚ್ಛಾಟನೆ ಆಗಿ ಸಿಎಂ ಆದರು. ಯಡಿಯೂರಪ್ಪ ಸಹ ಉಚ್ಛಾಟನೆ ಆದ ಮೇಲೆ ಸಿಎಂ ಆದವರು. ಹೀಗಾಗಿ ನಾನೂ ಸಹ 2028ಕ್ಕೆ ಮುಖ್ಯಮಂತ್ರಿ ಆಗುವುದು ನಿಶ್ಚಿತಬಸನಗೌಡ ಪಾಟೀಲ ಯತ್ನಾಳ ಶಾಸಕ
ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ: ಆಗ್ರಹ
‘ರೈತರಿಗೆ ಸಮಾಜಕ್ಕೆ ಅನುಕೂಲ ಆಗಬೇಕಾದರೆ ಮೊದಲು ರೈತರಿಗೆ ನೀರು ಕೊಡಬೇಕು. ಅವರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆ ಆಗಬೇಕು’ ಎಂದು ಶಾಸಕ ಯತ್ನಾಳ ಹೇಳಿದರು. ‘ರೈತರ ಮಕ್ಕಳಾಗಿದ್ದರೆ ದುಬೈನಲ್ಲಿ ಯಾಕೆ ಆಸ್ತಿ ಮಾಡಿದ್ದಾರೆ. ಕೇವಲ ಒಂದು ದಿನ ಮಲಗಿದರೆ ರೈತರ ಮಕ್ಕಳಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.