ADVERTISEMENT

ಮುಳಗುಂದ | ಗೆಜ್ಜೆಶೇಂಗಾ ರಕ್ಷಣೆಗೆ ರೈತರ ಪರದಾಟ

ನಿರಂತರ ಮಳೆ: ಗ್ರಾಮೀಣ ಭಾಗದ ರಸ್ತೆಗಳು ಕೆಸರುಮಯ, ಬೆಳೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:49 IST
Last Updated 29 ಸೆಪ್ಟೆಂಬರ್ 2025, 6:49 IST
ಮುಳಗುಂದ ಗೆಜ್ಜೆಶೇಂಗಾ ರಕ್ಷಣೆಗೆ ರೈತರು ತಾಡಪತ್ರಿ ಹಾಕಿರುವುದು.
ಮುಳಗುಂದ ಗೆಜ್ಜೆಶೇಂಗಾ ರಕ್ಷಣೆಗೆ ರೈತರು ತಾಡಪತ್ರಿ ಹಾಕಿರುವುದು.   

ಮುಳಗುಂದ : ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಕಟಾವು ಮಾಡಿದ ಗೆಜ್ಜೆ ಶೇಂಗಾ ರಕ್ಷಣೆಗೆ ರೈತರು ನಿತ್ಯ ಹರಸಾಹಸ ಪಡುತ್ತಿದ್ದಾರೆ.

ಗ್ರಾಮೀಣ ಭಾಗದ ಕೆಲ ರಸ್ತೆಗಳು ಮಳೆಯಿಂದ ಸಂಪೂರ್ಣ ಕೆಸರುಮಯವಾಗಿದ್ದು, ವಾಹನ ಸವಾರರು, ಪಾದಾಚಾರಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಅತಿವೃಷ್ಟಿ ಮಳೆಯಿಂದ ಹೆಸರು ಬೆಳೆ ಸಂಪೂರ್ಣ ನಾಶವಾಗಿ ಬಿತ್ತನೆಗೆ ಮಾಡಿದ ಖರ್ಚು ಸಹ ಬಾರದಂತಾಗಿ ರೈತರನ್ನು ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕುವಂತೆ ಮಾಡಿತ್ತು.

ADVERTISEMENT

ಕೆಲ ರೈತರು ಹೆಸರು ಬೆಳೆ ಸಂಪೂರ್ಣವಾಗಿ ನಾಶವಾಗಿದ್ದನ್ನ ಕಟಾವು ಸಹ ಮಾಡದೆ ಹೊಲವನ್ನ ಹರಗಿದ್ದರು. ಈಗ ಮತ್ತೆ ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಗೋವಿಜೋಳ, ಹತ್ತಿ, ಮೆಣಸಿನಕಾಯಿ ಬೆಳೆಗೆ ಹಾನಿಯಾಗಿದೆ. ಕೆಲ ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದು, ಮುಂಗಾರು ಬಿತ್ತನೆ ಮಾಡಿದ ಎಲ್ಲ ಬೆಳೆಗಳು ನಾಶವಾಗುವ ಆತಂಕ ರೈತರಿಗೆ ಎದುರಾಗಿದೆ.

