ಗದಗ: ‘ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ದೇಶದ ಏಕತೆ, ಒಗ್ಗಟ್ಟಿಗೆ ಬಹುದೊಡ್ಡ ಕೊಡುಗೆ ನೀಡಿದ ಮಹಾನ್ ನಾಯಕ’ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮ ರಾಷ್ಟ್ರವನ್ನು 21ನೇ ಶತಮಾನಕ್ಕೆ ತೆಗೆದುಕೊಂಡು ಬಂದ ದಿಟ್ಟ ನಾಯಕ ರಾಜೀವ್ ಗಾಂಧಿ. ಇಂದು ನಾವು ಬಳಸುತ್ತಿರುವ ಮೊಬೈಲ್, ಇಂಟರ್ನೆಟ್, ವೈಜ್ಞಾನಿಕ ಆವಿಷ್ಕಾರ
ಗಳು ಇವೆಲ್ಲಕ್ಕೂ ಮೂಲ ಕಾರಣರು ರಾಜೀವ್ಗಾಂಧಿ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.ಅಸ್ಸಾಂ ಒಪ್ಪಂದದ ಮೂಲಕ ರಾಷ್ಟ್ರಸೇವೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ನಾಯಕ ಅವರು’ ಎಂದು ಹೇಳಿದರು.
‘ಮತ್ತೊಬ್ಬ ನಾಯಕರಾದ ದಿ.ದೇವರಾಜ ಅರಸು ಹಿಂದುಳಿದ ವರ್ಗದವರ ಆಶಾಕಿರಣವಾಗಿದ್ದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದರು. ಬಡವರ ಬಗ್ಗೆಅವರಿಗಿದ್ದ ಕಾಳಜಿಯಿಂದಾಗಿ ಗೇಣಿದಾರರು ಭೂ ಒಡೆಯರಾದರು. ಉಳುವವರನ್ನು ಉಳ್ಳವರನ್ನಾಗಿ ಮಾಡಿದರು. ಇಂತಹ ನಾಯಕರನ್ನು ನೆನೆಸುವುದೇ ರೋಮಾಂಚನಕಾರಿ ಅನುಭವ’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಅಶೋಕ ಮಂದಾಲಿ, ಫಾರೂಕ್ ಹುಬ್ಬಳ್ಳಿ, ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು.
----
ಕೋವಿಡ್ ನಿಯಮಗಳು ನಮಗಾಗಿ, ನಮ್ಮವರಿಗಾಗಿ ಜಾರಿಗೊಳಿಸಲಾಗಿದೆ. ರಾಜಕೀಯ ಪಕ್ಷ, ಪಂಗಡ ಎಲ್ಲವನ್ನೂ ಮರೆತು ಪ್ರತಿಯೊಬ್ಬರೂ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು
ಎಚ್.ಕೆ.ಪಾಟೀಲ, ಗದಗ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.