ಶಿರಹಟ್ಟಿ: ಬಡ ಹಾಗೂ ನಿರ್ಗತಿಕ ರೋಗಿಗಳಿಗೆ ಸಕಾಲದಲ್ಲಿ ಶಿಬಿರವನ್ನು ಏರ್ಪಡಿಸಿ ಉಚಿತ ಚಿಕಿತ್ಸೆ ಹಾಗೂ ಔಷಧಿಗಳನ್ನು ವಿತರಿಸುತ್ತಿರುವ ಹುಬ್ಬಳ್ಳಿಯ ಮಾನಸ ಮನೋ ವೈದ್ಯಕೀಯ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಿಕ್ಷಕ ಮಹೇಶ ಮುಳಗುಂದ ಹೇಳಿದರು.
ತಾಲ್ಲೂಕಿನ ಬೆಳ್ಳಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾನಸ ಮನೋ ವೈದ್ಯಕೀಯ ಸಂಸ್ಥೆ ಹಾಗೂ ಸ್ಥಳೀಯ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬದಲಾದ ಜೀವನಶೈಲಿ ಹಾಗೂ ಒತ್ತಡದ ಬದುಕಿನ ಇಂದಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದ್ದು, ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು.
ಪ್ರಸ್ತುತ ಶಿಬಿರದಲ್ಲಿ 150ಕ್ಕೂ ಹೆಚ್ಚು ರೋಗಗಳಿಗೆ ಚಿಕಿತ್ಸೆ ನೀಡಲಾಯಿತು. 15 ದಿನಗಳಿಗೆ ಆಗುವಷ್ಟು ಔಷಧವನ್ನು ಉಚಿತವಾಗಿ ನೀಡಲಾಯಿತು. ಶಿಬಿರ ಏರ್ಪಡಿಸಿದ ವೈದ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮನೋರೋಗ ತಜ್ಞ ಡಾ. ಅಲೋಕ ಕುಲಕರ್ಣಿ, ಶಸ್ತ್ರಚಿಕಿತ್ಸಕ ಡಾ. ಸುನಿಲ ಮಳಗಿ, ಸ್ತ್ರೀ ರೋಗ ತಜ್ಞೆ ಡಾ. ಅದಿತಿ ಕುಲಕರ್ಣಿ, ಶಾಲಾ ಶಿಕ್ಷಕರಾದ ಹಾವೇರಿ, ಹಾವನೂರ, ಬಿ.ವಿ.ಮುಳಗುಂದ, ಸಿದ್ದು ಹಿರೇಮಠ, ದಾದಾಪೀರ, ಪ್ರಮೀಳಾ, ಪ್ರೇಮಾ, ಪೂರ್ಣಿಮಾ, ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.