ಗೆಜ್ಜೆ ಶೇಂಗಾ ಕಟಾವು ಹಂತಕ್ಕೆ ಬಂದಿದ್ದು, ಕೆಲ ಭಾಗದಲ್ಲಿ ರೈತರು ಕಟಾವು ಮಾಡಿ ಒಕ್ಕಣೆ ಮಾಡಿ, ರಸ್ತೆ ಸೇರಿದಂತೆ ಖುಲ್ಲಾ ಜಾಗೆಗಳಲ್ಲಿ ತಂದು ಹಾಕಿದ್ದಾರೆ. ಆದರೆ ನಿತ್ಯ ಮಳೆ ಸುರಿಯುತ್ತಿದೆ, ಬಿಸಲಿನ ಮುಖವೇ ಕಾಣದಂತಾಗಿದೆ. ಶೇಂಗಾ ರಕ್ಷಣೆಗೆ ತಾಡಪತ್ರಿ ಹೊದಿಕೆ ಹಾಕಿ ಕಾಯುವಂತಾಗಿದೆ. ಕೆಲ ರೈತರು ಗೆಜ್ಜೆ ಶೇಂಗಾ ಕಿತ್ತು ಯಂತ್ರಕ್ಕೆ ಹಾಕುವ ಮುನ್ನವೆ ಮಳೆ ಶುರುವಾಗಿದೆ, ಇದರಿಂದ ಕಟಾವು ಮಾಡಿ ಹೊಲದಲ್ಲಿಯೇ ಬಿಡಲಾಗಿದ್ದು, ತೇವಾಂಶ ಹೆಚ್ಚಾಗಿ ಮೊಳಕೆ ಒಡೆಯುತ್ತಿವೆ.
ಹೀಗೆ ಮಳೆ ಮುಂದುವರೆದರೆ ಗಾಳಿ, ಬಿಸಲಿಗೆ ಬಿಳದೆ ಶೇಂಗಾ ಕೊಳೆತು ನಾಶವಾಗಲಿದೆ. ಈಗಾಗಲೇ ಹೆಸರು ಬೆಳೆ ನಾಶವಾಗಿ ಆರ್ಥಿಕ ಸಂಕಷ್ಟ ಇದೆ, ಶೇಂಗಾ ಬೆಳೆಯೂ ನಾಶವಾಗದರೆ ರೈತನ ಗತಿ ಅದೋಗತಿಯಾಗಲಿದೆ ಎಂದು ರೈತರಾದ ಗಂಗಪ್ಪ ಸುಂಕಾಪುರ, ದೇವರಾಜ ಸಂಗನಪೇಟಿ, ಮಹಾಂತೇಶ ಗುಂಜಳ ಆತಂಕ ವ್ಯಕ್ತಪಡಿಸಿದರು.
ಹೆಸರು ಬೆಳೆ ನಾಶವಾಗಿ ಕಂಗಾಲಾಗಿದ್ದ ರೈತರನ್ನ ಮತ್ತಷ್ಟೂ ಸಂಕಷ್ಟಕ್ಕೆ ದೂಡುತ್ತಿದೆ. ಗೋವಿನ ಜೋಳ, ಹತ್ತಿ, ಮೆಣಸಿನಕಾಯಿ ಎಲ್ಲ ಬೆಳೆಗಳಿಗೂ ಹಾನಿಯಾಗಿದೆ. ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ, ಬೆಳೆ ಹಾನಿ ಪರಿಹಾರ ನೀಡಬೇಕು. ಬೆಳೆ ವಿಮೆ ತುಂಬಿದ ರೈತರಿಗೆ ಇನ್ಸೂರೇನ್ಸ್‌ ಕಂಪನಿ ಮಧ್ಯಂತರ ಪರಿಹಾರವನ್ನ ಕೂಡಲೇ ರೈತರಿಗೆ ನೀಡಬೇಕು. ಎಂದು ರೈತರು ಆಗ್ರಹಿಸಿದರು.
ಮೋಡ ಕವಿದ ವಾತಾವರಣವಿದ್ದು,ಭಾನುವಾರವು ಜಿಟಿಜಿಟಿ ಮಳೆ, ಕೆಲವೊಮ್ಮೆ ರಭಸವಾಗಿ ಸುರಿಯುತ್ತಿದೆ. ವಿಪರಿತ ಶೀತಗಾಳಿ ಬಿಸುತ್ತಿದೆ, ಜನತೆ ಮನೆಯಿಂದ ಆಚೆ ಬಾರದಂತ ಸ್ಥಿತಿ ನಿರ್ಮಾಣವಾಗಿದೆ.

ಮುಳಗುಂದ ಕುರ್ತಕೋಟಿ ರಸ್ತೆಯ ಹೊಲದಲ್ಲಿ ಗೆಜ್ಜೆಶೇಂಗಾ ಕಟಾವು ಮಾಡಿದ ನಂತರ ಮಳೆಗೆ ಸಿಲುಕಿ ಹಾನಿಯಾಗಿರುವುದನ್ನು ರೈತ ಗುಂಜಳ ತೋರಿಸಿದರು

ಕಟಾವು ಮಾಡಿ ಹೊಲದಲ್ಲಿ ರಾಶಿ

ಬಿತ್ತನೆಯ ಖರ್ಚು ಬಾರದ ಸ್ಥಿತಿ

ಶೇಂಗಾ ರಕ್ಷಣೆಗೆ
ತಾಡಪತ್ರಿ ಹೊದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.